ಕನ್ನಡಪ್ರಭ ವಾರ್ತೆ ಮೈಸೂರು
ಬುಡಕಟ್ಟು ಜನಾಂಗದ ಅಭಿವೃದ್ಧಿ ಯೋಜನೆಯಡಿ ತರಬೇತಿ, ಬೀಜ ಮತ್ತು ಕೃಷಿ ಪರಿಕರಗಳ ವಿತರಣಾ ಕಾರ್ಯಕ್ರಮವನ್ನು ಎಚ್.ಡಿ. ಕೋಟೆ ತಾಲೂಕು ಬಸವನಗಿರಿ ಹಾಡಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.ಬೆಂಗಳೂರಿನ ಜಿಕೆವಿಕೆಯ ಕೃಷಿ ವಿವಿಯು ಬುಡಕಟ್ಟು ಜನಾಂಗದ ಅಭಿವೃದ್ಧಿ ಯೋಜನೆಯಡಿ ಬರುವ ಬುಡಕಟ್ಟು ಉಪಯೋಜನೆಯಿಂದ ಬೀಜ ಮತ್ತು ಕೃಷಿ ಪರಿಕರಗಳ ವಿತರಣೆಯ ಜೊತೆ ತರಬೇತಿ ಆಯೋಜಿಸಿತ್ತು.
ಸುಮಾರು 200 ಬುಡಕಟ್ಟು ಫಲಾನುಭವಿಗಳಿಗೆ ಬೀಜ ಮತ್ತು ಕೃಷಿ ಪರಿಕರ ವಿತರಿಸಲಾಯಿತು. ಮೊದಲಿಗೆ ಎಚ್.ಡಿ. ಕೋಟೆ ತಾಲೂಕಿನ ಸುತ್ತಮುತ್ತಲಿನ ಬುಡಕಟ್ಟು ಜನಾಂಗದ ಹಾಡಿಗಳಲ್ಲಿ ಸಮೀಕ್ಷೆ ಕೈಗೊಂಡು, ಬುಡಕಟ್ಟು ಜನಾಂಗದ ಬೇಡಿಕೆಯಂತೆ ಬೀಜ ಮತ್ತು ಕೃಷಿ ಪರಿಕರ ವಿತರಿಸಲು ಬಸವನಗಿರಿ ಹಾಡಿ, ಎಚ್.ಡಿ. ಕೋಟೆ ತಾಲೂಕು ಸುತ್ತಮುತ್ತಲಿನ 200 ಜನ ಬುಡಕಟ್ಟು ಜನಾಂಗದ ಫಲಾನುಭವಿಗಳನ್ನು ಗುರುತಿಸಿ ಅವರಿಂದ ಆರ್.ಟಿ.ಸಿ, ಜಾತಿ ಪ್ರಮಾಣ ಪತ್ರ ಮತ್ತು ಆಧಾರ್ ಕಾರ್ಡ್ ಪ್ರತಿ ಪಡೆದುಕೊಂಡು ಕಾರ್ಯಕ್ರಮ ಆಯೋಜಿಸಲಾಯಿತು.ಜಿಕೆವಿಕೆಯ ಬೀಜ ವಿಭಾಗದ ವಿಶೇಷ ಅಧಿಕಾರಿ ಡಾ.ಕೆ. ಮಧುಸೂದನ್ಉದ್ಘಾಟಿಸಿ, ಬೀಜ ಮತ್ತು ಕೃಷಿ ಪರಿಕರ ವಿತರಿಸಿ ಮಾತನಾಡಿ, ಯೋಜನೆಯ ಸದುಪಯೋಗ ಪಡೆಸಿಕೊಳ್ಳಬೇಕು. ಈ ಎಲ್ಲಾ ಬೀಜ ಮತ್ತು ಕೃಷಿ ಪರಿಕರವನ್ನು ಸದುಪಯೋಗಸಿಕೊಂಡು ಹೆಚ್ಚಿನ ಇಳುವರಿ ಪಡೆದು ಬೇರೆ ರೈತರಿಗೆ ಮಾದರಿಯಾಗಬೇಕು ಎಂದು ಅವರು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ಡಾ.ಸಿ. ರಾಮಚಂದ್ರ ಮಾತನಾಡಿ, ಕೃಷಿ ಮೌಲ್ಯವರ್ಧನೆ, ಸಮಗ್ರ ಕೃಷಿ ಬೇಸಾಯ ಪದ್ಧತಿ ಹಾಗೂ ಆಧುನಿಕ ಕೃಷಿ ಪದ್ಧತಿಗಳ ಬಗ್ಗೆ ಮಾಹಿತಿ ನೀಡಿದರು.ಬೆಂಗಳೂರು ಕೃಷಿ ವಿವಿಯ ಬುಡಕಟ್ಟು ರೈತ ಉತ್ಪಾದಕರ ಕಂಪನಿ ಅಧ್ಯಕ್ಷ ಕಾಳಕಲ್ಕರ್ ಮಾತನಾಡಿ, ಬೀಜ ಹಾಗೂ ಕೃಷಿ ಪರಿಕರ ಸದುಪಯೋಗಪಡಿಸಿಕೊಂಡು ತಮ್ಮ ವೈಯಕ್ತಿಕ ಜೀವನ ಅಭಿವೃದ್ಧಿಪಡಿಸಿಕೊಳ್ಳಬೇಕು. ಇದರ ಜೊತೆಗೆ ಮುಂದಿನ ದಿನಗಳಲ್ಲಿ ಇದೇ ರೀತಿ ಹೆಚ್ಚಿನ ಕಾರ್ಯಕ್ರಮ ನಡೆಸಿಕೊಡುವಂತೆ ಕೃಷಿ ವಿಶ್ವವಿದ್ಯಾನಿಲಯಕ್ಕೆ ಮನವಿ ಮಾಡಿದರು.
ಬುಡಕಟ್ಟು ರೈತ ಉತ್ಪಾದಕರ ಕಂಪನಿ ನಿರ್ದೇಶಕ ಜಿ. ಸ್ವಾಮಿ ಮಾತನಾಡಿ, ಬುಡಕಟ್ಟು ಜನಾಂಗದವರು ಇದರ ಪ್ರಯೋಜ ಪಡೆದುಕೊಂಡು, ಹೊಸ ತಳಿಗಳ ಬೀಜಗಳನ್ನು ಬಿತ್ತನೆ ಮಾಡಿ ಹೆಚ್ಚು ಉತ್ಪಾದನೆ ಪಡೆದು ಆರ್ಥಿಕವಾಗಿ ಸದೃಡರಾಗಬೇಕು ಎಂದು ತಿಳಿಸಿದರು.ಬಸವನಗಿರಿ ಬಿ. ಹಾಡಿಯ ಯಜಮಾನರಾದ ವಿಠ್ಠಲ್ ನಾನ್ಚಿ ಮಾತನಾಡಿ, ಮುಂದಿನ ದಿನಗಳಲ್ಲಿ ಬುಡಕಟ್ಟು ರೈತರಿಗೆ ಅಭಿವೃದ್ಧಿ ಕುರಿತು ತರಬೇತಿ ನೀಡಬೇಕು. ಗ್ರಾಪಂ ಸದಸ್ಯೆ ಲಕ್ಷ್ಮೀ, ಬುಡಕಟ್ಟು ರೈತ ಉತ್ಪಾದಕರ ಕಪನಿಯ ಮುಖ್ಯ ಕಾರ್ಯನಿರ್ವಾಹಕ ನವೀನ್, ತಾಂತ್ರಿಕ ಸಮಾವೇಶದಲ್ಲಿ ಬೀಜ ಸಂಶೋಧನಾಧಿಕಾರಿ ಡಾ. ಕೆ. ವಿಶ್ವನಾಥ್, ಸಹಾಯಕ ಬೀಜೋತ್ಪಾದನಾ ಅಧಿಕಾರಿ ಡಾ.ಬಿ. ಬಸವರಾಜ, ಸಹಾಯಕ ಪ್ರಾಧ್ಯಾಪಕ ಡಾ.ಎನ್. ಗಂಗರಾಜು ತಾಂತ್ರಿಕ ಮಾಹಿತಿ ನೀಡಿದರು.
ಬೀಜ ಸಂಶೋಧನಾ ಅಧಿಕಾರಿ ಡಾ.ಕೆ. ವಿಶ್ವನಾಥ್ ಸ್ವಾಗತಿಸಿದರು. ಸಹಾಯಕ ಬೀಜೋತ್ಪಾದನಾ ಅಧಿಕಾರಿ ಡಾ.ಬಿ. ಬಸವರಾಜ ವಂದಿಸಿದರು.