ಸೋಲಿನ ಹತಾಶೆಯಿಂದ ಕೈಯಿಂದ ಅಧಿವೇಶನಕ್ಕೆ ಅಡ್ಡಿ: ಜೋಶಿ

KannadaprabhaNewsNetwork | Updated : Dec 25 2023, 01:31 AM IST

ಸಾರಾಂಶ

ಮಾಧ್ಯಮಗಳೊಂದಿಗೆ ಮಾತನಾಡಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಕಾಂಗ್ರೆಸ್ ಸೋಲಿನ ಹತಾಶೆಯಿಂದ ಅತ್ಯಂತ ಕೆಟ್ಟದಾಗಿ ವರ್ತಿಸುತ್ತಿದೆ. ಜನ ಇದನ್ನು ಗಮನಿಸುತ್ತಿದ್ದಾರೆ. ಪಾರ್ಲಿಮೆಂಟ್‌ ಘಟನೆ ನೆಪ ಮಾಡಿ ಅಧಿವೇಶನ ನಡೆಸಲು ಬಿಡಲ್ಲ ಎಂಬ ಮಾನಸಿಕತೆಗೆ ಬಂದಿದೆ. ಸೋಲಿನ ಸಿಟ್ಟನ್ನು ತೀರಿಸಿಕೊಳ್ಳುತ್ತಿದ್ದಾರೆ ಎಂದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಐದು ರಾಜ್ಯಗಳ ಚುನಾವಣೆ ಫಲಿತಾಂಶದಿಂದ ಕಾಂಗ್ರೆಸ್‌ ತಲೆ ಕೆಟ್ಟವರ ರೀತಿಯಲ್ಲಿ ವರ್ತಿಸುತ್ತಿದೆ. ಅದಕ್ಕಾಗಿ ಅಧಿವೇಶನ ನಡೆಸಲು ಬಿಡುವುದಿಲ್ಲ ಎಂಬ ಮನಸ್ಥಿತಿಯಲ್ಲಿ ಕಾಂಗ್ರೆಸ್‌ ಇದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸೋಲಿನ ಹತಾಶೆಯಿಂದ ಅತ್ಯಂತ ಕೆಟ್ಟದಾಗಿ ವರ್ತಿಸುತ್ತಿದೆ. ಜನ ಇದನ್ನು ಗಮನಿಸುತ್ತಿದ್ದಾರೆ. ಪಾರ್ಲಿಮೆಂಟ್‌ ಘಟನೆ ನೆಪ ಮಾಡಿ ಅಧಿವೇಶನ ನಡೆಸಲು ಬಿಡಲ್ಲ ಎಂಬ ಮಾನಸಿಕತೆಗೆ ಬಂದಿದೆ. ಸೋಲಿನ ಸಿಟ್ಟನ್ನು ತೀರಿಸಿಕೊಳ್ಳುತ್ತಿದ್ದಾರೆ ಎಂದರು.

ಅಮಾನತು ಮಾಡಿ ಬಿಲ್‌ ಪಾಸ್‌ ಮಾಡಿದ್ದಾರೆ ಎಂದು ಜನರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದೆ. ಹಿಂದೆ ಕೂಡ ಕೆಲವು ಘಟನೆಗಳು ನಡೆದಿವೆ. ಪಾಸ್‌ ಪಡೆದುಕೊಂಡು ವೆಫನ್ಸ್‌ ತೆಗೆದುಕೊಂಡು ಬಂದ ಉದಾಹರಣೆ ಇದೆ. ಯಾವ ಕ್ರಮ ಕೈಗೊಳ್ಳಬೇಕೋ ಎನ್ನುವುದು ಸ್ಪೀಕರ್‌ಗೆ ಬಿಟ್ಟಿದ್ದು. ಹಿಂದೆ ಲೋಕಸಭೆಯಲ್ಲಿ ಡ್ರ್ಯಾಗರ್‌ ತಂದಿದ್ದರು ಎಂದರು.

ಪಾರ್ಲಿಮೆಂಟ್‌ನಲ್ಲಿ ಘಟನೆ ನಡೆದ ದಿನವೂ ಚರ್ಚೆಯಲ್ಲಿ ಭಾಗಿಯಾಗಿದ್ದರು. ಅದಾದ ಮೇಲೆ ಎಲ್ಲಿಂದಲೋ ಸೂಚನೆ ಬರುತ್ತದೆ. ಸೂಚನೆ ಬಂದ ಮೇಲೆ ಡಿಸ್ಟರ್ಬ್‌ ಮಾಡುತ್ತಾರೆ. ಕಾಂಗ್ರೆಸ್‌ ಎಂದರೆ ಕನಫ್ಯೂಶನ್‌ ಪಾರ್ಟಿ. ಕಾಂಗ್ರೆಸ್‌ನವರು ಸದನಕ್ಕೆ ಭಿತ್ತಿಪತ್ರ ತಂದಿದ್ದರು. ಯಾಕೆ ಅಂತ ಕೇಳಿದರೆ ನಮಗೂ ಸಸ್ಪೆಂಡ್‌ ಮಾಡಬೇಕು ಎಂದು ಹೇಳಿದರು. ಆಗ 13 ಜನರನ್ನು ಅಮಾನತು ಮಾಡಲಾಯಿತು. ಆನಂತರ ಮತ್ತೆ ಕೆಲವರು ನಮ್ಮನ್ನು ಸಸ್ಪೆಂಡ್‌ ಮಾಡಿ ಅಂತ ಹೇಳಿದರು. ಹೀಗೆ ವಿನಾಕಾರಣ ಅಧಿವೇಶನಕ್ಕೆ ಡಿಸ್ಟರ್ಬ್‌ ಮಾಡಿದರು. ಪ್ರತಿಭಟನೆ ನಡೆಸಿದರು. ಈಗ ಸುಮ್ಮನೆ ನಮ್ಮನ್ನು ಹೊರಗಿಟ್ಟು ಬಿಲ್‌ ಪಾಸ್‌ ಮಾಡಿದರು ಎಂದು ಹೇಳುತ್ತಿದ್ದಾರೆ. ಹಳೆಯ ಬಿಲ್‌ಗಳ ಕುರಿತು ನಿಮಗೆ ಮಾತನಾಡುವುದಕ್ಕೆ ಧೈರ್ಯವಿಲ್ಲ. ಚರ್ಚೆಯಲ್ಲಿ ಭಾಗವಹಿಸಲು ನೈತಿಕತೆ ಇಲ್ಲ ಎಂದು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು.

ಬಿಲ್‌ಗಳನ್ನು ಪಾಸ್‌ ಮಾಡುವುದಕ್ಕೆ ಇದು ಕೊನೆ ಅಧಿವೇಶನ. ಪುರಾತನ ಭಾರತೀಯ ನ್ಯಾಯಶಾಸ್ತ್ರದ ಆಧಾರದ ಮೇಲೆ ನಾವು ಕಾನೂನು ರಚನೆ ಮಾಡಿದ್ದೇವೆ. ಎರಡು ಬಾರಿ ಬಿಎಸಿ ಮೀಟಿಂಗ್ ಕರೆದಿದ್ದೇವು. ಅದಿರಂಜನ್ ಚೌಧರಿ ಮತ್ತಿತರರನ್ನು ಮೀಟಿಂಗ್ ಕರೆದಿದ್ದೇವು ಎಂದರು.

ಆದರೆ ಇವರು ಪಾರ್ಲಿಮೆಂಟ್‌ ಘಟನೆಗೆ ಸಂಬಂಧಪಟ್ಟಂತೆ ಗೃಹ ಸಚಿವರ ಹೇಳಿಕೆ ಕೊಡಿಸಿ ಎಂದರು. ಆದರೆ ತನಿಖೆ ನಡೆಯುವ ಮುಂಚೆಯೇ ಹೇಗೆ ಹೇಳಿಕೆ ಕೊಡುವುದಕ್ಕೆ ಬರುತ್ತದೆ ಎಂದು ಪ್ರಶ್ನಿಸಿದರು.

Share this article