ಜಿಲ್ಲೆಯ ಅಕ್ಕಪಡೆ ಮಹಿಳಾ ಪೊಲೀಸರು ರಾಜ್ಯಕ್ಕೆ ಮಾದರಿ: ಎಸ್‌ಪಿ

KannadaprabhaNewsNetwork | Published : Feb 29, 2024 2:04 AM

ಸಾರಾಂಶ

: ಅಕ್ಕಪಡೆ ಮಹಿಳಾ ಪೊಲೀಸರು ರಾಜ್ಯದಲ್ಲಿ ಮಾದರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಪಡೆ ರಚನೆಯಾದ ನಂತರ ಜಿಲ್ಲೆಯಲ್ಲಿ ಮಹಿಳೆಯರ ಮೇಲಿನ ಅಪರಾಧಗಳ ಸಂಖ್ಯೆ ಕಡಿಮೆಯಾಗಿವೆ: ಅಕ್ಕಪಡೆ ಮಹಿಳಾ ಪೊಲೀಸರು ರಾಜ್ಯದಲ್ಲಿ ಮಾದರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಪಡೆ ರಚನೆಯಾದ ನಂತರ ಜಿಲ್ಲೆಯಲ್ಲಿ ಮಹಿಳೆಯರ ಮೇಲಿನ ಅಪರಾಧಗಳ ಸಂಖ್ಯೆ ಕಡಿಮೆಯಾಗಿವೆ.

ಬೀದರ್‌: ಅಕ್ಕಪಡೆ ಮಹಿಳಾ ಪೊಲೀಸರು ರಾಜ್ಯದಲ್ಲಿ ಮಾದರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಪಡೆ ರಚನೆಯಾದ ನಂತರ ಜಿಲ್ಲೆಯಲ್ಲಿ ಮಹಿಳೆಯರ ಮೇಲಿನ ಅಪರಾಧಗಳ ಸಂಖ್ಯೆ ಕಡಿಮೆಯಾಗಿವೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ.ಎಸ್‌.ಎಲ್‌ ಶ್ಲಾಘಿಸಿದರು.

ಬುಧವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮದ ಅನುಷ್ಠಾನ ಕುರಿತು ಪೊಲೀಸ್‌ ತನಿಖಾಧಿಕಾರಿಗಳಿಗೆ ಮತ್ತು ಅಕ್ಕಪಡೆ ಮಹಿಳಾ ವಿಶೇಷ ಪೊಲೀಸ್‌ ಘಟಕಕ್ಕೆ ಜಿಲ್ಲಾ ಮಟ್ಟದ ಒಂದು ದಿನದ ಸಂವೇದನಾಶೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಕ್ಕ ಪಡೆಯ ತಂಡ ಶಾಲೆಗಳಿಗೂ ಭೇಟಿ ನೀಡುತ್ತಿದೆ. ಈ ವರ್ಷ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ವಿಶೇಷವಾಗಿ ಅಕ್ಕಪಡೆ ಆಚರಿಸಲಿದೆ ಎಂದರು.

ಅಕ್ಕ ಪಡೆಯವರಿಗಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ 35 ದ್ವಿಚಕ್ರ ವಾಹನಗಳ ಮಂಜೂರಾತಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿತ್ತು, ಮಂಜುರಾತಿ ಸಿಕ್ಕಿದೆ. ಯಾವುದೇ ಪ್ರಕರಣಗಳ ಮಾಹಿತಿ ಸಂಗ್ರಹಿಸುವಲ್ಲಿ ಪೊಲೀಸ್‌ ತನಿಖಾಧಿಕಾರಿಗಳ ಪಾತ್ರ ಬಹಳ ಮುಖ್ಯವಾಗಿದೆ ಎಂಬುವದನ್ನು ಎಲ್ಲರೂ ಅರಿತುಕೊಳ್ಳಬೇಕೆಂದು ಹೇಳಿದರು.

ಮಹಿಳೆಯರು ಇಂದು ಎಲ್ಲಾ ರಂಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಮಹಿಳೆ ತಾಯಿಯಾಗಿ, ಸಹೋದರಿಯಾಗಿ, ಮಡದಿಯಾಗಿ ಹಲವಾರು ಜವಾಬ್ದಾರಿಗಳನ್ನು ನಿಭಾಯಿಸುತ್ತಾಳೆ ಮತ್ತು ಅವಳಿಗೆ ಪುರುಷರಿಗೆ ಇರುವಷ್ಟು ಸಮಾನ ಹಕ್ಕುಗಳಿವೆ ಯಾರೂ ಲಿಂಗ ತಾರತಮ್ಯ ಮಾಡಬಾರದು, ತಾರತಮ್ಯ ಕಾನೂನಿನ ಪ್ರಕಾರ ಅಫರಾಧ ಎಂದು ಹೇಳಿದರು.

ಬಾಲ್ಯ ವಿವಾಹ, ಭ್ರೂಣಲಿಂಗ ಪತ್ತೆ, ಕಳವಳ:

ಉತ್ತರ ಕರ್ನಾಟಕ ಭಾಗದಲ್ಲಿ ಇನ್ನೂ ಬಾಲ್ಯ ವಿವಾಹ, ಭ್ರೂಣಲಿಂಗ ಪತ್ತೆಯಂತಹ ಪ್ರಕರಣಗಳು ಅಲ್ಲಲ್ಲಿ ಕಂಡು ಬರುತ್ತಿದ್ದು, ಇವುಗಳನ್ನು ತಡೆಗಟ್ಟಲು ಎಲ್ಲರೂ ನಿಗಾವಹಿಸಬೇಕೆಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ತಿಳಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗುರುರಾಜ ಪ್ರಾಸ್ತಾವಿಕವಾಗಿ ಮಾತನಾಡಿ, 2014ರಿಂದ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮ ನಡೆಯುತ್ತಿದೆ ಈ ಅಭಿಯಾನದ ಉದ್ದೇಶ ಪುರುಷ ಮತ್ತು ಮಹಿಳೆಯರ ಲಿಂಗಾನುಪಾತ ಸಮಾನ ಮಾಡುವದರ ಜೊತೆಗೆ ಮಹಿಳಾ ಸಬಲೀಕರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒತ್ತು ನೀಡುತ್ತಿವೆ ಹಾಗೂ ಕಡಿಮೆ ಲಿಂಗಾನುಪಾತ ಇರುವ ಜಿಲ್ಲೆಗಳಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದು ಹೇಳಿದರು.

ಹಿರಿಯ ಸ್ತ್ರೀ ರೋಗ ತಜ್ಞೆ ಡಾ.ಆರತಿ ರಘು ಅವರು ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟುವಲ್ಲಿ ಪಿಸಿಪಿಎನ್‌ಡಿಟಿ ಕಾಯ್ದೆಯಡಿಯಲ್ಲಿ ರಚಿಸಿರುವ ಜಿಲ್ಲಾ ಸಲಹಾ ಮಂಡಳಿ ಪಾತ್ರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಲೋಕಾಯುಕ್ತ ಬೀದರ್‌ ವಿಶೇಷ ಸರ್ಕಾರಿ ಅಭಿಯೋಜಕ ಕೇಶವರಾವ್‌ ಶ್ರೀಮಾಳೆ ಪಿಸಿಪಿಎನ್‌ಡಿಟಿ 1994 ಕಾಯ್ದೆ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೆಶಕ ಪ್ರಭಾಕರ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಮಹೇಶ ಮೇಘಣ್ಣವರ್‌, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ರಜಿಯಾ ಬಳಬಟ್ಟಿ, ಪ್ರಾದೇಶಿಕ ಸಂಯೋಜಕರು ರೋಟರಿ ಕ್ಲಬ್‌ ನ್ಯೂ ಸೆಂಚುರಿ ಬೀದರ್‌ನ ಡಾ.ರಘು ಕೃಷ್ಣಮೂರ್ತಿ, ಧನಲಕ್ಷ್ಮೀ ಪಾಟೀಲ್‌, ಗೌರಿ ಶಂಕರ, ಅಕ್ಕಪಡೆ ಹಾಗೂ ಪೊಲೀಸ್‌ ತನಿಖಾಧಿಕಾರಿಗಳು ಸೇರಿದಂತೆ ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

Share this article