ಸೌಲಭ್ಯ ವಿತರಣೆಯಲ್ಲಿ ತಾರತಮ್ಯ: ಅರಣ್ಯ ಇಲಾಖೆ ದಿನಗೂಲಿ ನೌಕರರ ಪ್ರತಿಭಟನೆ

KannadaprabhaNewsNetwork | Published : Mar 5, 2024 1:39 AM

ಸಾರಾಂಶ

ಶ್ರೀರಂಗಪಟ್ಟಣದ ಅರಣ್ಯ ಇಲಾಖೆಯ ವಲಯ ಕಚೇರಿಯಲ್ಲಿ 12 ಜನ ನೌಕರರು 1996ರಂದು ಕೆಲಸಕ್ಕೆ ಸೇರಿದ್ದು, ಇವರು ಮಾಸಿಕ ಹೆಚ್ಚುವರಿ ಹಾಗೂ ಕ್ಷೇಮಾಭಿವೃದ್ಧಿ ಸೌಲಭ್ಯ ಪಡೆಯಲು ಅರ್ಹತೆ ಹೊಂದಿದ್ದರು. ಆದರೆ, ನೌಕರ ಚಂದ್ರೇಗೌಡ ತಮ್ಮನ್ನು ಸೇರಿದಂತೆ ಆರು ಮಂದಿಗೆ ಮಾತ್ರ ಶಿಫಾರಸು ಮಾಡಿದ್ದರಿಂದ ಅವರಿಗೆ ಮಾತ್ರ ಸೌಲಭ್ಯ ದೊರಕಿದ್ದು, ಇನ್ನುಳಿದವರು ಸವಲತ್ತಿನಿಂದ ವಂಚಿತರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯಮಾಸಿಕ ಹೆಚ್ಚುವರಿ ಸೌಲಭ್ಯ ಮತ್ತು ಕ್ಷೇಮಾಭಿವೃದ್ಧಿ ಸೌಲಭ್ಯ ವಿತರಣೆಯಲ್ಲಿ ತಾರತಮ್ಯ ವಿರೋಧಿಸಿ ರಾಜ್ಯ ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘದ ಪದಾಧಿಕಾರಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಸೇರಿದ ದಿನಗೂಲಿ ನೌಕರರು, ಶ್ರೀರಂಗಪಟ್ಟಣದ ಅರಣ್ಯ ಇಲಾಖೆಯ ವಲಯ ಕಚೇರಿಯಲ್ಲಿ 12 ಜನ ನೌಕರರು 1996ರಂದು ಕೆಲಸಕ್ಕೆ ಸೇರಿದ್ದು, ಇವರು ಮಾಸಿಕ ಹೆಚ್ಚುವರಿ ಹಾಗೂ ಕ್ಷೇಮಾಭಿವೃದ್ಧಿ ಸೌಲಭ್ಯ ಪಡೆಯಲು ಅರ್ಹತೆ ಹೊಂದಿದ್ದರು.

ಆದರೆ, ನೌಕರ ಚಂದ್ರೇಗೌಡ ತಮ್ಮನ್ನು ಸೇರಿದಂತೆ ಆರು ಮಂದಿಗೆ ಮಾತ್ರ ಶಿಫಾರಸು ಮಾಡಿದ್ದರಿಂದ ಅವರಿಗೆ ಮಾತ್ರ ಸೌಲಭ್ಯ ದೊರಕಿದ್ದು, ಇನ್ನುಳಿದ ತುಳಸಿ ಕುಮಾರ್, ರವಿ ಮಜ್ಜಿಗೆಪುರ, ನಾಗೇಶ್, ನಂಜುಂಡಸ್ವಾಮಿ, ಲೀಲಾವತಿ ಸವಲತ್ತಿನಿಂದ ವಂಚಿತರಾಗಿದ್ದಾರೆ ಎಂದು ಆರೋಪಿಸಿದರು.

ಮಾಸಿಕ ಹೆಚ್ಚುವರಿ ಸೌಲಭ್ಯ ಹಾಗೂ ಕ್ಷೇಮಾ ಭಿವೃದ್ಧಿ ಸೌಲಭ್ಯ ಪಡೆಯಲು ಅರ್ಹ ನೌಕರರು ಇದ್ದರೂ ಅಧಿಕಾರಿಗಳು ಕೆಲವರಿಗೆ ಮಾತ್ರ ಸವಲತ್ತು ಕಲ್ಪಿಸಿ ತಾರತಮ್ಯ ಮಾಡಿದ್ದು, ಇದರ ಮಾಹಿತಿ ಕೋರಿದ್ದರೂ ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಅರಣ್ಯ ಇಲಾಖೆಯ ವಿಭಾಗ ಕಚೇರಿಗೆ ಮಂಡ್ಯ ವಲಯದ ನೌಕರೆ ಸಿದ್ದಮ್ಮ ಅರ್ಜಿ ಸಲ್ಲಿಸಿ ಸವಲತ್ತು ಪಡೆದಿದ್ದು, ಈ ವಲಯದಲ್ಲಿಯೂ ತಾರತಮ್ಯ ಮಾಡಲಾಗಿದೆ. ಈಗ ಸವಲತ್ತು ಪಡೆಯದ ನೌಕರರ ಮಾಹಿತಿಯನ್ನು ಸರ್ಕಾರ ಕೇಳಿದೆ. ಆದರೆ, ವಿಭಾಗ ಕಚೇರಿ ಹತ್ತು ವರ್ಷ ನಿರಂತರ ದಾಖಲೆ ಕಾರಣ ಮುಂದಿಟ್ಟುಕೊಂಡು ಅರ್ಹ ನೌಕರರ ಹೆಸರನ್ನು ಶಿಫಾರಸು ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಹಿತಿ ಹಕ್ಕು ಅಧಿನಿಯಮದಡಿ ಕೋರಿರುವ ಮಾಹಿತಿಯನ್ನು ಉಚಿತವಾಗಿ ನೀಡಬೇಕು. ನಿಗದಿತ ಅವಯಲ್ಲಿ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಸಂದಾಯ ಮಾಡಿರುವ ಹಣಕ್ಕೆ ಶೇ.2 ರಷ್ಟು ಬಡ್ಡಿ ನೀಡಬೇಕು, ಐದು ದಿನದೊಳಗೆ ದಾಖಲಾತಿ ಸಮೇತ ಮಾಹಿತಿ ನೀಡಬೇಕು ಎಂದು ಆಗ್ರಹ ಪಡಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ವೆಂಕಟಗಿರಿಯಯ್ಯ, ನಾಗರಾಜು, ಸುಕನ್ಯಾ, ತುಳಸಿಕುಮಾರ್, ರಮೇಶ್, ನಂಜುಂಡಸ್ವಾಮಿ, ನಾಗೇಶ್, ಸರೋಜಮ್ಮ, ವೆಂಕಟೇಶ್, ಮಳವಳ್ಳಿ ನಾಗರಾಜು ಭಾಗವಹಿಸಿದ್ದರು.

Share this article