ಕನ್ನಡಪ್ರಭ ವಾರ್ತೆ ಕಾರಟಗಿ
ಪಟ್ಟಣ ಸೇರಿದಂತೆ ತಾಲೂಕಿನ ಪ್ರತಿಯೊಂದು ಹಳ್ಳಿಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಅಲಾಯಿ ದೇವರುಗಳ ವಿಸರ್ಜನೆಗೆ ಭಕ್ತರ ಗೆಜ್ಜೆ, ಹೆಜ್ಜೆ ಕುಣಿತದೊಂದಿಗೆ ಬುಧವಾರ ಸಂಜೆ ನಡೆಯಿತು.
ಇಲ್ಲಿನ ಹಳೇ ಬಜಾರ್ನ ಮಸೀದಿ ಹಸೇನ್-ಹುಸೇನ್ ಹಾಗೂ ವಾರ್ಡ್-೧ರಲ್ಲಿನ ಮಸೀದಿಯಲ್ಲಿ ಇಮಾಮ್ ಕಾಶೀಂ ಹಾಗೂ ಮೌಲಾಲಿ, ಅಕ್ಬರ್ ಅಲಿ, ಲಾಲಸಾಬ್ ದೇವರುಗಳನ್ನು ಸಾವಿರಾರು ಭಕ್ತರ ನಡುವೆ ಮೆರವಣಿಗೆ ಮೂಲಕ ತೆರಳಿ ಸಂಪ್ರದಾಯಿಕವಾಗಿ ಭಕ್ತಿಯಿಂದ ವಿದ್ಯುಕ್ತ ನಿಯಮಗಳನ್ನು ಅನುಸರಿಸಿ ಅಲಾಯಿ ದೇವರುಗಳನ್ನು ವಿಸರ್ಜಿಸಿಲಾಯಿತು. ಇದಕ್ಕೂ ಮುನ್ನ ದೇವರು ಮುಂದೆ ಇದ್ದ ಅಲಾಯಿ ಕುಣಿಯ ಮುಂದೆ ತಮಟೆ ಶಬ್ದದೊಂದಿಗೆ ಭಕ್ತರು ಹೆಜ್ಜೆ ಹಾಕಿದರು.ಅದೇ ರೀತಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಸಿದಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಅಲಾಯಿ ದೇವರು (ಪಾಂಜಾ) ಹೊರ ತರುವ ಮುಂಚೆಯೆ ಸಾರ್ವಜನಿಕರು ಮಸಿದಿಯ ಮುಂದೆ ತೊಡಿದ್ದ ಬೃಹತ್ ಅಲಾಯಿ ಕುಣಿಯಲ್ಲಿ ಬಾರೆಗಿಡದ ತುಂಡನ್ನಿಟ್ಟು ಮುಚ್ಚಿದರು. ಬಳಿಕ ಸಾರ್ವಜನಿಕರು ಮತ್ತು ಫಕೀರರಾಗಿರುವಂತವರು ಈ ಬಾರೆ ಗಿಡದ ತುಂಡಿಗೆ ಕೆಂಪುದಾರ (ಲಾಡಿಯನ್ನು) ಹಾಕಿ ಐದು ಬಾರಿ ಮಣ್ಣನ್ನು ಎತ್ತರಿಸಿ ನಮಸ್ಕರಿಸಿದರು. ನಂತರ ಅಲಾಯಿ ದೇವರುಗಳು ಅಲಾಯಿ ಕುಣಿಯ ಸುತ್ತ ಪ್ರದಕ್ಷಿಣೆ ಹಾಕಿದವು.
ಕಾರಟಗಿ ಸೇರಿದಂತೆ ಸಿದ್ದಾಪುರ, ಗುಂಡೂರು, ಬೂದುಗುಂಪಾ, ಹುಳ್ಕಿಹಾಳ, ತೊಂಡಿಹಾಳ, ಹಗೇದಾಳ, ಸೋಮನಾಳ, ಯರಡೋಣಾ ಸೇರಿದಂತೆ ನದಿ ಪಾತ್ರ ನಂದಿಹಳ್ಳಿ, ಈಳಿಗನೂರು, ಉಳೇನೂರು ಗ್ರಾಮಗಳಲ್ಲಿ ಸಹ ಮೊಹರಂ ಹಬ್ಬ ಆಚರಿಸಲಾಯಿತು.