ಮಂಗಳೂರು: ದುರ್ಗಮ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಮನೆ ಬಾಗಿಲಲ್ಲೇ ಆರೋಗ್ಯ ಸೇವೆಗಳನ್ನು ನೀಡುವ ಉದ್ದೇಶದಿಂದ ಸ್ಥಾಪಿಸಲಾಗಿರುವ ಸಂಚಾರಿ ಆರೋಗ್ಯ ಘಟಕಗಳಿಗೆ ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಒಟ್ಟು 81 ಸಂಚಾರಿ ಆರೋಗ್ಯ ಘಟಕಗಳಿಗೆ ಚಾಲನೆ ನೀಡಲಾಗಿದೆ. ಇದು ಸರ್ಕಾರದ ಜನಪರ ಯೋಜನೆಗಳ ಭಾಗ. ಸಂಪರ್ಕ ರಹಿತ ಮತ್ತು ಗುಡ್ಡ ಗಾಡು ಪ್ರದೇಶಗಳಿಗೆ ಈ ಅರೋಗ್ಯ ಸೇತು ವಾಹನಗಳು ತೆರಳಿ ಆರೋಗ್ಯ ಸೇವೆ ನೀಡಲಿವೆ ಎಂದು ಹೇಳಿದರು.
ಈ ವಾಹನದಲ್ಲಿ ಒಬ್ಬ ವೈದ್ಯರು, ಒಬ್ಬರು ನರ್ಸ್ ಮತ್ತು ಒಬ್ಬ ಲ್ಯಾಬ್ ಟೆಕ್ನಿಷಿಯನ್ ಇರಲಿದ್ದಾರೆ. ಅಗತ್ಯ ಔಷಧಗಳು, ಸಲಕರಣೆಗಳು, ತುರ್ತು ಆರೋಗ್ಯ ಪರಿಸ್ಥಿತಿಯ ನಿರ್ವಹಣೆಗೆ ಜೀವನಾವಶ್ಯಕ ಔಷಧಗಳೊಂದಿಗೆ ಈ ಆರೋಗ್ಯ ಸೇತು ವಾಹನವನ್ನು ಸಜ್ಜುಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದರು.ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಜಿಲ್ಲಾ ಪಂಚಾಯ್ತಿ ಸಿಇಒ ವಿನಾಯಕ್ ನರ್ವಡೆ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ, ವೆನ್ಲಾಕ್ ಅಧೀಕ್ಷಕ ಡಾ. ಶಿವಪ್ರಕಾಶ್, ಲೇಡಿಗೋಷನ್ ಆಸ್ಪತ್ರೆ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಮತ್ತಿತರರು ಇದ್ದರು.