- ಅಪರ ಡಿಸಿಗೆ ಮನವಿ ಸಲ್ಲಿಸಿ ಜೈ ಕರುನಾಡು ರಕ್ಷಣಾ ಸಂಘ ಸದಸ್ಯರ ಒತ್ತಾಯ
- - - - - -- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿಯಲ್ಲಿ 8 ವರ್ಷಗಳಿಂದ ಸೇವೆಯಲ್ಲಿರುವ ಅನ್ಯ ಜಿಲ್ಲೆ ವ್ಯಕ್ತಿ
- ನಿಯಮಾವಳಿ ಪಾಲನೆ ಮಾಡಿ ಇನ್ನೊಬ್ಬ ಸೂಕ್ತ ಸ್ಥಳೀಯ ಅಭ್ಯರ್ಥಿಗೆ ಸೇವೆ ನೀಡಲು ಒತ್ತಾಯ- - -ಕನ್ನಡಪ್ರಭ ವಾರ್ತೆ ಹರಿಹರ
ನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿಯಲ್ಲಿ ನಿಯಮಬಾಹಿರವಾಗಿ 8 ವರ್ಷಗಳಿಂದ ಸೇವಾ ಗುತ್ತಿಗೆ ಆಧಾರದಲ್ಲಿರುವ ಡಿ ಗ್ರೂಪ್ ನೌಕರರನ್ನು ಸೇವೆಯಿಂದ ಕೈಬಿಡುವಂತೆ ಆಗ್ರಹಿಸಿ ಜೈ ಕರುನಾಡು ರಕ್ಷಣಾ ಸಂಘದಿಂದ ಅಪರ ಜಿಲ್ಲಾಧಿಕಾರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.ಸಂಘದ ರಾಜ್ಯಾಧ್ಯಕ್ಷ ಶ್ರೀನಿವಾಸ್ ಕೊಡ್ಲಿ ಮಾತನಾಡಿ, ಸರ್ಕಾರಿ ಆದೇಶದನ್ವಯ ಸೇವಾ ಗುತ್ತಿಗೆ ಆಧಾರದಲ್ಲಿ ಕೇವಲ 7 ತಿಂಗಳು ಮಾತ್ರ ಸೇವೆ ಸಲ್ಲಿಸಲು ಅವಕಾಶವಿದೆ. ಆದರೆ, ಮಂಜುನಾಥ ಸಾಬಳ್ಳಿ ಎಂಬವರು 7 ವರ್ಷಗಳಿಂದ ಇಲ್ಲಿಯೇ ಠಿಕಾಣಿ ಹೂಡಿದ್ದಾರೆ. ಇದೇ ವ್ಯಕ್ತಿಯನ್ನು 10 ಬಾರಿ ಸೇವೆಯಲ್ಲಿ ಮುಂದುವರಿಸಿರುವ ಮರ್ಮ ಏನು ಎಂದು ತಿಳಿಯದು ಎಂದರು.
ವಿದ್ಯಾರ್ಥಿ ವೇತನದ ಪರಿಶೀಲನೆಗೆ ಕಚೇರಿಗೆ ಬರುವ ವಿದ್ಯಾರ್ಥಿಗಳು ಅಥವಾ ಅವರ ಪೋಷಕರು ಹಾಗೂ ಸರ್ಕಾರಿ ನೌಕರಿಗೆ ಆಯ್ಕೆಯಾದ ಅಭ್ಯರ್ಥಿಗಳ ಸಿಂಧುತ್ವ ಪ್ರಮಾಣಪತ್ರ ಮಾಡಿಸಿಕೊಡುತ್ತೇನೆಂದು ಹಣ ಪಡೆಯುತ್ತಾರೆಂಬ ಆರೋಪವೂ ಇವರ ಮೇಲಿದೆ. ಬೇರೆ ಜಿಲ್ಲೆಯ ಈ ವ್ಯಕ್ತಿಯನ್ನು ಕೂಡಲೇ ಸೇವೆಯಿಂದ ಬಿಡುಗಡೆಗೊಳಿಸಬೇಕು. ನಿಯಮಾವಳಿ ಪಾಲನೆ ಮಾಡಿ ಇನ್ನೊಬ್ಬ ಸೂಕ್ತ ಸ್ಥಳೀಯ ಅಭ್ಯರ್ಥಿಯನ್ನು ಸೇವೆಗೆ ನೇಮಿಸಿಕೊಳ್ಳಬೇಕು. ತಪ್ಪಿದಲ್ಲಿ ನಗರದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.ಅಪರ ಡಿಸಿ ಬಳಿಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಕಚೇರಿ ವ್ಯವಸ್ಥಾಪಕ ಎಚ್.ಎಂ.ತಿಪ್ಪೇಸ್ವಾಮಿ ಅವರಿಗೂ ಮನವಿ ನೀಡಲಾಯಿತು. ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಬೂಬ್ ಅಲಿ ಅದ್ವಾನಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಅಬ್ದುಲ್ ಜಿಲಾನಿ, ಜಿಲ್ಲಾ ಘಟಕದ ಅಧ್ಯಕ್ಷ ಗೋವಿಂದ ರಾಜು ಇದ್ದರು.
- - - -16ಎಚ್ಆರ್ಆರ್02:ಜೈ ಕರುನಾಡು ರಕ್ಷಣಾ ಸಂಘದಿಂದ ಅಪರ ಡಿಸಿ ಲೋಕೇಶ್ ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.