ಪ್ರವಾಸಿಗರ ಸುರಕ್ಷತೆಗೆ ಜಿಲ್ಲಾ ಪೊಲೀಸ್‌ ಇಲಾಖೆ ಸೂಚನೆ

KannadaprabhaNewsNetwork | Published : Mar 14, 2025 12:30 AM

ಸಾರಾಂಶ

ಚಿಕ್ಕಮಗಳೂರು, ಲೈಸನ್ಸ್‌ನ ನಿಯಮಗಳನ್ನು ಉಲ್ಲಂಘಿಸಿದರೆ, ಪ್ರವಾಸಿಗರಿಗೆ ತೊಂದರೆಯಾದರೆ ಸಂಬಂಧಪಟ್ಟ ಹೋಂ ಸ್ಟೇ ಹಾಗೂ ರೆಸಾರ್ಟ್‌ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಡಾ. ವಿಕ್ರಂ ಅಮಟೆ ಸೂಚನೆ ನೀಡಿದ್ದಾರೆ.

- ಹೋಂ ಸ್ಟೇ, ರೆಸಾರ್ಟ್ ಮಾಲೀಕರ ಸಭೆ, ನಿಯಮ ಉಲ್ಲಂಘಿಸಿದ್ರೆ, ಪ್ರವಾಸಿಗರಿಗೆ ತೊಂದ್ರೆಯಾದ್ರೆ ಮಾಲೀಕರೆ ಹೊಣೆ, ಸಭೆಯಲ್ಲಿ ಎಸ್ಪಿ ಡಾ. ವಿಕ್ರಂ ಅಮಟೆ ಕಟ್ಟು ನಿಟ್ಟಿನ ಸೂಚನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಲೈಸನ್ಸ್‌ನ ನಿಯಮಗಳನ್ನು ಉಲ್ಲಂಘಿಸಿದರೆ, ಪ್ರವಾಸಿಗರಿಗೆ ತೊಂದರೆಯಾದರೆ ಸಂಬಂಧಪಟ್ಟ ಹೋಂ ಸ್ಟೇ ಹಾಗೂ ರೆಸಾರ್ಟ್‌ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಡಾ. ವಿಕ್ರಂ ಅಮಟೆ ಸೂಚನೆ ನೀಡಿದ್ದಾರೆ.

ಗಂಗಾವತಿ ತಾಲೂಕಿನ ಆನೆಗುಂದಿ ಗ್ರಾಮದ ರೆಸಾರ್ಟ್‌ವೊಂದರಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ದೌರ್ಜನ್ಯದ ಹಿನ್ನಲೆ ಯಲ್ಲಿ ಗುರುವಾರ ಜಿಲ್ಲಾ ಪಂಚಾಯ್ತಿಯಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆ ಆಯೋಜಿಸಿದ್ದ ಹೋಂ ಸ್ಟೇ ಹಾಗೂ ರೆಸಾರ್ಟ್‌ ಮಾಲೀಕರ ಸಭೆಯಲ್ಲಿ ಅವರು ಮಾತನಾಡಿದರು. ಆನೆಗುಂದಿ ಗ್ರಾಮದಲ್ಲಿ ನಡೆದ ಘಟನೆ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಕೆಲವು ನಿಯಮಗಳ ಪಾಲನೆ ಬಗ್ಗೆ ಸೂತ್ತೋಲೆ ಹೊರಡಿಸಿದೆ. ದೇಶಿ ಹಾಗೂ ವಿದೇಶಿ ಪ್ರವಾಸಿಗರ ಭದ್ರತೆ ಹಾಗೂ ಸುರಕ್ಷತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಪ್ರವಾಸಿಗರು ನಿರ್ಜನ ಪ್ರದೇಶದಲ್ಲಿ ರಾತ್ರಿ ವೇಳೆಯಲ್ಲಿ ನಕ್ಷತ್ರ ವೀಕ್ಷಣೆಗೆ ತೆರಳಲು ಇಚ್ಚಿಸಿದ್ದಲ್ಲಿ ಸಂಬಂಧಪಟ್ಟ ಹೋಂ ಸ್ಟೇ ಹಾಗೂ ರೆಸಾರ್ಟ್‌ ಮಾಲೀಕರು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದರ ಜತೆಗೆ ಸ್ಥಳೀಯ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು. ಆ ಪ್ರದೇಶ ಅರಣ್ಯ ಇಲಾಖೆಗೆ ಒಳಪಟ್ಟಿದ್ದೆಯಾದಲ್ಲಿ ಅರಣ್ಯ ಇಲಖೆಯಿಂದ ಅನುಮತಿ ಪಡೆಯಬೇಕು. ಈ ನಿಯಮ ಉಲ್ಲಂಘಿಸಿದರೆ ಅಥವಾ ಯಾವುದಾದರೂ ಅವಘಡ ಸಂಬಂಧಿಸಿದರೆ ಸಂಬಂಧಪಟ್ಟ ಮಾಲೀಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಪ್ರವಾಸಿಗರೊಂದಿಗೆ ಉದ್ದಟತನದಿಂದ ವರ್ತಿಸುವ ಸಾಧ್ಯತೆ ಹೆಚ್ಚಿರುತ್ತದೆ. ಇದಕ್ಕೆ ಮಾಲೀಕರೇ ಕಡಿವಾಣ ಹಾಕಬೇಕು. ಸಿಬ್ಬಂದಿಗಳ ಪೂರ್ವಾಪರ ನೋಡಬೇಕು. ಕ್ರಿಮಿನಲ್‌ ಹಿನ್ನಲೆ ಬಗ್ಗೆ ಪರಿಶೀಲನೆ ನಡೆಸಬೇಕು. ಸಂಶಯ ಬಂದರೆ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು.

ಕೆಲವು ಹೋಂ ಸ್ಟೇಗಳಲ್ಲಿ ಮಾಲೀಕರೆ ಇರುವುದಿಲ್ಲ, ಅವರು ದೂರದ ಊರುಗಳಲ್ಲಿ ಇದ್ದು, ಕೆಲಸಗಾರರಿಂದ ಹೋಂ ಸ್ಟೇ ಗಳನ್ನು ನಡೆಸುತ್ತಿರುತ್ತಾರೆ. ಮುಂದಿನ ದಿನಗಳಲ್ಲಿ ಹೀಗೆ ಆಗಬಾರದು. ಪೊಲೀಸರು ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಲಿ ದ್ದಾರೆ. ಹೋಂ ಸ್ಟೇಗಳಲ್ಲಿ ಮದ್ಯ ಸೇವನೆಗೆ ಅವಕಾಶ ಇಲ್ಲ, ಈ ನಿಯಮ ಉಲ್ಲಂಘನೆಯಾಗುತ್ತಿರುವ ಬಗ್ಗೆ ಮಾಹಿತಿ ಇದೆ. ಡ್ರಗ್ಸ್‌ ಸೇವನೆಗೂ ಅವಕಾಶ ಇಲ್ಲ. ಇವುಗಳು ಕಂಡು ಬಂದರೆ ಪ್ರಕರಣ ದಾಖಲು ಮಾಡಿಕೊಳ್ಳಲಾಗುವುದು. ಈ ಅಪರಾಧಗಳಿಗೆ 5 ವರ್ಷ ಜೈಲು ಶಿಕ್ಷೆ ಜತೆಗೆ ಪರವಾನಗಿ ರದ್ದುಪಡಿಸಲಾಗುವುದು ಎಂದು ಹೇಳಿದರು.ಫಾರ್ಮ್‌ ಸಿ: ವಿದೇಶಿ ಪ್ರವಾಸಿಗರ ಬಗ್ಗೆ ಮಾಹಿತಿ ಸಂಗ್ರಹಿಸಲು ಫಾರ್ಮ್ ಸಿ ಅನ್ನು ಪೊಲೀಸ್‌ ಇಲಾಖೆಯಿಂದ ನೀಡಲಾಗಿದೆ. ಇದನ್ನು ಕಡ್ಡಾಯವಾಗಿ ತುಂಬಿ ಸಂಬಂಧಪಟ್ಟ ಪೊಲೀಸ್‌ ಠಾಣೆಗೆ ನೀಡಬೇಕು. ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಪ್ರವಾಸಿಗರಿಗೆ ಕಾಣುವಂತೆ ಪೊಲೀಸ್‌ ಠಾಣೆ ಪೊಲೀಸ್‌ ಸಬ್‌ ಇನ್ಸ್‌ಸ್ಪೆಕ್ಟರ್‌ ಹಾಗೂ ಸ್ಥಿರ ದೂರವಾಣಿ ಸಂಖ್ಯೆ, ಟೋಲ್‌ ಫ್ರೀ ನಂಬರ್‌ಗಳ ಫಲಕ ಹಾಕಬೇಕು ಎಂದ ಜಿಲ್ಲಾ ರಕ್ಷಣಾಧಿಕಾರಿ, ಹೋಂ ಸ್ಟೇ, ರೆಸಾರ್ಟ್‌ಗಳ ಒಳ ಭಾಗದಲ್ಲಿ ಕಾರ್ಯಕ್ರಮ ಆಯೋಜನೆಗೆ ನಮ್ಮ ಹಸ್ತಾಕ್ಷೇಪ ಇಲ್ಲ. ಆದರೆ, ಹೊರ ಭಾಗದಲ್ಲಿ ನಡೆಸಲು ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದರು.

ಸಭೆಯಲ್ಲಿ ಚಿಕ್ಕಮಗಳೂರು ಡಿವೈಎಸ್ಪಿ ಶೈಲೇಂದ್ರ, ಡಿಎಫ್‌ಓ ರಮೇಶ್‌ಬಾಬು, ನಂದೀಶ್‌, ರಮೇಶ್‌, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಲೋಹಿತ್‌ ಉಪಸ್ಥಿತರಿದ್ದರು.

-- ಬಾಕ್ಸ್‌ --

ಇಂದಿನ ಸಭೆಗೆ ಬರದೆ ಇದ್ದವರು ಹೋಂ ಸ್ಟೇ ಹಾಗೂ ರೆಸಾರ್ಟ್‌ ರಿನಿವಲ್‌ಗೆ ಬಂದ್ರೆ ಮಾಡಿ ಕೊಡುವುದಿಲ್ಲ. ಹಲವು ಮಂದಿ ಜಿಲ್ಲಾಡಳಿತದ ಮಾತನ್ನು ಹಗುರವಾಗಿ ತೆಗೆದುಕೊಳ್ಳುತ್ತಿದ್ದಾರೆ. ಇಂದು ನಡೆಯಲಿರುವ ಸಭೆಗೆ ಆಗಮಿಸುವಂತೆ ಸ್ಥಳೀಯ ಪೊಲೀಸ್‌ ಠಾಣೆಯಿಂದ ಎಲ್ಲರಿಗೂ ಮಾಹಿತಿ ನೀಡಿದ್ದೇವೆ. ಆದರೂ ಕೂಡ ನಿರೀಕ್ಷಿತ ಮಟ್ಟದಲ್ಲಿ ಬಂದಿಲ್ಲ, ಇಂದಿನ ಸಭೆಯಲ್ಲಿ ಹಾಜರಾತಿ ತೆಗೆದುಕೊಳ್ಳಲಾಗುತ್ತಿದೆ. ಬರದೆ ಇದ್ದವರಿಗೆ ರಿನಿವಲ್‌ ಮಾಡುವುದಿಲ್ಲ.- ಡಾ. ವಿಕ್ರಂ ಅಮಟೆ

ಜಿಲ್ಲಾ ರಕ್ಷಣಾಧಿಕಾರಿಪೋಟೋ ಫೈಲ್‌ ನೇಮ್‌ 13 ಕೆಸಿಕೆಎಂ 1

---

ಅರಣ್ಯ ಪ್ರದೇಶದೊಳಗಿನಿಂದ ತೆರಳಲು ಅರಣ್ಯ ಇಲಾಖೆ ಅನುಮತಿ ಪಡೆಯುವುದು ಕಡ್ಡಾಯ. ಹಾಗಾಗಿ ಮೊದಲೇ ಮಾಹಿತಿ ನೀಡಬೇಕು. ಕೆಲವೆಡೆ ಕಡವೆ ಕೊಂದು ಅವುಗಳ ಮಾಂಸವನ್ನು ಹೋಂ ಸ್ಟೇಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಇದೆ. ಈ ರೀತಿ ದಂಧೆಯಲ್ಲಿ ಮುಂದುವರಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಚಿಕ್ಕಮಗಳೂರು ವಿಭಾಗದಲ್ಲಿ 40 ಹೋಂ ಸ್ಟೇಗಳು ಅರಣ್ಯ ಪ್ರದೇಶಕ್ಕೆ ಸೇರಿರುವ ಜಾಗದಲ್ಲಿರುವುದನ್ನು ಗುರುತು ಮಾಡಲಾಗಿದೆ. ಇವು ಗಳಲ್ಲಿ 14 ಹೋಂ ಸ್ಟೇ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೊಸದಾಗಿ ಚಾರಣಪಥ ಅಭಿವೃದ್ಧಿ ಪಡಿಸಲಾಗುತ್ತಿದೆ.- ರಮೇಶ್‌ ಬಾಬು

ಡಿಎಫ್‌ಓ ಚಿಕ್ಕಮಗಳೂರು 13 ಕೆಸಿಕೆಎಂ 2

-

13 ಕೆಸಿಕೆಎಂ 3ಚಿಕ್ಕಮಗಳೂರು ಜಿಪಂ ಸಭಾಂಗಣದಲ್ಲಿ ಎಸ್ಪಿ ಡಾ. ವಿಕ್ರಂ ಅಮಟೆ ಅಧ್ಯಕ್ಷತೆಯಲ್ಲಿ ಗುರುವಾರ ಹೋಂ ಸ್ಟೇ ಹಾಗೂ ರೆಸಾರ್ಟ್‌ ಮಾಲೀಕರ ಸಭೆ ನಡೆಯಿತು.

Share this article