- ಕಾಲುವೆ ದುರಸ್ತಿಗೂ ಒತ್ತು: ಎನ್ಎಸ್ ಬೋಸರಾಜು ಭರವಸೆ । ಟಿಎಲ್ಬಿಸಿ ಕಾಲುವೆಗೆ ಭೇಟಿ, ಪರಿಶೀಲನೆ
ಕಾಲುವೆಯ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ, ರೈತರ ಸಮಸ್ಯೆಗಳು ಮತ್ತು ನೀರು ಹರಿಸುವ ಕುರಿತು ಐಸಿಸಿ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಲಾಗುವುದು.ರೈತರ ಅನುಕೂಲಕ್ಕೆ ಅನುಗುಣವಾಗಿ ನೀರು ಬಿಡುಗಡೆ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ನಮ್ಮ ಸರ್ಕಾರ ರೈತರ ಪರವಾಗಿದ್ದು, ರೈತರ ಬೇಡಿಕೆಗೆ ಅನುಗುಣವಾಗಿ ನೀರು ಹರಿಸಲು ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಎನ್ಎಸ್ ಬೋಸರಾಜು ತಿಳಿಸಿದರು.
ತುಂಗಭದ್ರಾ ಜಲಾಶಯದಿಂದ ಕೃಷಿ ಚಟುವಟಿಕೆಗಳಿಗೆ ನೀರು ಹರಿಸುವ ಕುರಿತು ಚರ್ಚಿಸಲು ಆ.11ರಂದು ಮುನಿರಾಬಾದ್ನ ಕಾಡಾ ಕಚೇರಿಯಲ್ಲಿ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ತಾಲೂಕು ವ್ಯಾಪ್ತಿಯ ಎಡದಂಡೆ ಕಾಲುವೆಯನ್ನು ನೀರಾವರಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಭಾನುವಾರ ಪರಿಶೀಲಿಸಿದರು.ಸಿರವಾರ ತಾಲೂಕಿನ ನವಲಕಲ್ ಮುಖ್ಯ ಕಾಲುವೆ, ಕವಿತಾಳ, 73-74 ಕ್ಯಾಂಪ್ ಸೇರಿ ವಿವಿಧ ಭಾಗಗಳಿಗೆ ಭೇಟಿ ನೀಡಿ ನೀರು ಹರಿಯುವಿಕೆ, ಕಾಲುವೆಯ ದುರಸ್ತಿ, ನೀರು ತಲುಪುವ ಸ್ಥಿತಿ ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ರೈತರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದು, ಕಾಲುವೆಯ ಕೆಳಭಾಗದ ರೈತರಿಗೆ ಸಮರ್ಪಕವಾಗಿ ನೀರು ತಲುಪುವಂತೆ ಜಂಗಲ್ ಕಟಿಂಗ್ ಸೇರಿ ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಅಧಿಕಾರಿ ಗಳೊಂದಿಗೆ ಚರ್ಚಿಸಿದರು.
---