ಚನ್ನಪಟ್ಟಣ: ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಪರಿಶ್ರಮ ಮತ್ತು ಚಿಂತನೆಯೊಂದಿಗೆ ಉನ್ನತ ಗುರಿ ಸಾಧಿಸಬೇಕು ಎಂದು ನಗರಸಭೆ ಅಧ್ಯಕ್ಷ ಬಿ.ಎಂ.ನಾಗೇಶ್ ತಿಳಿಸಿದರು.
ರೋಟರಿ ಸಂಸ್ಥೆ ಸರ್ವತೋಮುಖ ಬೆಳವಣಿಗೆಗೆ ನಿರಂತರ ಶ್ರಮಿಸುತ್ತಿದೆ. ವಿದ್ಯಾಭ್ಯಾಸ ನಂತರದಲ್ಲಿ ಮುಂದೇನು ಮಾಡಬೇಕು ಎನ್ನುವುದಕ್ಕೆ ದಿಶಾ ೨.೦ ಕಾರ್ಯಕ್ರಮ ಸಹಕಾರಿಯಾಗಲಿದೆ. ಇದನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ರೋಟರಿ ಟಾಯ್ಸ್ ಸಿಟಿ ಅಧ್ಯಕ್ಷ ಸಂತೋಷ್ ಪಾಪಣ್ಣ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಅವಕಾಶ ಪಡೆದುಕೊಳ್ಳಲು ಪ್ರತಿಭೆ ಬಹಳ ಮುಖ್ಯ. ಜ್ಞಾನವಂತರಾಗಲು ವೈಯಕ್ತಿಕ ಕೊರತೆಗಳು ಮುಖ್ಯವಲ್ಲ, ಇಚ್ಛಾಶಕ್ತಿ ಮುಖ್ಯ. ಆಧುನಿಕ ಸಮಾಜದ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಸಮರ್ಥರಾಗಬೇಕು. ಭವಿಷ್ಯ ಉತ್ತಮವಾಗಲು ನಿರಂತರ ಪರಿಶ್ರಮದ ಅವಶ್ಯಕತೆ ಇದೆ. ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳ ಜೀವನ ತಂತ್ರಜ್ಞಾನ ಮತ್ತು ಜಾಗತೀಕರಣದ ಪ್ರಭಾವದಿಂದ ಸಂಪೂರ್ಣವಾಗಿ ಬದಲಾಗಿದೆ. ಇಂದಿನ ವಿದ್ಯಾರ್ಥಿಗಳು, ಇಡೀ ಜಗತ್ತನ್ನೇ ತಮ್ಮ ಜ್ಞಾನದ ಕೇಂದ್ರವಾಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಕಾರ್ಯದರ್ಶಿ ರೋ.ಆದರ್ಶಕುಮಾರ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಕೇವಲ ಓದಿಗೆ ಸೀಮಿತವಾಗಿರದೆ ಆಧುನಿಕತೆಯ ಯುಗದಲ್ಲಿ ಮುಂದಿನ ಗುರಿಯನ್ನು ಭದ್ರಪಡಿಸಿಕೊಂಡು ಅದರತ್ತ ಸಾಗಬೇಕು ಎಂದು ತಿಳಿಸಿದರು.
ಪೊಟೋ೧೯ಸಿಪಿಟಿ೫: ಚನ್ನಪಟ್ಟಣದ ಜ್ಞಾನಸರೋವರ ಪದವಿ ಫೂರ್ವ ಕಾಲೇಜು ಆವರಣದಲ್ಲಿ ದಿಶಾ ೨.೦ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸ ಮತ್ತು ಸಮಾಲೋಚನಾ ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷ ನಾಗೇಶ್ ಉದ್ಘಾಟಿಸಿದರು.