ಎಸ್.ಎಸ್.ಎಲ್.ಸಿ, ಪಿಯುಸಿ ಪ್ರತಿಭಾನ್ವಿತ ಸ್ಕೌಟ್ಸ್-ಗೈಡ್ಸ್ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮಕ್ಕಳು ವಿದ್ಯಾರ್ಥಿದೆಸೆಯಿಂದಲೇ ಶಿಸ್ತುಬದ್ಧ ಜೀವನ, ಸಾಮಾಜಿಕ ಕಳಕಳಿ ಅಳವಡಿಸಿಕೊಳ್ಳಬೇಕು. ಸಮಾಜವನ್ನು ಎದುರಿಸುವ ಶಕ್ತಿಯನ್ನು ಮೈಗೂಡಿಸಿಕೊಂಡಲ್ಲಿ ಜಗತ್ತಿನ ಪ್ರೀತಿ ಸಂಪಾದಿಸಬಹುದು ಎಂದು ನಿವೃತ್ತ ಉಪನ್ಯಾಸಕ ಬಿ.ಟಿ.ತಿಪ್ಪೇರುದ್ರಪ್ಪ ಹೇಳಿದರು.
ನಗರದ ಜಿಲ್ಲಾ ಸ್ಕೌಟ್ಸ್ ಭವನದಲ್ಲಿ ನಡೆದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ೨೦೨೪-೨೫ನೇ ಸಾಲಿನ ಜಿಲ್ಲಾ ಮಟ್ಟದ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಪ್ರತಿಭಾನ್ವಿತ ಸ್ಕೌಟ್ಸ್-ಗೈಡ್ಸ್ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಪ್ರತಿಭೆ ಮಕ್ಕಳಲ್ಲಿ ಜನನದಿಂದಲೇ ಅಡಗಿರುತ್ತದೆ. ಅನಾವರಣಗೊಳಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಹೀಗಾಗಿ ಎಳೆ ವಯಸ್ಸಿ ನಿಂದಲೇ ಮಕ್ಕಳಿಗೆ ಆಸಕ್ತಿ ಹೊಂದಿದ ವಿಷಯಕ್ಕೆ ಪ್ರೋತ್ಸಾಹಿಸುವ ಕೆಲಸಕ್ಕೆ ಶಿಕ್ಷಕರು ಮಾಡಬೇಕು. ಆ ನಿಟ್ಟಿನಲ್ಲಿ ಸ್ಕೌಟ್ಸ್-ಗೈಡ್ಸ್ ಸಂಸ್ಥೆ ಮಕ್ಕಳಲ್ಲಿ ದೇಶಪ್ರೇಮದ ಬೀಜ ಬಿತ್ತುತ್ತಿರುವುದು ಶ್ಲಾಘನೀಯ ಕೆಲಸ ಎಂದರು.ವಿದ್ಯಾರ್ಥಿಗಳು ಅಂಕ ಗಳಿಕೆಗಷ್ಟೇ ಸೀಮಿತರಾಗಬಾರದು. ಪ್ರಪಂಚದ ಆಳವನ್ನು ಅಧ್ಯಯನ ನಡೆಸಬೇಕಿದೆ. ಪ್ರತಿ ಮಕ್ಕಳಲ್ಲಿ ಕೌಶಲ್ಯತೆ, ಜಾಣ್ಮೆಯಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಂಡು ಸಾಗುವ ನಿಟ್ಟಿನಲ್ಲಿ ಮಕ್ಕಳು ಪ್ರಯತ್ನಿಸಬೇಕು. ಕಠಿಣ ಪರಿಶ್ರಮ ದಿಂದಲೇ ಇಂದು ದೇಶದ ಅನೇಕ ಮಹಾನೀಯರು ಜಗತ್ತಿನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಸಲಹೆ ಮಾಡಿದರು. ಆಧುನಿಕ ಜಗತ್ತಿನಲ್ಲಿ ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು. ಶಿಸ್ತು, ಸಮಯಪ್ರಜ್ಞೆ, ವಿನಯತೆ, ವಿದೇಯತೆ ಹಾಗೂ ಸದಾ ಒಳ್ಳೆಯ ಕಾರ್ಯಕ್ಕೆ ಬೆಂಬಲಿಸುವ ಪರಿಪಾಠ ಬೋಧಿಸಿದಾಗ ಸಮಾಜದಲ್ಲಿ ಸನ್ನಡತೆಯ ವ್ಯಕ್ತಿತ್ವ ರೂಪು ಗೊಳ್ಳಲು ಸಾಧ್ಯ. ಜೊತೆಗೆ ಮಕ್ಕಳು ಏಕಮಾತ್ರ ಸಂಕಲ್ಪದೊಂದಿಗೆ ಜೀವನ ರೂಪಿಸಿಕೊಳ್ಳಬೇಕು ಎಂದರು.ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಸಂಪಾದಿಸುವ ಮೊದಲು ಸಹನೆ, ತಾಳ್ಮೆ ಯಥೇಚ್ಚವಾಗಿ ತುಂಬಿರ ಬೇಕು. ಅಹಂಕಾರ, ಅಸಡ್ಡೆ ಅಥವಾ ಸಮಯ ಪಾಲಿಸದೇ ಕಾಲಕಳೆದರೆ ವಿದ್ಯಾರ್ಥಿ ಬದುಕು ದುಸ್ತರವಾಗುವುದರಲ್ಲಿ ಸಂಶಯವಿಲ್ಲ. ಹೀಗಾಗಿ ಶಿಸ್ತುಬದ್ಧ ಜೀವನ, ಎಲ್ಲರನ್ನು ಸ್ನೇಹ-ಪ್ರೀತಿಯಿಂದ ಗಳಿಸಲು ಪ್ರಯತ್ನಿಸಬೇಕು ಎಂದು ತಿಳಿಸಿದರು.ಜಿಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರನಾಯ್ಕ್ ಮಾತನಾಡಿ ಮಕ್ಕಳಲ್ಲಿ ಮೊಬೈಲ್ ಹಾವಳಿ ಹೆಚ್ಚು ಆವರಿಸಿಕೊಂಡಿದೆ. ತಲೆತಗ್ಗಿಸಿ ಪುಸ್ತಕ ಓದಿದರೆ, ಭವಿಷ್ಯದಲ್ಲಿ ತಲೆಎತ್ತುವಂತೆ ಮಾಡುತ್ತದೆ. ಅದೇ ಮೊಬೈಲ್ ದಾಸರಾದರೆ ಜೀವನಮೂರ್ತಿ ತಲೆಬಗ್ಗಿಸಿಕೊಂಡೇ ಇರಬೇಕಾಗುತ್ತದೆ ಎಂದು ಎಚ್ಚರಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಎಂ. ಎನ್.ಷಡಕ್ಷರಿ ಯುವ ಜನರು ದೈಹಿಕವಾಗಿ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕವಾಗಿ ಅಭಿವೃದ್ಧಿ ಹೊಂದಲು ಸ್ಕೌಟ್ಸ್ ಮತ್ತು ಗೈಡ್ಸ್ ಸಹಾಯ ಮಾಡುವ ಜೊತೆಗೆ ನಾಯಕತ್ವ ಕೌಶಲ್ಯ ಅಭಿವೃದ್ಧಿ ಪಡಿಸುತ್ತದೆ ಎಂದು ತಿಳಿಸಿದರು.ಇದೇ ವೇಳೆ ಹನ್ನೊಂದು ಶಾಲೆಗಳಿಂದ ಸುಮಾರು ೭೦ಕ್ಕೂ ಹೆಚ್ಚು ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿ ಗಳು ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಗಳಿಸಿದವರಿಗೆ ಅಭಿನಂದನೆ, ನೆನಪಿನ ಕಾಣಿಕೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ನೀಲಕಂಠ ಚಾರ್, ತರಬೇತಿ ಆಯುಕ್ತೆ ಸಂಧ್ಯಾರಾಣಿ, ಜಿಲ್ಲಾ ಸಂಘಟಕ ಕಿರಣ್ಕುಮಾರ್, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿ ತರಿದ್ದರು.