ಕೂಡಲೇ ಕಾಮಗಾರಿ ಪೂರ್ಣಗೊಳಿಸದಿದ್ದರೆ ಶಿಸ್ತು ಕ್ರಮ: ಸಚಿವ ಕೆ.ವೆಂಕಟೇಶ್

KannadaprabhaNewsNetwork |  
Published : Apr 06, 2026, 01:15 AM IST
52 | Kannada Prabha

ಸಾರಾಂಶ

ಪಿರಿಯಾಪಟ್ಟಣ ತಾಲೂಕಿನ ಪ್ರತಿಯೊಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ರಸಗೊಬ್ಬರ ದಾಸ್ತಾನು ಇರುವಂತೆ ವ್ಯವಸ್ಥೆ ಮಾಡಬೇಕು. ಅಂಗಡಿಗಳಲ್ಲಿ ರಸಗೊಬ್ಬರಕ್ಕೆ ರೈತರು ದುಬಾರಿ ಬೆಲೆ ನೀಡಬೇಕಾಗುತ್ತದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ರಸಗೊಬ್ಬರ ದಾಸ್ತಾನು ಇದ್ದಲ್ಲಿ ರೈತರಿಗೆ ನ್ಯಾಯಯುತ ದರದಲ್ಲಿ ರಸಗೊಬ್ಬರ ದೊರಕಲಿದೆ.

ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ

ವಹಿಸಿಕೊಂಡಿರುವ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸದಿದ್ದರೆ ಅಂಥವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಿ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಶನಿವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಹಲವು ಕಾಮಗಾರಿ ನಡೆಯುತ್ತಿದೆ. ಆದರೆ ಗುತ್ತಿಗೆದಾರರು ಸರಿಯಾಗಿ ಕಾರ್ಯ ನಿರ್ವಹಿಸದೆ ಇರುವುದು ನಮ್ಮ ಗಮನಕ್ಕೆ ಬಂದಿದ್ದು, ಅಂಥವರನ್ನು ಕಪ್ಪುಪಟ್ಟಿಯಲ್ಲಿ ಇರಿಸಿ ಬೇರೆ ಗುತ್ತಿಗೆದಾರರಿಗೆ ಅವಕಾಶ ಮಾಡಿಕೊಡಿ ಎಂದು ಅಧಿಕಾರಿಗಳಿಗೆ ಅವರು ಸೂಚಿಸಿದರು.

ಯುದ್ಧ ಸಂದರ್ಭದಲ್ಲಿ ಡಾಂಬರಿನ ರೇಟು ಹೆಚ್ಚಾಗಿದ್ದು ಗುತ್ತಿಗೆದಾರರು ಕಾಲಾವಕಾಶ ಕೇಳುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆ ಕಾರಣಗಳು ನಮಗೆ ಬೇಕಾಗಿಲ್ಲ. ನಮಗೆ ಕೆಲಸ ಬೇಕು ಎಂದರು.

ತಾಲೂಕಿನ ಪ್ರತಿಯೊಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ರಸಗೊಬ್ಬರ ದಾಸ್ತಾನು ಇರುವಂತೆ ವ್ಯವಸ್ಥೆ ಮಾಡಬೇಕು. ಅಂಗಡಿಗಳಲ್ಲಿ ರಸಗೊಬ್ಬರಕ್ಕೆ ರೈತರು ದುಬಾರಿ ಬೆಲೆ ನೀಡಬೇಕಾಗುತ್ತದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ರಸಗೊಬ್ಬರ ದಾಸ್ತಾನು ಇದ್ದಲ್ಲಿ ರೈತರಿಗೆ ನ್ಯಾಯಯುತ ದರದಲ್ಲಿ ರಸಗೊಬ್ಬರ ದೊರಕಲಿದೆ ಎಂದರು.

ಗ್ರಾಪಂ ಮತ್ತು ಹೋಬಳಿ ಮಟ್ಟದಲ್ಲಿ ರೈತರ ಸಭೆ ನಡೆಸಿ ಸಿರಿ ಧಾನ್ಯಗಳ ಕೃಷಿ ಬಗ್ಗೆ ಮಾಹಿತಿ ನೀಡುವಂತೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಕುಸುಮ ಅವರಿಗೆ ಸೂಚಿಸಿದರು. ಕೃಷಿ ಮತ್ತು ತೋಟಗಾರಿಕಾ ಇಲಾಖೆಯು ರೈತ ಸಂಪರ್ಕ ಕೇಂದ್ರಗಳ ಮೂಲಕ ಸರ್ಕಾರದ ಸಬ್ಸಿಡಿ ದರದಲ್ಲಿ ರೈತರಿಗೆ ಸವಲತ್ತು ವಿತರಿಸುವಾಗ ಸಾರ್ವಜನಿಕ ಜನಪ್ರತಿನಿಧಿಗಳ ಸಮ್ಮುಖದಲ್ಲಿಯೇ ವಿತರಿಸುವಂತೆ ತಿಳಿಸಿದರು.

ತಂಬಾಕಿಗೆ ಸೂಕ್ತ ದರ ದೊರಕದೆ ತಂಬಾಕು ಬೆಳೆಗಾರರು ಹತಾಶರಾಗಿದ್ದು, ರೇಷ್ಮೆ ಬೆಳೆ ಮತ್ತು ಮಾರುಕಟ್ಟೆ ವ್ಯವಸ್ಥೆ ಬಗ್ಗೆ ರೈತರಿಗೆ ಸೂಕ್ತ ತಿಳುವಳಿಕೆ ನೀಡಿದಲ್ಲಿ ತಂಬಾಕು ಬೆಳೆಗಾರರು ರೇಷ್ಮೆ ಬೆಳೆಯತ್ತ ಮುಖ ಮಾಡಲಿದ್ದಾರೆ ಎಂದರು.

2023 - 24 ರಲ್ಲಿ ಬೈ ವೋಲ್ಟೀನ್ ಸಿಎಸ್ಆರ್ ರೇಷ್ಮೆ ಹೈಬ್ರಿಡ್ ತಳಿಗೆ ಪ್ರತಿ ಕೆಜಿ ಗೆ 330 ರಿಂದ 350 ರೂ. ದೊರಕುತ್ತಿತ್ತು. ಈಗ ಪ್ರತಿ ಕೆಜಿಗೆ 850 ರಿಂದ 900 ರೂ.ವರೆಗೂ ದೊರಕುತ್ತಿದ್ದು ಉತ್ತಮ ಲಾಭದಾಯಕವಾದ ಕೃಷಿಯಾಗಿದೆ. ತಂಬಾಕಿಗೆ ಪರ್ಯಾಯ ವಾಣಿಜ್ಯ ಬೆಳೆಯಾಗಿ ರೇಷ್ಮೆ ಬೆಳೆಯುವತ್ತ ರೈತರು ಮುಂದಾಗಬೇಕಿದೆ ಎಂದರು.

ತೋಟಗಾರಿಕಾ ಇಲಾಖೆಯ ಫಲಾನುಭವಿಗಳ ಬಗ್ಗೆ ಸಮರ್ಪಕ ಮಾಹಿತಿ ನೀಡುವಲ್ಲಿ ವಿಫಲರಾದ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಗುರುಸ್ವಾಮಿ ಮತ್ತು ತೋಟಗಾರಿಕೆ ಅಧಿಕಾರಿ ಪ್ರಸಾದ್ ವಿರುದ್ಧ ಗರಂ ಆದ ಸಚಿವರು ಕೆಡಿಪಿ ಸಭೆಗೆ ಬರುವಾಗ ಸೂಕ್ತ ಮಾಹಿತಿ ತರಬೇಕು ಎನ್ನುವ ಪರಿಜ್ಞಾನ ನಿಮಗಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.

ರಾಗಿ ಖರೀದಿ ಕೇಂದ್ರದ ಬಗ್ಗೆ ಆಹಾರ ಇಲಾಖೆ ಶಿರಸ್ತೇದಾರ್ ಸಣ್ಣಸ್ವಾಮಿ ರಿಂದ ಮಾಹಿತಿ ಪಡೆದ ಸಚಿವರು ತಾಲೂಕಿನಲ್ಲಿ 3.18 ಲಕ್ಷ ಕ್ವಿಂಟಲ್ ರಾಗಿ ಮಾರಾಟ ಮಾಡುವುದಾಗಿ ರೈತರು ನೋಂದಣಿ ಮಾಡಿಸಿದ್ದಾರೆ. ಆದರೆ ಇದುವರೆಗೂ ಶೇ. 50ರಷ್ಟು ರಾಗಿ ಮಾರಾಟವಾಗಿಲ್ಲ ಯಾಕೆ ಎಂದು ಪ್ರಶ್ನಿಸಿದರು.

ಖಾಸಗಿ ರಾಗಿ ಖರೀದಿದಾರರು ನೋಂದಣಿ ಮಾಡಿಕೊಂಡಿರುವ ರೈತರ ಹೆಸರಿನಲ್ಲಿ ರಾಗಿ ಮಾರಾಟ ಮಾಡುತ್ತಿರುವುದಾಗಿ ದೂರು ಕೇಳಿ ಬರುತ್ತಿದ್ದು, ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ತಾಲೂಕಿನ ರಾವಂದೂರು ಮತ್ತು ಹಾರನಹಳ್ಳಿಗಳಲ್ಲಿ ಸೂಕ್ತ ಸರ್ಕಾರಿ ಜಾಗ ಗುರುತಿಸಿ ಅಲ್ಲಿ ಮಾರುಕಟ್ಟೆ ಯಾರ್ಡ್ ಮತ್ತು ಗೋದಾಮು ನಿರ್ಮಿಸಲು ಪರಿಶೀಲಿಸುವಂತೆ ತಹಸೀಲ್ದಾರ್ ನಿಸರ್ಗಪ್ರಿಯ ಅವರಿಗೆ ಸೂಚಿಸಿದರು.

ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ಗ್ಯಾಸ್ ಸಿಲೆಂಡರ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಕ್ರಮವಹಿಸಿ ಹಾಗೂ ಹಾಸ್ಟೆಲ್ ಗಳು, ಅಂಗನವಾಡಿ ಕೇಂದ್ರಗಳು ಮತ್ತು ಆಸ್ಪತ್ರೆಗಳಲ್ಲಿ ಗ್ಯಾಸ್ ಸಿಲೆಂಡರ್ ಕೊರತೆ ಉಂಟಾಗದಂತೆ ಎಚ್ಚರವಹಿಸಿ ಎಂದು ಆಹಾರ ಇಲಾಖೆ ಶಿರಸ್ತೇದಾರ್ ಸಣ್ಣಸ್ವಾಮಿ ಅವರಿಗೆ ಸೂಚಿಸಿದರು.

ಈ ವೇಳೆ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಅರಣ್ಯ ಇಲಾಖೆಯ ಡಿಸಿಎಫ್ ಕಿರುತಂಬನ್, ತಾಪಂ ಇಒ ಡಿ.ಬಿ. ಸುನಿಲ್ ಕುಮಾರ್, ತಹಸೀಲ್ದಾರ್ ನಿಸರ್ಗ ಪ್ರಿಯಾ, ವಲಯ ಅರಣ್ಯ ಅಧಿಕಾರಿ ಪದ್ಮಶ್ರೀ ನಂಜಪ್ಪ. ಸಿಡಿಪಿಒ ವೀಣಾ, ಎಂಜಿನಿಯರ್‌ದಿನೇಶ್, ರಕ್ಷಿತ್, ಗೋಕುಲ್, ಮಲ್ಲಿಕಾರ್ಜುನ, ಲವ, ಸೈಜನ್ ಪೀಟರ್, ಕೀರ್ತನ್ ಪ್ರಭು, ವಿಜಯ್, ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಕೃಷ್ಣೇಗೌಡ, ಕೆಡಿಪಿ ಸಮಿತಿ ಸದಸ್ಯೆ ಕೆ.ಆರ್. ನಿರೂಪಾ, ಲಕ್ಷ್ಮೀನಾರಾಯಣ, ಮಹಮ್ಮದ್ ಶಫಿ, ಶೇಖರ್, ಮಹದೇವ್ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಬೂಜಿ ಭಾರತ ರಾಜಕಾರಣದಲ್ಲಿ ಪ್ರಾತಃ ಸ್ಮರಣೀಯರು
ಶೀಘ್ರ ಬಾಬು ಜಗಜೀವನರಾಮ್‌ ಭವನ ಕಾಮಗಾರಿ ಪೂರ್ಣ