)
ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ಡಿ.9ರಿಂದ ರಾಷ್ಟ್ರೀಯ ಜಂತು ಹುಳು ನಿವಾರಣಾ ಅಭಿಯಾನ ನಡೆಸಲಾಗುತ್ತಿದ್ದು, ಈವರೆಗೆ 13 ಲಕ್ಷ ಮಕ್ಕಳಿಗೆ ಜಂತುಹುಳು ನಿವಾರಣೆಯ ಅಲ್ಬೆಂಡಾಜೋಲ್ ಮಾತ್ರೆ ವಿತರಣೆ ಮಾಡಲಾಗಿದೆ ಎಂದು ಬಿಬಿಎಂಪಿ ಸಾರ್ವಜನಿಕ ಆರೋಗ್ಯಾಧಿಕಾರಿ ಡಾ.ಸೈಯದ್ ಸಿರಾಜುದ್ದೀನ್ ಮದಿನಿ ತಿಳಿಸಿದ್ದಾರೆ.
ಅಪೌಷ್ಟಿಕತೆ ಮತ್ತು ರಕ್ತಹೀನತೆ ನಿವಾರಿಸುವ ನಿಟ್ಟಿನಲ್ಲಿ ದೇಹದೊಳಗಿನ ಜಂತು ಹುಳು ನಿವಾರಣೆಗೆ 1 ರಿಂದ 19 ವರ್ಷದೊಳಗಿನ ಮಕ್ಕಳಿಗೆ ಅಲ್ಬೆಂಡಾಜೋಲ್ ಮಾತ್ರೆ ನೀಡಲಾಗುತ್ತಿದೆ. ಈ ಕುರಿತು ಡಿ.9ರಿಂದ ನಗರದಾದ್ಯಂತ ಅಭಿಯಾನ ನಡೆಸಲಾಗುತ್ತಿದ್ದು, ಡಿ.19 ಅಭಿಯಾನ ಕೊನೆಯಾಗಲಿದೆ. ನಗರದಲ್ಲಿ 1545 ಅಂಗನವಾಡಿ, 192 ಕಾಲೇಜು ಹಾಗೂ 1254 ಶಾಲೆಗಳು ಸೇರಿದಂತೆ 20 ಲಕ್ಷಕ್ಕೂ ಅಧಿಕ 1 ರಿಂದ 19 ವರ್ಷದೊಳಗಿನ ಮಕ್ಕಳಿದ್ದಾರೆ ಎಂದು ಅಂದಾಜಿಸಲಾಗಿದೆ. ಅಭಿಯಾನದ ಮೊದಲ ದಿನವೇ ನಗರದ ಅಂಗನವಾಡಿ, ಬಿಬಿಎಂಪಿ, ಸರ್ಕಾರಿ ಹಾಗೂ ಅನುದಾನಿತ ಶಾಲಾ-ಕಾಲೇಜಿನ 13 ಲಕ್ಷ ಮಕ್ಕಳಿಗೆ ಮಾತ್ರೆ ನೀಡಲಾಗಿದೆ. ಮನೆಯಲ್ಲಿರುವ ಮಕ್ಕಳಿಗೆ ಮಾತ್ರೆ ನೀಡುವುದಕ್ಕೆ ಆಯಾ ವಾರ್ಡ್ನ ಆಶಾ ಕಾರ್ಯಕರ್ತರ ಮೂಲಕ ತಲುಪಿಸಲಾಗುತ್ತದೆ ಎಂದು ವಿವರಿಸಿದರು.
ದೇಹದ ಹೊರಗಿನ ಕಾಳಜಿ ಜತೆಗೆ ಚಿಕ್ಕ ವಯಸ್ಸಿನಲ್ಲಿ ದೇಹದೊಳಗಾಗುವ ಈ ಜಂತು ಹುಳು ನಿವಾರಣೆಗೆ ಈ ಮಾತ್ರೆ ಪಡೆಯುವುದು ಅವಶ್ಯಕ. ಪ್ರತಿ 6 ತಿಂಗಳಿಗೊಮ್ಮೆ ಈ ಮಾತ್ರೆ ಸೇವಿಸಬಹುದಾಗಿದೆ. ಶಾಲೆಯಿಂದ ಮನೆಗೆ ಹೋದ ಬಳಿಕ ಕೈ-ಕಾಲು ಸರಿಯಾಗಿ ಸ್ವಚ್ಛ ಮಾಡಿಕೊಳ್ಳಬೇಕು. ಮನೆ ಸುತ್ತಲು ಉತ್ತಮ ಪರಿಸರ ಇರುವಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಸಹ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಅದಕ್ಕಾಗಿ ಪ್ರತಿ ಶಾಲೆ-ಕಾಲೇಜಿನ ಒಬ್ಬ ಶಿಕ್ಷಕರಿಗೆ ತರಬೇತಿ ಸಹ ನೀಡಲಾಗಿದೆ ಎಂದು ತಿಳಿಸಿದರು.
ಮಕ್ಕಳು ಯಾವುದೇ ಭಯಕ್ಕೆ ಒಳಗಾಗದೆ ಲಘು ಉಪಹಾರ ಪಡೆದ ಬಳಿಕ ಇದನ್ನು ಈ ಮಾತ್ರೆ ಸೇವಿಸಬೇಕು. ಚಾಕ್ಲೇಟ್ ಚೀಪಿದಂತೆ ಚೀಪಬೇಕು. ಇದರಿಂದ ಯಾವುದೇ ಅಡ್ಡ ಪರಿಣಾಮ ಇಲ್ಲ ಎಂದು ತಿಳಿಸಿದರು.
ಈವರೆಗೆ ಅಲ್ಬೆಂಡಾಜೋಲ್ ಮಾತ್ರೆಯನ್ನು ಮಕ್ಕಳಿಗೆ ನೀಡಿಲ್ಲ ಎಂದರೆ ಬಿಬಿಎಂಪಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಆಶಾ ಕಾರ್ಯಕರ್ತರು ಅಥವಾ ಅಂಗನವಾಡಿ ಕಾರ್ಯಕರ್ತರಿಂದ ಕೇಳಿ ಪಡೆದು ನೀಡಬೇಕೆಂದು ಫೋಷಕರಲ್ಲಿ ಮನವಿ ಮಾಡಿದ್ದಾರೆ.