ಸಂಡೂರು ಕಾಡಿನ ಎತ್ತರದ ಗುಹೆಗಳಲ್ಲಿ ಶಿಲಾಯುಗದ ಮಾನವನ ನೆಲೆಯ ಶೋಧ

KannadaprabhaNewsNetwork |  
Published : Jul 25, 2024, 01:22 AM IST
ಸಂಡೂರಿನ ಕಾಡಿನ ಎತ್ತರದ ಗುಹೆಗಳಲ್ಲಿ ಶಿಲಾಯುಗದ ಮಾನವರು ಬಳಸುತ್ತಿದ್ದ ಸೂಕ್ಷ್ಮ ಶಿಲಾಉಪಕರಣಗಳು ಪತ್ತೆಯಾಗಿವೆ.  | Kannada Prabha

ಸಾರಾಂಶ

ಇಲ್ಲಿ ದೊರೆತ ಕೆಲವು ಸೂಕ್ಷ್ಮ ಶಿಲಾ ಉಪಕರಣಗಳು ಈಗಾಗಲೇ ತಿಳಿದಿರುವ ಭಾರತದ ಮಧ್ಯಶಿಲಾಯುಗದ ಶಿಲಾ ಉಪಕರಣಗಳನ್ನು ಹೋಲುತ್ತಿದೆ.

ಬಳ್ಳಾರಿ: ಜಿಲ್ಲೆಯ ಸಂಡೂರಿನ ದಟ್ಟ ಕಾಡಿನಲ್ಲಿ ಸಮುದ್ರ ಮಟ್ಟಕ್ಕಿಂತ ಅತಿ ಎತ್ತರದ ಗುಹೆಗಳಲ್ಲಿ ಶಿಲಾಯುಗದ ಮಾನವನ ನೆಲೆಯ ಕುರಿತು ತಜ್ಞರ ಶೋಧನೆಯಿಂದ ಕಂಡುಬಂದಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ ತಿಳಿಸಿದ್ದಾರೆ.

ಸಂಡೂರು ಪದರ ಶಿಲೆಯ ಪಟ್ಟಿಯ ದಟ್ಟ ಎಲೆ ಉದುರುವ ಕಾಡಿನ 1 ಸಾವಿರ ಚ.ಕಿ.ಮೀ. ವ್ಯಾಪ್ತಿಯ ಪ್ರದೇಶದಲ್ಲಿ ಪ್ರಾಗೈತಿಹಾಸಿಕ ನೆಲೆಗಳನ್ನು ಹುಡುಕುವುದು ಒಂದು ದೊಡ್ಡ ಸವಾಲಾಗಿದ್ದು, ಸಂಡೂರು ಬೆಟ್ಟಗಳಲ್ಲಿರುವ ನವಲೂಟಿ ಗುಹೆಯಲ್ಲಿ ಒಂದು ಶೋಧನೆಯಲ್ಲಿ ದೊರೆತ ಶಿಲಾಯುಗದ ಮಾನವನ ಕುರುಹುಗಳಾದ ಸೂಕ್ಷ್ಮ ಶಿಲಾ ಆಯುಧಗಳು ಬಹುಶಃ 10 ಸಾವಿರ ವರ್ಷಗಳ ಹಿಂದೆ ಜೀವನಾಧಾರಕ್ಕೆ ಬೇಕಾದ ಸಂಪನ್ಮೂಲಗಳ ಹುಡುಕಾಟದಲ್ಲಿ ಶಿಲಾಯುಗದ ಮಾನವ ಬಂದಾಗಿನ ಕಾಲದ್ದಾಗಿರಬಹುದು ಎಂದು ಗುರುತಿಸಲಾಗಿದೆ.

ಬಳ್ಳಾರಿ ಹೆರಿಟೇಜ್ ಟ್ರಸ್ಟ್ ಹಾಗೂ ಬಳ್ಳಾರಿಯ ರಾಬರ್ಟ್ ಬ್ರೂಸ್ ಫೂಟ್ ಸಂಗನಕಲ್ಲು ಪ್ರಾಗೈತಿಹಾಸ ವಸ್ತು ಸಂಗ್ರಹಾಲಯದ ಸದಸ್ಯರು ಮತ್ತು ಖ್ಯಾತ ಪ್ರಾಗೈತಿಹಾಸ ತಜ್ಞರಾದ ಡಾ.ರವಿ ಕೋರಿಶೆಟ್ಟರ್, ಡಾ.ಸಮದ್ ಕೊಟ್ಟೂರು ಮಾರ್ಗದರ್ಶನದಲ್ಲಿ ಕಳೆದ ಜೂನ್ ಕೊನೆಯ ವಾರದಲ್ಲಿ ಶೋಧಯಾನ ಕೈಗೊಂಡು ನವಲೂಟಿಯ ಗುಹೆಗೆ ಭೇಟಿ ನೀಡಿದ್ದರು. ಈ ತಂಡದಲ್ಲಿ ಸಂತೋಷ್ ಮಾರ್ಟಿನ್, ಅಹಿರಾಜ್ ಎಂ. ಹಾಗೂ ಕೆಲವು ಪ್ರಾಗೈತಿಹಾಸದ ವಿದ್ಯಾರ್ಥಿಗಳೂ ಭಾಗವಹಿಸಿದ್ದರು. ಈ ತಂಡಕ್ಕೆ ಶಿಲಾಯುಗದಲ್ಲಿ ನವಲೂಟಿ ಗುಹೆಯಲ್ಲಿ ಮಾನವ ನೆಲೆಸಿದ್ದ ಎಂಬುದಕ್ಕೆ ಅದ್ಭುತವಾದ ಪುರಾವೆಗಳು ದೊರಕಿವೆ ಎಂದು ಅವರು ಹೇಳಿದ್ದಾರೆ.

ಇಲ್ಲಿ ದೊರೆತ ಕೆಲವು ಸೂಕ್ಷ್ಮ ಶಿಲಾ ಉಪಕರಣಗಳು ಈಗಾಗಲೇ ತಿಳಿದಿರುವ ಭಾರತದ ಮಧ್ಯಶಿಲಾಯುಗದ ಶಿಲಾ ಉಪಕರಣಗಳನ್ನು ಹೋಲುತ್ತಿದ್ದು, ದೊರೆತ ಮೂಳೆಗಳು ಸಾಕು ಪ್ರಾಣಿಗಳಾದ ದನ, ಮೇಕೆಗಳದ್ದಾಗಿವೆ ಎಂದು ತಿಳಿದು ಬಂದಿದೆ. ಆದರೆ, ಈ ನಿರ್ಧಾರ ತಾತ್ಕಾಲಿಕವಾಗಿದ್ದು, ದೊರೆತ ಸೂಕ್ಷ್ಮ ಶಿಲಾ ಉಪಕರಣಗಳ ನಿಖರವಾದ ಕಾಲವನ್ನು ಮತ್ತು ಅವುಗಳ ಹೆಚ್ಚಿನ ವಿವರವನ್ನು ಸುದೀರ್ಘ ವೈಜ್ಞಾನಿಕ ಸಂಶೋಧನೆಯಿಂದ ತಿಳಿಯಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಅಭಿಪ್ರಾಯಪಟ್ಟಿದ್ದಾರೆ.

19ನೇ ಶತಮಾನದ ಉತ್ತರಾರ್ಧದಿಂದ ಭೂವಿಜ್ಞಾನಿಗಳು ಹಾಗೂ ನಿಸರ್ಗ ಪ್ರೇಮಿಗಳು ಸಂಡೂರಿನ ಕಾಡುಗಳಲ್ಲಿ ಅನೇಕ ವಿಸ್ಮಯಗಳ ಶೋಧನೆಯಲ್ಲಿ ತೊಡಗಿದ್ದಾರೆ. ಅವರ ಶೋಧಯಾನವು ಈ ಪ್ರದೇಶದ ಜೀವ ವೈವಿಧ್ಯ, ಭೂವೈಜ್ಞಾನಿಕ ಇತಿಹಾಸ ಹಾಗೂ ಆರ್ಥಿಕ ಸಂಭಾವ್ಯಗಳನ್ನು ಅನಾವರಣ ಮಾಡುವುದರಲ್ಲಿ ಕೇಂದ್ರೀಕರಿಸಿತ್ತು.

ಸಂಶೋಧನೆಗಳಿಂದಾಗಿ ಇಡೀ ದಕ್ಷಿಣ ಭಾರತದಲ್ಲೇ ಸಮುದ್ರ ಮಟ್ಟದಿಂದ ಅತಿ ಎತ್ತರದಲ್ಲಿ ದೊರೆತ ಆದಿಮಾನವನ ನೆಲೆ ಇದು ಎಂದು ತಿಳಿದುಬಂದಿದೆ. ಇಂತಹ ಗುಹೆಗಳು ಶ್ರೀಲಂಕಾದಲ್ಲಿ (ಸಮುದ್ರ ಮಟ್ಟಕ್ಕಿಂತ 450 ಮೀ. ಎತ್ತರ) ಕಂಡು ಬಂದಿದ್ದು, ಅವು 50 ಸಾವಿರ ವರ್ಷಗಳಷ್ಟು ಹಿಂದೆಯೇ ಆದಿಮಾನವನ ನೆಲೆಯಾಗಿದ್ದು, ಮಳೆಕಾಡುಗಳ ಪರಿಸರದಲ್ಲಿ ಮಾನವ ತನ್ನ ನೆಲೆಯನ್ನು ಸ್ಥಾಪಿಸಿದ ಜಾಣ್ಮೆಯನ್ನು ಸೂಚಿಸುತ್ತದೆ.

ಉತ್ತರ ಭಾರತದ ತೇವಭರಿತ ಕಾಡುಗಳ ಗುಹೆಗಳು ನವಶಿಲಾಯುಗದ ಕಾಲದಾಗಿದೆ. ನವಲೂಟಿ ಗುಹೆಗಳಿಗಿಂತ ಅವು ಅಷ್ಟೇನೂ ಎತ್ತರದವಲ್ಲದ (ಸಮುದ್ರ ಮಟ್ಟಕ್ಕಿಂತ 300 ಮೀ. ಎತ್ತರ) ಗುಹೆಗಳಾಗಿವೆ. ಆದಾಗ್ಯೂ, ದಕ್ಷಿಣ ಭಾರತದ ಈ ಗುಹೆ ಅತ್ಯಂತ ವಿಶಿಷ್ಟ ನೆಲೆಯಾಗಿದೆ. ಬಹುಶಾಸ್ತ್ರೀಯ ಸಂಶೋಧನೆ ಹಾಗೂ ರೇಡಿಯೋಮೆಟ್ರಿಕ್ ವಿಧಾನದಿಂದ ಕಾಲವನ್ನು ಪತ್ತೆ ಮಾಡುವಂತಹ ವೈಜ್ಞಾನಿಕ ಸಂಶೋಧನೆಯನ್ನು ಕೈಗೊಳ್ಳುವ ತುರ್ತು ಅವಶ್ಯಕತೆ ಇದೆ. ಈ ಸಂಶೋಧನೆ ಜಗತ್ತಿನ ಮುಂದಿನ ತಲೆಮಾರಿನ ಪ್ರಾಗೈತಿಹಾಸ ತಜ್ಞರನ್ನು ಇತ್ತ ಕಡೆ ಸೆಳೆಯಲಿದೆ. ಈ ಗುಹೆಯಿಂದ ಇಡೀ ವಿಶ್ವದ ಗಮನ ಬಳ್ಳಾರಿ ಜಿಲ್ಲೆಯ ಮೇಲೆ ಬೀಳಲಿದೆ.

ಕಳೆದ 25 ವರ್ಷಗಳ ಹಿಂದೆಯೇ ನವಲೂಟಿ ಗುಹೆಯಲ್ಲಿ ಆದಿಮಾನವನ ನೆಲೆಯ ಬಗ್ಗೆ ಅಂದಾಜು ಮಾಡಿದ್ದ ಡಾ.ಸಮದ್ ಕೊಟ್ಟೂರು ಪ್ರಾಗೈತಿಹಾಸ ತಜ್ಞರನ್ನು ಈ ಗುಹೆಗೆ ಕರೆದುಕೊಂಡು ಹೋಗುವ ಮೂಲಕ ಅದನ್ನು ದೃಢಪಡಿಸಿದ್ದಾರೆ. ಪ್ರಾಗೈತಿಹಾಸಜ್ಞ ಡಾ.ರವಿ ಕೋರಿಶೆಟ್ಟರ್ ನೇತೃತ್ವದಲ್ಲಿ ನವಲೂಟಿ ಗುಹೆಯ ಹೆಚ್ಚಿನ ಸಂಶೋಧನೆ ಮಾಡಲು ಸೂಕ್ತ ಸಹಯೋಗವನ್ನು ನೀಡಲು ಭಾರತೀಯ ಪುರಾತತ್ವ ಇಲಾಖೆಗೆ ಪತ್ರ ಬರೆಯಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು