ಹೊಸಕೋಟೆ: ತಾಲೂಕು ಕುರುಬರ ಸಂಘದ 5 ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ಮಾಜಿ ಸಚಿವ ಎಂಟಿಬಿ ನಾಗರಾಜ್ ಬೆಂಬಲಿತ 15 ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ

ಹೊಸಕೋಟೆ: ತಾಲೂಕು ಕುರುಬರ ಸಂಘದ 5 ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ಮಾಜಿ ಸಚಿವ ಎಂಟಿಬಿ ನಾಗರಾಜ್ ಬೆಂಬಲಿತ 15 ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ.

ನೂತನ ನಿರ್ದೇಶಕ ಸಿ.ನಾಗರಾಜ್ ಮಾತನಾಡಿ, ಎಂಟಿಬಿ ನಾಗರಾಜ್ ಅವರ ಆಶೀರ್ವಾದ ಹಾಗೂ ಸಮಾಜದ ಬೆಂಬಲದಿಂದ ೧೫ ಅಭ್ಯರ್ಥಿಗಳು ಅತ್ಯಧಿಕ ಮತಗಳ ಅಂತರದಲ್ಲಿ ಜಯಗಳಿಸಿರುವುದು ಒಗ್ಗಟ್ಟಿನ ಬಲ ತೋರಿಸುತ್ತದೆ. ಸಂಘವನ್ನು ಮತ್ತಷ್ಟು ಬಲಪಡಿಸಿ, ಸಮಾಜದ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಸಂಘಕ್ಕೆ ಸೇರಿದ 4 ಎಕರೆ ಜಾಗದಲ್ಲಿ ಶಾಲೆ, ಕಾಲೇಜು, ವಿದ್ಯಾರ್ಥಿ ನಿಲಯ, ಐಟಿಐ ತರಬೇತಿ ಕೇಂದ್ರ ಸೇರಿದಂತೆ ಶೈಕ್ಷಣಿಕ ಚಟುವಟಿಕೆಗಳನ್ನು ರೂಪಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು.

ನೂತನ ನಿರ್ದೇಶಕ ರಾಮಾಂಜಿನಿ ಮಾತನಾಡಿ, ಬಡ ಮತ್ತು ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಶಿಕ್ಷಣಕ್ಕೆ ನೆರವು ನೀಡುವುದು, ಪ್ರತಿಭಾ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಹಾಗೂ ಪ್ರತಿವರ್ಷ ಸಮಾಜದ ಸಾಧಕರಿಗೆ ಪುರಸ್ಕಾರ ನೀಡುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳನ್ನೂ ಸಂಘದೊಂದಿಗೆ ಕರೆದೊಯ್ದು, ಹಿರಿಯರ ಸಲಹೆ ಹಾಗೂ ಎಲ್ಲರ ಸಹಕಾರದೊಂದಿಗೆ ಸಂಘವನ್ನು ಮುನ್ನಡೆಸಲಾಗುವುದು. ಚುನಾವಣೆ ಫಲಿತಾಂಶವನ್ನು ಮುಂದಿನ ದಿನಗಳಲ್ಲಿ ಎಲ್ಲರೂ ಒಟ್ಟಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.

ನೂತನ ನಿರ್ದೆಶಕ ರಘುವೀರ್ ಮಾತನಾಡಿ, ಇದು ಕೇವಲ ೧೫ ಅಭ್ಯರ್ಥಿಗಳ ಗೆಲುವಲ್ಲ, ಇಡೀ ಕುರುಬ ಸಮಾಜದ ಗೆಲುವಾಗಿದೆ. ಮತದಾರರು ನೀಡಿರುವ ವಿಶ್ವಾಸಕ್ಕೆ ತಕ್ಕಂತೆ ಸಮಾಜದ ಸೇವೆ ಮಾಡುತ್ತೇವೆ ಎಂದರು.

ಈ ಸಂದರ್ಭದಲ್ಲಿ ಎಂಟಿಬಿ ನಾಗರಾಜ್ ಅಭಿಮಾನಿಗಳು ಹಾಗೂ ಮುಖಂಡರು ನೂತನ ನಿರ್ದೇಶಕರಿಗೆ ಅಭಿನಂದನೆ ಸಲ್ಲಿಸಿದರು.

ಚುನಾವಣೆಯಲ್ಲಿ ಗೆಲುವು ಸಾಧಿಸಿದವರು: ಕೆಂಪಣ್ಣ, ಕೆ. ದೇವರಾಜ್, ನಾಗರಾಜ್ ಸಿ, ಮರವೇ ಕೃಷ್ಣಪ್ಪ, ಮುನಿರಾಜು ಎಸ್.ಬಿ, ಮಂಜಣ್ಣ ಸಿ, ಮಂಜುನಾಥ್ ಆರ್., ಮಂಜುನಾಥ್ ಆರ್, ರಘುವೀರ್ ಬಿ., ರಾಜಣ್ಣ ಎಂ.ಆರ್, ರಾಜೇಂದ್ರ, ರಾಮಅಂಜಿನಪ್ಪ ಕೆ, ರಾಮಾಜಿನಿ, ಶ್ರೀಕಾಂತ್ ಟಿ.ಜೆ. ಹಾಗೂ ಶ್ರೀನಿವಾಸ್.

ಫೋಟೋ: 9 ಹೆಚ್‌ಎಸ್‌ಕೆ 3

ಹೊಸಕೋಟೆ ತಾಲೂಕು ಕುರುಬರ ಸಂಘದ ಚುನಾವಣೆಯಲ್ಲಿ ಎಂಟಿಬಿ ನಾಗರಾಜ್ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದು ಸಂಭ್ರಮಾಚರಿಸಿದರು.