ಕನ್ನಡಪ್ರಭ ವಾರ್ತೆ ಉಡುಪಿ
25 ವರ್ಷಗಳನ್ನು ಪೂರೈಸಿ ರಜತ ಮಹೋತ್ಸವ ಸಂಭ್ರಮದಲ್ಲಿರುವ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಈ ಬಾರಿಯ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ದ.ಕ. ಜಿಲ್ಲೆಯಿಂದ ಪ್ರತ್ಯೇಕಗೊಂಡು 1997ರಲ್ಲಿ ನೂತನ ಉಡುಪಿ ಜಿಲ್ಲೆ ರಚನೆಯಾಗಿ, ಉಡುಪಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು 1998ರಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವಾಗಿ ಸ್ಥಾಪನೆಗೊಂಡಿತು. ಹಿರಿಯ ಪತ್ರಕರ್ತ, ಕನ್ನಡಪ್ರಭದ ವರದಿಗಾರರಾಗಿದ್ದ ದಿವಂಗತ ದಾಮೋದರ್ ಐತಾಳ್ ಸ್ಥಾಪಕಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧೀನದಲ್ಲಿರುವ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಪ್ರಸ್ತುತ 2023-24ನೇ ಸಾಲಿನಲ್ಲಿ ಒಟ್ಟು 185 ಮಂದಿ ಸದಸ್ಯರನ್ನು ಹೊಂದಿದೆ. ಸಂಘದ ಅಧೀನದಲ್ಲಿ ಬೈಂದೂರು, ಕುಂದಾಪುರ, ಕಾರ್ಕಳ, ಹೆಬ್ರಿ, ಬ್ರಹ್ಮಾವರ, ಕಾಪು ತಾಲೂಕು ಸಂಘಗಳು ಮತ್ತು ಉಡುಪಿ ಪತ್ರಿಕಾ ಭವನ ಸಮಿತಿಯು ಕಾರ್ಯನಿರ್ವಹಿಸುತ್ತಿದೆ. ಸಂಘವು ಉಡುಪಿ ಬ್ರಹ್ಮಗಿರಿಯ ನಾಯರ್ಕೆರೆಯಲ್ಲಿರುವ ಪತ್ರಿಕಾ ಭವನದಲ್ಲಿ ಕೇಂದ್ರ ಕಚೇರಿಯೊಂದಿಗೆ ಕಾರ್ಯಚರಿಸುತ್ತಿವೆ. ಸಂಘವು ಸಂಘದ ಸದಸ್ಯರುಗಳಿಗಾಗಿ ಹಲವು ಮಹತ್ತರ ಯೋಜನೆ, ಯೋಚನೆಗಳನ್ನು ಅನುಷ್ಟಾನಕ್ಕೆ ತಂದಿದ್ದು, ಸಾಮಾಜಿಕವಾಗಿಯೂ ತೊಡಗಿಸಿ ಕೊಂಡಿದೆ. ಪ್ರತಿವರ್ಷ ಜು 1ರಂದು ಪತ್ರಿಕಾ ದಿನವನ್ನು ಆಚರಿಸಿ, ಹಿರಿಯ ಪತ್ರಕರ್ತರಿಗೆ ಪತ್ರಿಕಾ ದಿನದ ಗೌರವವನ್ನು ಸಲ್ಲಿಸುತ್ತಿದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನವನ್ನು ವಿತರಿಸುತ್ತಿದೆ.ಎ.12ರ ಸಂಘದ ಸ್ಥಾಪನಾ ದಿನಾಚರಣೆಯನ್ನು ಪ್ರತಿವರ್ಷ ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಿಗೆ ಸ್ಥಾಪನಾ ದಿನದ ಗೌರವ ಸಲ್ಲಿಸಲಾಗುತ್ತಿದೆ. ಪ್ರತಿವರ್ಷ ಕ್ರೀಡಾಕೂಟ, ಸಂಘದ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ, ವಾರ್ಷಿಕ ಪ್ರವಾಸವನ್ನು ಏರ್ಪಡಿಸಿಕೊಂಡು ಬರಲಾಗುತ್ತಿದೆ ರಜತ ಮಹೋತ್ಸವದ ಹಿನ್ನೆಲೆಯಲ್ಲಿ ವರ್ಷ ಇಡೀ 25 ಕಾರ್ಯಕ್ರಮಗಳನ್ನು ಸಂಘ ಯಶಸ್ವಿಯಾಗಿ ನಡೆಸಿದೆ. ಮುಖ್ಯವಾಗಿ ಸಂಘದ ಸದಸ್ಯರುಗಳಿಗಾಗಿ ಕ್ಷೇಮಾಭಿವೃದ್ಧಿ ನಿಧಿಯನ್ನು ಸ್ಥಾಪಿಸಿ ಆ ಮೂಲಕ ಸದಸ್ಯರುಗಳಿಗೆ ಆರೋಗ್ಯ ನೆರವು ನೀಡುವ ಯೋಜನೆ ಹಾಕಿಕೊಂಡಿದೆ. ಸಂಘದ ವತಿಯಿಂದ ಮಾಧ್ಯಮ ಸಂವಾದ ಎಂಬ ವಿನೂತನ ಕಾರ್ಯಕ್ರಮವನ್ನು ಆರಂಭಿಸಿದ್ದು, ಇದರಲ್ಲಿ ಸಚಿವರು, ವಿವಿಧ ಇಲಾಖೆಯ ಅಧಿಕಾರಿಗಳು, ಕಾನೂನು ತಜ್ಞರು, ವೈದ್ಯರು ಹಾಗೂ ಗಣ್ಯರು ಭಾಗವಹಿಸುತ್ತಿದ್ದಾರೆ. ಈ ಮೂಲಕ ವಿವಿಧ ಮಾಹಿತಿ, ವಿವಿಧ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವ ಕಾರ್ಯ ಮಾಡಲಾಗುತ್ತಿದೆ. ಅನಾರೋಗ್ಯ ಪೀಡಿತ ಸಂಘದ ಸದಸ್ಯರ ಚಿಕಿತ್ಸೆಗೆ ರಾಜ್ಯ ಸರ್ಕಾರದಿಂದ ಸಹಾಯಧನವನ್ನು ಕೂಡಿಸಿದೆ. ಅಂಚೆ ಇಲಾಖೆಯ ಸಹಯೋಗದೊಂದಿಗೆ ಪತ್ರಕರ್ತರಿಗೆ ಅಪಘಾತ ವಿಮೆಯನ್ನು ನೋಂದಣಿ ಮಾಡಿಸಲಾಗಿದೆ.
ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಕುರಿತು ಜಿಲ್ಲಾಧಿಕಾರಿ ಅವರೊಂದಿಗೆ ಸಂವಾದ, ಪತ್ರಕರ್ತರಿಗೆ ಪೊಕ್ಸೋಕಾಯ್ದೆ ಕುರಿತು ಕಾರ್ಯಾಗಾರ, ಅಪರಾಧ ಕೃತ್ಯಗಳಲ್ಲಿ ಫಾರೆನ್ಸಿಕ್ ಪರೀಕ್ಷೆಗಳ ಪಾತ್ರ ಕುರಿತ ವಿಚಾರ ಸಂಕಿರಣ, ಭೂಕುಸಿತ ನೆರೆಹಾವಳಿ ಹಾಗೂ ಬೆಂಕಿ ಅವಘಡಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ತಜ್ಞರೊಂದಿಗೆ ಚರ್ಚಾ ಕಾರ್ಯಕ್ರಮವನ್ನು ಕೂಡ ಸಂಘ ನಡೆಸಿದೆಸಂಘದ ಹಲವು ಮಹಾತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಪತ್ರಿಕಾ ಭವನದಲ್ಲಿ ಗ್ರಂಥಾಲಯ ಸ್ಥಾಪಿಸಿ ಪತ್ರಿಕೋದ್ಯಮ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಪತ್ರಕರ್ತರಿಗೆ ಅದರ ಪ್ರಯೋಜನ ಒದಗಿಸಲಾಗುತ್ತಿದೆ.ಹೀಗೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಸಮಾಜ ಮುಖಿಯಲ್ಲಿ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಇಂತಹ ಸಂದರ್ಭದಲ್ಲಿ ಸಂಘಕ್ಕೆ ರಾಜ್ಯೋತ್ಸವ ಪ್ರಶಸ್ತಿ ಲಭಿಸುತ್ತಿರುವುದು ಸಂಘದ ಸದಸ್ಯರಲ್ಲಿ ಇನ್ನಷ್ಟುಉತ್ಸಾಹ ತುಂಬಿದೆ ಎಂದು ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಹಾಗೂ ಪ್ರಧಾನ ಕಾರ್ಯದರ್ಶಿ ನಜೀರ್ ಪೊಲ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.