ಬಂಡೀಪುರ ಅರಣ್ಯ ಸಿಬ್ಬಂದಿಗೆ ಬ್ಯಾಕ್‌ ಕಿಟ್‌ ವಿತರಣೆ

KannadaprabhaNewsNetwork | Published : Jun 28, 2025 12:20 AM

ಬಂಡೀಪುರದಲ್ಲಿ ಕೆಎಸ್‌ಡಿಎಲ್‌ ಸಿಎಸ್ಆರ್‌ ಫಂಡ್‌ನಲ್ಲಿ ಬ್ಯಾಕ್‌ ಕಿಟ್‌ನ್ನು ಅರಣ್ಯ ಸಿಬ್ಬಂದಿಗೆ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಧ್ರುವ ಪಾಟೀಲ್‌ ವಿತರಿಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಬೃಹತ್‌ ಮತ್ತು ಭಾರಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ರ ಪುತ್ರ, ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಧ್ರುವ ಪಾಟೀಲ್‌ ಬಂಡೀಪುರ ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿಗೆ ಬ್ಯಾಕ್‌ ಪ್ಯಾಪ್‌ ಕಿಟ್‌ನ್ನು ಅಷಾಢ ಶುಕ್ರವಾರ ವಿತರಿಸಿದರು.

ಬಂಡೀಪುರ ಕ್ಯಾಂಪಸ್‌ನ ಸ್ವಾಗತ ಕೇಂದ್ರದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಎಸ್.ಪ್ರಭಾಕರನ್‌ ನೇತೃತ್ವದಲ್ಲಿ ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಕುಂದಕೆರೆ ವಲಯದ ಮಂಚೂಣಿ ಕಾರ್ಯಕರ್ತರಿಗೆ ಬ್ಯಾಕ್‌ ಕಿಟ್‌ (ವಾಟರ್‌ ಪ್ರೂಪ್‌ ಜರ್ಕಿನ್‌, ಆರ್ಮಿ ಮಾದರಿಯ ಶೂ,ವಾಟರ್‌ ಕ್ಯಾನ್‌) ಹಸ್ತಾಂತರಿಸಿದರು.

ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರೂ ಆದ ಸಚಿವ ಎಂ.ಬಿ.ಪಾಟೀಲ್‌ ಪುತ್ರ ಧ್ರುವ ಪಾಟೀಲ್‌ ಮಾತನಾಡಿ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಹಾಗೂ ಸಚಿವ ಎಂ.ಬಿ.ಪಾಟೀಲ್‌ ಸೂಚನೆ ಮೇರೆಗೆ ೨ಕೋಟಿ ವೆಚ್ಚದಲ್ಲಿ ರಾಜ್ಯದ ಎಲ್ಲಾ ಹುಲಿ ಸಂರಕ್ಷಿತ ಪ್ರದೇಶದ ೯೭೦೦ ಮುಂಚೂಣಿ ಸಿಬ್ಬಂದಿಗೆ ಬ್ಯಾಕ್‌ ಕಿಟ್‌ಗಳನ್ನು ನೀಡಲಾಗುತ್ತಿದೆ ಎಂದರು.

ಸಾಂಕೇತಿಕವಾಗಿ ಅಷಾಢ ಶುಕ್ರವಾರ ಬಂಡೀಪುರ,ಗೋಪಾಲಸ್ವಾಮಿ ಬೆಟ್ಟ ಹಾಗೂ ಕುಂದಕೆರೆ ವಲಯದ ಮುಂಚೂಣಿ ಸಿಬ್ಬಂದಿಗೆ ಬ್ಯಾಕ್‌ ಕಿಟ್‌ ನೀಡಲಾಗಿದೆ ಇನ್ನೂಳಿದ ವಲಯಗಳ ಸಿಬ್ಬಂದಿಗೂ ಸದ್ಯದಲ್ಲೇ ನೀಡಲಾಗುತ್ತದೆ ಎಂದರು. ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿ ವನ್ಯಜೀವಿಗಳ ಜೊತೆಗೆ ಕಾಡು ರಕ್ಷಿಸುತ್ತಿದ್ದಾರೆ. ಇದನ್ನೆಲ್ಲ ಗಮನಿಸಿ ಸಚಿವ ಎಂ.ಬಿ.ಪಾಟೀಲರ ಗಮನಕ್ಕೆ ತಂದಾಗ ಕೆಎಸ್‌ಡಿಎಲ್‌ನ ಸಿಆರ್‌ಎಫ್‌ ನಡಿ ಬ್ಯಾಕ್‌ ಕಿಟ್‌ ಕೊಡಿಸಲಾಗಿದೆ ಅರಣ್ಯ ಸಿಬ್ಬಂದಿ ಸದುಪಯೋಗ ಪಡಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.

ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಎಸ್.ಪ್ರಭಾಕರನ್‌ ಮಾತನಾಡಿ, ಸಚಿವ ಎಂ.ಬಿ.ಪಾಟೀಲರ ಸೂಚನೆಯಂತೆ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ಮೂಲಕ ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿಗೆ ಬ್ಯಾಕ್‌ ಕಿಟ್‌ ನೀಡಿದ್ದಕ್ಕೆ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಧ್ರುವ ಪಾಟೀಲ್‌ ಹಾಗು ಕೆಎಸ್‌ಡಿಎಲ್‌ಗೂ ಧನ್ಯವಾದ ಸಲ್ಲಿಸುತ್ತೇನೆ ಎಂದರು. ಅರಣ್ಯ ಸಿಬ್ಬಂದಿಗೆ ಅತೀ ಅವಶ್ಯಕವಾಗಿ ಬೇಕಾದ ಗುಣ ಮಟ್ಟದ ವಸ್ತುಗಳನ್ನು ನೀಡಲಾಗಿದೆ. ಸಿಬ್ಬಂದಿ ಕಷ್ಟ ಗಮನಿಸಿದ ಧ್ರುವ ಪಾಟೀಲರ ಪರಿಸರ ಕಾಳಜಿ ಕುರಿತು ಪ್ರಶಂಶಿಸಿದಲ್ಲದೆ ನಿಮ್ಮ ಸೇವೆ ಮುಂದವರಿಸಿ ಎಂದು ಸಲಹೆ ನೀಡಿದರು.

ಬಂಡೀಪುರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್.ಪಿ.ನವೀನ್‌ ಕುಮಾರ್‌, ಬಂಡೀಪುರ ವಲಯ ಅರಣ್ಯಾಧಿಕಾರಿ ಮಹದೇವ್‌, ಗೋಪಾಲಸ್ವಾಮಿ ಬೆಟ್ಟ ವಲಯ ಅರಣ್ಯಾಧಿಕಾರಿ ಬಿ.ಎಂ.ಮಲ್ಲೇಶ್‌,ಕುಂದಕೆರೆ ವಲಯ ಅರಣ್ಯಾಧಿಕಾರಿ ವೈರಮುಡಿ, ಕೆಎಸ್‌ಡಿಎಲ್‌ನ ಅಧಿಕಾರಿಗಳಾದ ಎಸ್.ಲೋಕೇಶ್‌, ನಾಗೇಂದ್ರ,ಮನೋಜ್‌ ಇದ್ದರು.