ಜಮೀನಿನ ವಿವಾದ: ಗಾಳಿಯಲ್ಲಿ ಎಂಟು ಸುತ್ತು ಗುಂಡು

KannadaprabhaNewsNetwork |  
Published : May 27, 2026, 02:15 AM IST
ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ಧಾರವಾಡ ಸಮೀಪದ ಐಐಐಟಿ ಬಳಿ ಮಂಗಳವಾರ ನಡೆದ ಗಲಾಟೆ. | Kannada Prabha

ಸಾರಾಂಶ

ಧಾರವಾಡ ಹೊರ ವಲಯದ ಐಐಐಟಿ ಬಳಿ ಹುಬ್ಬಳ್ಳಿ ಮೂಲದ ಫೆಲೋಮಿನಾ ಎಂಬುವರಿಗೆ ಸೇರಿದ್ದ ಮೂರು ಎಕರೆ ಜಮೀನಿಗೆ ಸಂಬಂಧಿಸಿದಂತೆ ಈ ಘಟನೆ ನಡೆದಿದೆ. ಈ ಜಮೀನಿನಲ್ಲಿ ನಿವೇಶನ ಮಾಡಲು ಫೆಲೋಮಿನಾ ಹಾಗೂ ಅವರ ಬೆಂಬಲಿಗರು ಮಂಗಳವಾರ ಮುಂದಾದಾಗ ಜಮೀನಿನ ಪಕ್ಕದವರು ವಿರೋಧ ಮಾಡಿದ್ದಾರೆ.

ಧಾರವಾಡ:

ಜಮೀನಿನ ವಿವಾದದ ಹಿನ್ನೆಲೆಯಲ್ಲಿ ನಡೆದ ಗಲಾಟೆಯಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬರ ಅಂಗರಕ್ಷರು ಎಂಟು ಸುತ್ತು ಗುಂಡು ಹಾರಿಸಿದ್ದು, ಈ ಪೈಕಿ ಒಂದು ಗುಂಡು ಯುವಕನ ಕಾಲಿಗೆ ತಾಗಿರುವ ಘಟನೆ ಮಂಗಳವಾರ ನಡೆದಿದೆ.

ನಗರದ ಹೊರ ವಲಯದ ಐಐಐಟಿ ಬಳಿ ಹುಬ್ಬಳ್ಳಿ ಮೂಲದ ಫೆಲೋಮಿನಾ ಎಂಬುವರಿಗೆ ಸೇರಿದ್ದ ಮೂರು ಎಕರೆ ಜಮೀನಿಗೆ ಸಂಬಂಧಿಸಿದಂತೆ ಈ ಘಟನೆ ನಡೆದಿದೆ. ಈ ಜಮೀನಿನಲ್ಲಿ ನಿವೇಶನ ಮಾಡಲು ಫೆಲೋಮಿನಾ ಹಾಗೂ ಅವರ ಬೆಂಬಲಿಗರು ಮಂಗಳವಾರ ಮುಂದಾದಾಗ ಜಮೀನಿನ ಪಕ್ಕದವರು ವಿರೋಧ ಮಾಡಿದ್ದಾರೆ. ಈ ಮಧ್ಯೆ ಎರಡು ಗುಂಪುಗಳ ಮಧ್ಯೆ ಮಾತಿನ ಚಕಮಕಿ ನಡೆದು, ಜಮೀನು ಅಳತೆ ಮಾಡಿಸಿ ನಿವೇಶನ ಅಭಿವೃದ್ಧಿ ಮಾಡಲು ಸ್ಥಳೀಯರು ಆಗ್ರಹಿಸಿದ್ದಾರೆ.

ಈಗಾಗಲೇ ನಮ್ಮ ಪರವಾಗಿ ನ್ಯಾಯಾಲಯದ ತೀರ್ಪು ಬಂದಿದ್ದು ಮತ್ತೇಕೆ ಅಳತೆ ಮಾಡುವುದು ಎಂದು ಫೆಲೋಮಿನಾ ಬೆಂಬಲಿಗರು ವಾದಿಸಿದ್ದಾರೆ. ಎರಡು ಗುಂಪುಗಳ ಮಧ್ಯೆ ವಾಗ್ವಾದ ಜೋರಾದಾಗ, ಫೆಲೋಮಿನಾ ಅವರ ಅಂಗರಕ್ಷಕರು ಏಳು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದು, ಒಂದು ನೆಲಕ್ಕೆ ಹಾರಿಸಿದ್ದಾರೆ. ಈ ಸಮಯದಲ್ಲಿ ಸ್ಥಳೀಯರಾದ ವಿಠ್ಠಲ್ ವಾಲೀಕಾರ (24) ಎಂಬುವರ ಕಾಲಿಗೂ ಗುಂಡು ತಾಗಿದ್ದು, ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಾಳನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ವಿದ್ಯಾಗಿರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಘಟನೆ ಸುದ್ದಿ ತಿಳಿದು ಪೊಲೀಸ ಆಯುಕ್ತ ಎನ್‌. ಶಶಿಕುಮಾರ ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತ್ಯೇಕ ಹೋರಾಟ ವೇದಿಕೆಯಲ್ಲಿ ಕ್ರೆಡಿಟ್‌ ವಾರ್‌
ಷರತ್ತುಗಳೊಂದಿಗೆ ಪ್ರತ್ಯೇಕ ಪಾಲಿಕೆಗೆ ರಾಜ್ಯಪಾಲರ ಮುದ್ರೆ