ಸಿದ್ದು ಸರ್ಕಾರ ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆಗೆ ಒತ್ತಾಯ

KannadaprabhaNewsNetwork | Published : Jun 9, 2024 1:31 AM

ಸಾರಾಂಶ

ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ಸಿಬಿಐ ತನಿಖೆಗೊಪ್ಪಿಸಲು ಬಿಜೆಪಿ ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಆಗ್ರಹಿಸಿದರಲ್ಲದೆ, ರಾಷ್ಟ್ರಪತಿ ಆಡಳಿತ ಹೇರಲು ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ದಾವಣಗೆರೆ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ಹೂರಣ ಬಗೆದಷ್ಟು ಹೊರ ಬರುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ವಜಾ ಮಾಡಿ, ರಾಷ್ಟ್ರಪತಿ ಆಡಳಿತ ಹೇರಿ, ಇಡೀ ಪ್ರಕರಣವನ್ನು ಸಿಬಿಐ ತನಿಖೆಗೊಪ್ಪಿಸಲು ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ, ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಕೊಳೇನಹಳ್ಳಿ ರಾಜ್ಯಪಾಲರಿಗೆ ಒತ್ತಾಯಿಸಿದ್ದಾರೆ.

ನಿಗಮದ ಕಚೇರಿ ಅಧೀಕ್ಷಕ ಚಂದ್ರಶೇಖರ ಆತ್ಮಹತ್ಯೆಯಿಂದಾಗಿ ಕೋಟಿ ಕೋಟಿ ಹಣವು ಬೇರೊಂದು ಖಾತೆಗೆ ವರ್ಗಾವಣೆ ಮಾಡಿ, ಹಣವನ್ನು ಲೂಟಿ ಮಾಡಿರುವುದು ಬೆಳಕಿಗೆ ಬಂದಿದೆ. ನಿಗಮದ ಅಧ್ಯಕ್ಷರನ್ನು ಭೇಟಿ ಮಾಡಿರುವುದಾಗಿ ಮೃತ ದುರ್ಧೈವಿ ಅಧಿಕಾರಿ ಚಂದ್ರಶೇಖರ ತಿಳಿಸಿದರೂ ಅಧ್ಯಕ್ಷರಾದ ರಾಯಚೂರು ಗ್ರಾಮೀಣ ಶಾಸಕ ಬಸವನ ಗೌಡ ದದ್ದಲ್ ಅಧಿಕೃತ ಬೈಕ್ ರೈಡರ್ ಆಗಿದ್ದರೂ ಹಿಂಬದಿ ಸವಾರನಂತೆ ನಡೆಸುತ್ತಿದ್ದಾರೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ. ಅಧೀಕ್ಷಕ ಚಂದ್ರಶೇಖರ ಸಾಲಿನ ಪ್ರಕರಣದ ಸಾಕ್ಷ್ಯ ನಾಶಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲರೊಂದಿಗೆ ಬಸವನಗೌಡ ದದ್ದಲ್ ಮತ್ತು ಸಚಿವರಾಗಿದ್ದ ಬಿ.ನಾಗೇಂದ್ರಚರ್ಚಿಸಿರುವುದಾಗಿ ಬಂಧಿತ ಆರೋಪಿಗಳೇ ಬಾಯಿ ಬಿಡುತ್ತಿದ್ದಾರೆ. ಮತ್ತೊಂದು ಕಡೆ ಸರ್ಕಾರದ ಹಣವನ್ನು ನಿಗಮಕ್ಕೆ ವರ್ಗಾಯಿಸಿಕೊಂಡು, ಅದನ್ನು ತೆಲಂಗಾಣದ ಬೇನಾಮಿ ಖಾತೆಗೆ ವರ್ಗಾವಣೆ ವರ್ಗಾಯಿಸಿಕೊಂಡು, ಹಣ ಲಪಟಾಯಿಸುವ ಕೃತ್ಯದ ಹಿಂದೆ ಅನೇಕ ಸಚಿವರ ಕೈವಾಡವೂ ಇದೆ. ಇಲ್ಲಿ ಬಿ.ನಾಗೇಂದ್ರ ಕೇವಲ ಪಾತ್ರದಾರಿಯಷ್ಟೇ ಎಂದು ಅವರು ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ 14 ಸಲ ರಾಜ್ಯದ ಬಜೆಟ್ ಮಂಡಿಸಿದ್ದಾರೆ. ಸ್ವತಃ ಸಿದ್ದರಾಮಯ್ಯ ಹಣಕಾಸು ಖಾತೆಯನ್ನು ಹೊಂದಿದ್ದು, ಇದು ಸಿಎಂ ಗಮನಕ್ಕೆ ಬರದೇ ನಡೆದಿಲ್ಲ ವೆಂಬ ಗುಸುಗುಸು ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವಾದರೆ ರಾಜ್ಯ ಸರ್ಕಾರವನ್ನು ವಜಾಗ ಮಾಡಿ, ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಬೇಕು. ನಿಗಮದ ಬಹುಕೋಟಿ ಹಗರಣದ ತನಿಖೆಯನ್ನು ಸಿಬಿಐ ತನಿಖೆಗೆ ಒಪ್ಪಿಸಿ, ಸತ್ಯಾಸತ್ಯತೆ ಬಯಲಿಗೆ ಎಳೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಹೆಜ್ಜೆ ಹೆಜ್ಜೆಗೂ ಅಹಿಂದ ಹಿತ ಮಂತ್ರವನ್ನು ಜಪಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಾನ್ ಋಷಿ ಕವಿ ಮಹರ್ಷಿ ವಾಲ್ಮೀಕಿಯವರ ಹೆಸರಿನಲ್ಲಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಬಳಕೆ ಮಾಡಬೇಕಾದ ಹಣವನ್ನು ಕೊಳೆ ಹೊಡೆದಿರುವುದು ತೀರಾ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಸಿದ್ದರಾಮಯ್ಯ ಸರ್ಕಾರದ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ಬಗ್ಗೆ ಅವರು ಅಸಮಾಧಾನ ಹೊರ ಹಾಕಿದ್ದಾರೆ.

Share this article