ಜಾತಿ ಜನಗಣತಿ ಸಂದರ್ಭ ಕೊಡವರು ಜಾತಿ-ಭಾಷೆ-ಧರ್ಮದ ಕಾಲಂನಲ್ಲಿ ‘ಕೊಡವ’ ಎಂದೇ ಬರೆಸಬೇಕೆನ್ನುವ ಕುರಿತು ಮತ್ತು ಸಂಸತ್ ಹಾಗೂ ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನ್ನಿಧ್ಯ ನೀಡಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮೂರ್ನಾಡಿನಲ್ಲಿ 13ನೇ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಬಾಂಗ್ಲಾದೇಶಿಗರು, ರೋಹಿಂಗ್ಯಗಳು, ಜಾರ್ಖಂಡ್, ಅಸ್ಸಾಂ ಮತ್ತು ಮಧ್ಯಪ್ರದೇಶದ ಅಕ್ರಮ ವಲಸಿಗರು ಕೊಡಗು ಜಿಲ್ಲೆಯಲ್ಲಿ ಕಾರ್ಮಿಕರ ರೂಪದಲ್ಲಿ ಆಶ್ರಯ ಪಡೆದಿದ್ದಾರೆ. ಜಾತಿ ಜನಗಣತಿಯ ಸಂದರ್ಭ ಇವರನ್ನು ಸಕ್ರಮಗೊಳಿಸಿದರೆ ಮತ್ತು ಇವರಿಂದ ಕಾನೂನು ಉಲ್ಲಂಘನೆಯಾದರೆ ಅದಕ್ಕೆ ಜಿಲ್ಲಾಡಳಿತವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಅಧ್ಯಕ್ಷ ಎನ್.ಯು.ನಾಚಪ್ಪ ಎಚ್ಚರಿಕೆ ನೀಡಿದ್ದಾರೆ.ಜಾತಿ ಜನಗಣತಿ ಸಂದರ್ಭ ಕೊಡವರು ಜಾತಿ-ಭಾಷೆ-ಧರ್ಮದ ಕಾಲಂನಲ್ಲಿ ‘ಕೊಡವ’ ಎಂದೇ ಬರೆಸಬೇಕೆನ್ನುವ ಕುರಿತು ಮತ್ತು ಸಂಸತ್ ಹಾಗೂ ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನ್ನಿಧ್ಯ ನೀಡಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮೂರ್ನಾಡಿನಲ್ಲಿ ನಡೆಸಿದ 13ನೇ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ರಾಜ್ಯ ಸರ್ಕಾರದ ವತಿಯಿಂದ ಸೆ.22ರಿಂದ ಅ.7ರ ವರೆಗೆ ನಡೆಯಲಿರುವ ಜಾತಿವಾರು ಗಣತಿಯ ಸಂದರ್ಭ ಜಾತಿ-ಭಾಷೆ-ಧರ್ಮದ ಕಾಲಂನಲ್ಲಿ ‘ಕೊಡವ’ ಎಂದೇ ಬರೆಸುವ ಮೂಲಕ ಆ್ಯನಿಮಿಸ್ಟಿಕ್ ಏಕ-ಜನಾಂಗೀಯ ಆದಿಮಸಂಜಾತ ಕೊಡವರ ಸಮಗ್ರ ಸಬಲೀಕರಣಕ್ಕೆ ಕೊಡವರು ಕಟಿಬದ್ಧರಾಗಿರಬೇಕು ಎಂದು ಕರೆ ನೀಡಿದರು.
ಜಾತಿ ಜನಗಣತಿಯಲ್ಲಿ ಉತ್ತಮ ನಾಳೆಗಾಗಿ ಮತ್ತು ಅತ್ಯಂತ ನಗಣ್ಯ ಆ್ಯನಿಮಿಸ್ಟೆಕ್ ಏಕ-ಜನಾಂಗೀಯ ಆದಿಮಸಂಜಾತ ಕೊಡವರ ಸಮಗ್ರ ಸಬಲೀಕರಣಕ್ಕಾಗಿ ಜಾತಿ-ಭಾಷೆ, ಭಾಷೆ, ಧರ್ಮದ ಕಾಲಂನಲ್ಲಿ ‘ಕೊಡವ’ ಎಂದೇ ನಮೂದಿಸುವಂತೆ ಸಲಹೆ ನೀಡಿದರು.ಕೊಡವರು ಯಾವುದೇ ಪಂಥಗಳು ಅಥವಾ ಉಪಪಂಗಡಗಳಿಲ್ಲದ ಏಕೈಕ, ಏಕ-ಜನಾಂಗೀಯ ಗುಂಪಾಗಿದ್ದು, ವಿಶಿಷ್ಟ ಗುರುತು, ಭಾಷೆ ಮತ್ತು ಸಂಸ್ಕೃತಿಯನ್ನು ಹೊಂದಿರುವ ವಿಭಿನ್ನ ಸಮುದಾಯದವರಾಗಿದ್ದಾರೆ ಎಂದರು.
ಕೊಡವ ಲ್ಯಾಂಡ್ಗೆ ಹಾಗೂ ಕೊಡವರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಇಲ್ಲಿಯವರೆಗೆ ಬಿರುನಾಣಿ, ಕಡಂಗ, ಟಿ.ಶೆಟ್ಟಿಗೇರಿ, ಕಕ್ಕಬ್ಬೆ, ಬಾಳೆಲೆ, ಪೊನ್ನಂಪೇಟೆ, ನಾಪೋಕ್ಲು, ಮಾದಾಪುರ, ಸುಂಟಿಕೊಪ್ಪ ಮತ್ತು ಸಿದ್ದಾಪುರ, ವಿರಾಜಪೇಟೆ, ಗೋಣಿಕೊಪ್ಪದಲ್ಲಿ ಮಾನವ ಸರಪಳಿ ಕಾರ್ಯಕ್ರಮವನ್ನು ಶಾಂತಿಯುತವಾಗಿ ನಡೆಸಿ ಜನಜಾಗೃತಿ ಮೂಡಿಸಲಾಗಿದೆ.
ಸೆ.30ರಂದು ಬೆಳಗ್ಗೆ 10.30 ಗಂಟೆಗೆ ಬೇಂಗ್ ನಾಡಿನ ಚೇರಂಬಾಣೆಯಲ್ಲಿ 14ನೇ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದರು.ಬಿದ್ದಂಡ ಉಷಾ ದೇವಮ್ಮ, ಪಾಲಂದೀರ ರೀಟಾ, ಬಿದ್ದಂಡ ನೀತು, ನುಚ್ಚಿಮಣಿಯಂಡ ಸ್ವಾತಿ, ತಿರ್ಕಚೇರಿರ ಅನಿತಾ, ಚಂಞಂಡ ಕನ್ನಿಕ ಸೂರಜ್, ಕೊಚ್ಚೆರ ನಿಧಿ, ಚೊಟ್ಟೇರ ಪವಿತ್ರ, ಸರ್ವಶ್ರೀ ನಂದೇಟಿರ ರವಿ, ಬಡುವಂಡ ವಿಜಯ, ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷ ಪುದಿಯೋಕ್ಕಡ ಕಾಶಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.