ಮದುವೆಯಲ್ಲಿ ಸಸಿ ವಿತರಣೆ, ಕಾರ್ಖಾನೆ ವಿರೋಧಿ ಸಂದೇಶ

KannadaprabhaNewsNetwork | Published : Jun 6, 2025 1:13 AM
ಬಲ್ಡೋಟಾ ಕಾರ್ಖಾನೆ ತೊಲಗಲಿ, ಕೊಪ್ಪಳ ಜನರ ಜೀವ ಉಳಿಯಲಿ, ಗವಿಶ್ರೀಗಳು ಹೇಳಿದ ಕಾರ್ಖಾನೆ ಸ್ಥಾಪನೆ ತೊಟ್ಟಿಲು ತೂಗುವ ಕೈಗಿಂತ ಮಸಣಕ್ಕೆ ಸೇರುವವರ ಸಂಖ್ಯೆ ಹೆಚ್ಚು ಮಾಡುತ್ತದೆ ಎಂಬ ಘೋಷಣೆ ಹಾಕಲಾಯಿತು.

ಕೊಪ್ಪಳ:

ಇಲ್ಲಿನ ಪ್ಯಾಟಿ ಈಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಗುರುವಾರ ಜರುಗಿದ ಗೊಂಡಬಾಳ ಕುಟುಂಬದ ಮದುವೆ ಸಮಾರಂಭದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಪರಿಸರ ಜಾಗೃತಿ ಮತ್ತು ಕೊಪ್ಪಳ ಹತ್ತಿರದ ಕಾರ್ಖಾನೆ ವಿರೋಧಿ ಸಂದೇಶ ಸಾರಲಾಯಿತು. ಹೋರಾಟಗಾರರಾದ ಮಂಜುನಾಥ ಜಿ. ಗೊಂಡಬಾಳ ಮತ್ತು ಜ್ಯೋತಿ ಎಂ. ಗೊಂಡಬಾಳ ತಮ್ಮ ಸಹೋದರ ಸಂಬಂಧಿ ಜಗದೀಶ ಈರಣ್ಣ ಗೊಂಡಬಾಳ ಮತ್ತು ಅನಿತಾ ಮುದಿಯಪ್ಪ ತಾವರಗೇರಿ ಅವರ ಮದುವೆ ಸಮಾರಂಭದಲ್ಲಿ ಸಸಿ ವಿತರಣೆ ಮತ್ತು ಕಾರ್ಖಾನೆ ವಿರೋಧಿಸುವ ಕುರಿತು ಜಾಗೃತಿ ಮೂಡಿಸಲಾಯಿತು.ಬಲ್ಡೋಟಾ ಕಾರ್ಖಾನೆ ತೊಲಗಲಿ, ಕೊಪ್ಪಳ ಜನರ ಜೀವ ಉಳಿಯಲಿ, ಗವಿಶ್ರೀಗಳು ಹೇಳಿದ ಕಾರ್ಖಾನೆ ಸ್ಥಾಪನೆ ತೊಟ್ಟಿಲು ತೂಗುವ ಕೈಗಿಂತ ಮಸಣಕ್ಕೆ ಸೇರುವವರ ಸಂಖ್ಯೆ ಹೆಚ್ಚು ಮಾಡುತ್ತದೆ ಎಂಬ ಘೋಷಣೆ ಹಾಕಲಾಯಿತು.ಈ ವೇಳೆ ಆನಂದ ಗೊಂಡಬಾಳ, ಮಂಜುನಾಥ ಸೊರಟೂರ, ಶರಣಪ್ಪ ನಾಯಕ, ರುಕ್ಮಣ್ಣ ಶ್ಯಾವಿ, ಶ್ರೀಶೈಲಪ್ಪ ನಿಡಶೇಶಿ, ಚನ್ನಪ್ಪ ರೋಣದ, ಮಲ್ಲಿಕಾರ್ಜುನ ಸಿದ್ನೆಕೊಪ್ಪ, ಈರಣ್ಣ ಗೊಂಡಬಾಳ, ಹನುಮಂತ ಗೊಂಡಬಾಳ, ಹನುಮಂತ ನಾಯಕ, ರಾಘವೇಂದ್ರ ಅನೇಕರು ಇದ್ದರು.

ಈಶ್ವರ ಪಾರ್ಕ್‌:

ಇಲ್ಲಿನ ಈಶ್ವರ ದೇವಸ್ಥಾನದ ಈಶ್ವರ ಪಾರ್ಕನಲ್ಲಿ ಕಳಸ ಸೇವಾ ಸಮಿತಿ ಪದಾಧಿಕಾರಿಗಲ ಆಯ್ಕೆ ಮಾಡಿ ಪರಿಸರ ದಿನಾಚರಣೆ ನಿಮಿತ್ತ ಗಿಡ ನೆಡಲಾಯಿತು.

ಸೇವಾ ಸಮಿತಿ ಮಹಿಳೆಯರು ಈಶ್ವರ ದೇವರಿಗೆ ಸಸಿಗಳೊಂದಿಗೆ ಪೂಜೆ ಸಲ್ಲಿಸಿದರು. ಅಧ್ಯಕ್ಷರಾಗಿ ವೀರಮ್ಮ ಪೂಜಾರ, ಉಪಾಧ್ಯಕ್ಷರಾಗಿ ಶಿವಲೀಲಾ ಹಿರೇಮಠ, ಕಾರ್ಯದರ್ಶಿಯಾಗಿ ಭಾಗ್ಯಶ್ರೀ ಆಯ್ಕೆಯಾಗಿದ್ದಾರೆ. ಕಲಾವಿದರಾದ ಅಮೃತ ಜವಳಿ ಮತ್ತು ಶಿವಯ್ಯ ಹಿರೇಮಠ ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಸೇವಾ ಸಮಿತಿ ಸದಸ್ಯರು ಹಾಜರಿದ್ದರು.

ಮಾಸ್ತಿ ಪಬ್ಲಿಕ್ ಸ್ಕೂಲ್:

ನಗರದ ಮಾಸ್ತಿ ಪಬ್ಲಿಕ್ ಸ್ಕೂಲ್‌ನಲ್ಲಿ ಪರಿಸರ ದಿನ ಆಚರಿಸಲಾಯಿತು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಹುಲಗಪ್ಪ ಕಟ್ಟಿಮನಿ ಮಾತನಾಡಿ, ನಾವೆಲ್ಲ ಪರಿಸರದ ಬಗ್ಗೆ ಜಾಗೃತಿ ಮತ್ತು ರಕ್ಷಣೆಯ ಮಹತ್ವ ಅರಿತುಕೊಳ್ಳಬೇಕು. ಜೀವಿಗಳ ಪೋಷಣೆಯಲ್ಲಿ ಪರಿಸರ ಪ್ರಮುಖ ಪಾತ್ರ ವಹಿಸುತ್ತದೆ. ಪರಿಸರದ ಸಮೃದ್ಧಿ ಆರೋಗ್ಯಕರ ಜೀವನ ಮತ್ತು ಭೂಮಿಯ ಮೇಲಿನ ಪ್ರತಿಯೊಂದು ಜೀವಿಯ ಜೀವನದ ಅಸ್ಥಿತ್ವಕ್ಕೆ ಕಾರಣವಾಗಿದೆ ಎಂದರು.

ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ:

ಸಕಲ ಜೀವ ರಾಶಿಯನ್ನು ಪೋಷಿಸುವ ಪ್ರಕೃತಿ ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು,

ಜಿಲ್ಲಾಡಳಿತ ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ನಗರಸಭೆ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಏಕ್ ಪೇಡ್ ಮಾಕೆ ನಾಮ್ ಎಂಬ ಘೋಷ ವಾಕ್ಯದ ಅಡಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಜಾಗತಿಕವಾಗಿ ಪ್ಲಾಸ್ಟಿಕ್ ಮಾಲಿನ್ಯ ಕೊನೆಗೊಳಿಸುವುದು ಕೂಡ ನಮ್ಮ ಜವಾಬ್ದಾರಿ. ಇದರ ಬಗ್ಗೆ ಕಾಳಜಿ ವಹಿಸಿ ಶ್ರಮಿಸಬೇಕು ಎಂದ ಅವರು, ಪ್ರತಿಯೊಬ್ಬರು ತಮ್ಮ ಮನೆ ಮುಂದೆ ಒಂದೊಂದು ಗಿಡ-ಮರ ಬೆಳೆಸಬೇಕು. ತಮ್ಮ ಮನೆಯ ಮುಂದಿನ ಪರಿಸರವನ್ನು ಸ್ವಚ್ಛವಾಗಿಡಬೇಕು ಎಂದರು.

ನಗರಸಭೆ ಉಪಾಧ್ಯಕ್ಷೆ ಅಶ್ವಿನಿ ಗದುಗಿನಮಠ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಸಯ್ಯಸ್ವಾಮಿ ಹಿರೇಮಠ, ಸದಸ್ಯರಾದ ಅಕ್ಬರ್ ಪಾಷಾ ಪಲ್ಟನ್, ಆಶ್ರಯ ಕಮಿಟಿ ಸದಸ್ಯರಾದ ಪರಶುರಾಮ್ ಕೆರೆಹಳ್ಳಿ, ಮಹಿಳಾ ಸದಸ್ಯರಾದ ಪದ್ಮಾವತಿ ಕಾಂಬಳೆ, ನಗರಸಭೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾದ ಮಧುರ, ಕೌಶಲ್ಯಾಭಿವೃದ್ಧಿ ಇಲಾಖೆಯ ಅಹಮದ್ ಹುಸೇನ್, ನಗರಸಭೆ ಪರಿಸರ ಇಲಾಖೆಯ ಜಯಶೀಲ, ಸಲೀಂ ಡಫೆದಾರ್, ಮೆಹಬೂಬ್ ಅರಗಂಜಿ ಸೇರಿದಂತೆ ಇತರರು ಇದ್ದರು.