ನರಗುಂದ: ಬೆಣ್ಣೆಹಳ್ಳದ ಪ್ರವಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರು ತಾಲೂಕಿನ ಕುರ್ಲಗೇರಿ, ಸುರಕೋಡ, ಹದಲಿ, ಯಾವಗಲ್ಲ ಗ್ರಾಮದ ಸೇತುವೆಗಳಿಗೆ ಗುರುವಾರ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಅವರು, ಒಂದೇ ದಿನದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಮಳೆಯಾಗಿದ್ದರಿಂದ ತಾಲೂಕಿನಲ್ಲಿ ಮಳೆ ಆವಾಂತರ ಸೃಷ್ಟಿಸಿದೆ. ಆದ್ದರಿಂದ ನಮ್ಮ ಕಂದಾಯ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿ, ಬೆಣ್ಣೆ ಹಳ್ಳದ ಪಕ್ಕದ ಗ್ರಾಮಗಳ ಜನತೆ ಪ್ರವಾಹ ತಗ್ಗುವವರೆಗೆ ಜನತೆ ಹಳ್ಳಕ್ಕೆ ಬಟ್ಟೆ ತೊಳೆಯಲು, ಜಾನುವಾರುಗಳ ಮೈ ತೊಳೆಯಲು ಹೋಗಬಾರದೆಂದು ಡಂಗುರ ಸಾರಬೇಕೆಂದು ತಿಳಿಸಲಾಗಿದೆ.ಬೆಣ್ಣೆ ಹಳ್ಳದ ಪ್ರವಾಹದ ತಗ್ಗುವವರೆಗೆ ಅವರನ್ನು ಬೇರೆ ಕಡೆ ಸ್ಥಳಾಂತರ ಮಾಡಿ ಗಂಜಿ ಕೇಂದ್ರ ತೆರದು ಪ್ರವಾಹ ಸಂತಸ್ತರಿಗೆ ವ್ಯವಸ್ಥೆ ಮಾಡಬೇಕೆಂದು ತಿಳಿಸಲಾಗಿದೆ. ಮೇಲಾಗಿ ಹವಾಮಾನ ಇಲಾಖೆ ವರದಿ ಪ್ರಕಾರ ಇದೇ ರೀತಿ ಜೂ-15ರ ವರೆಗೆ ಈ ಭಾಗದಲ್ಲಿ ಮಳೆ ಆಗುವದೆಂದು ತಿಳಿಸಿದ್ದಾರೆ. ಆದ್ದರಿಂದ ತಾಲೂಕು ಆಡಳಿತ ಅಧಿಕಾರಿಗಳು ಮುಂದಿನ ಪ್ರವಾಹ ಪರಿಸ್ಥಿತಿ ಎದುರಿಸಲು ಸಿದ್ಧವಾಗಿರಬೇಕೆಂದು ಹೇಳಿದ್ದೇವೆ ಎಂದರು.
ತಹಸೀಲ್ದಾರ್ ಶ್ರೀಶೈಲ ತಳವಾರ ಮಾತನಾಡಿ, ಗುರುವಾರ ಬೆಣ್ಣೆ ಹಳ್ಳದ ಪ್ರವಾಹ ಎದುರಾಗುವ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಿದ್ದೇವೆ, ಆ ಗ್ರಾಮಸ್ಥರನ್ನು ಗಂಜಿ ಕೇಂದ್ರ ತೆರೆಯಲು ಕೇಳಿದಾಗ ಸದ್ಯಕ್ಕೆ ಅವಶ್ಯವಿಲ್ಲ ಬೇಡ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಇದೇ ರೀತಿ ಮಳೆ ಮುಂದುವರಿದರೆ ಅವಶ್ಯ ಇದ್ದ ಕಡೆ ಪ್ರವಾಹ ಸಂತ್ರಸ್ತರಿಗೆ ಗಂಜಿ ಕೇಂದ್ರ ತೆರೆದು ಮತ್ತು ಪ್ರವಾಹಕ್ಕೆ ಬರುವ ಗ್ರಾಮಗಳ ಜನತೆಯನ್ನು ಬೇರೆ ಕಡೆ ಸ್ಥಳಾಂತರ ಮಾಡಲು ತಾಲೂಕು ಆಡಳಿತ ಸಿದ್ಧವಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಉಪವಿಭಾಗಧಿಕಾರಿ ಎಂ. ಗಂಗಪ್ಪ, ಪಂಚಾಯತಿ ಆಡಳಿತ ಅಧಿಕಾರಿ ಎಚ್.ಬಿ. ಹುಲಗಣ್ಣವರ, ತಾಪಂ ಅಧಿಕಾರಿ ಎಸ್.ಕೆ. ಇನಾಮದಾರ, ಕಂದಾಯ ನಿರೀಕ್ಷಕ ಎಸ್.ಎಲ್. ಪಾಟೀಲ, ಐ.ವೈ. ಕಳಸಣ್ಣವರ, ಗ್ರಾಪಂ ಸಿಬ್ಬಂದಿ, ಸಿಬ್ಬಂದಿಗಳು ಇದ್ದರು.