ಯಲ್ಲಾಪುರ: ರಾಜ್ಯದಲ್ಲೇ ಉತ್ತರ ಕನ್ನಡ ಜಿಲ್ಲೆ ನೈಸರ್ಗಿಕ ಪ್ರವಾಸೋದ್ಯಮಕ್ಕೆ ಮಹತ್ವದ ಕೊಡುಗೆ ನೀಡಿದೆ. ಇಲ್ಲಿನ ವಿಶಿಷ್ಟವಾದ ಸಾಂಪ್ರದಾಯಿಕ ಆಹಾರ ಕ್ರಮವೂ ಅಷ್ಟೇ ವಿಶಿಷ್ಟವಾಗಿದೆ. ಅದನ್ನು ಹೊರಜಗತ್ತಿಗೆ ತಲುಪಿಸುವ ಕಾರ್ಯವನ್ನು ಮಾಡಬೇಕಿದೆ ಎಂದು ಬನಾನಾ ಕೌಂಟಿ ರೆಸಾರ್ಟ್ನ ವ್ಯವಸ್ಥಾಪಕ ನಿರ್ದೇಶಕ ಎಂ.ಜಿ. ಹೆಬ್ಬಾರ ತಿಳಿಸಿದರು.
ಪ್ರವಾಸಿಗರಿಗೆ ಜಿಲ್ಲೆಯ ಅದರಲ್ಲೂ ಹವ್ಯಕರ ಅಡುಗೆ ತಿಂಡಿ, ತಿನಿಸು ನೀಡಿ, ನಮ್ಮ ಈ ಪರಿಸರದ ಮಹತ್ವದ ಆಹಾರ- ವಿಹಾರಗಳ ಪರಿಚಯವನ್ನು ಹೊರ ಜಗತ್ತಿಗೆ ಪರಿಚಯಿಸಿದಾಗ ಮಾತ್ರ ಜಿಲ್ಲೆಯ ಸತ್ವ, ಮಹತ್ವ ಜನರಿಗೆ ಅರಿವಾಗುತ್ತದೆ. ಪ್ರವಾಸಿಗರಿಗೆ ನಮ್ಮ ಜಿಲ್ಲೆಯ ವಿವಿಧ ಪ್ರದೇಶದ ಸೌಂದರ್ಯ ಮತ್ತು ವೈವಿಧ್ಯತೆಯನ್ನು ಪರಿಚಯಿಸುವ ಉದ್ದೇಶದಿಂದ ವಿಶೇಷ ರಿಯಾಯಿತಿ ದರವನ್ನು ನಿಗದಿಗೊಳಿಸಲಾಗಿದೆ. ಇದೀಗ ಶೇ. ೪೦ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಪ್ರವಾಸಿಗರು ತಮಗೆ ಬೇಕಾಗುವ ಪ್ಯಾಕೇಜ್ ಅಡಿ ತಮ್ಮ ಬೇಡಿಕೆಯನ್ನು ಮೊದಲೇ ಕಾದಿರಿಸಬೇಕಾಗುತ್ತದೆ ಎಂದರು.
ಹಿರಿಯ ಪತ್ರಕರ್ತ ರಾಜು ಅಡಕಳ್ಳಿ ಮಾತನಾಡಿ, ೨೦ ವರ್ಷಗಳ ಹಿಂದೆಯೇ ಬನಾನಾ ಕೌಂಟಿಯಲ್ಲಿ ಆರಂಭಿಸಿದ ಪರಿಸರಸ್ನೇಹಿ ಪ್ರವಾಸೋದ್ಯಮ ಜೀವನಾನುಭವದ ಹಿನ್ನೆಲೆಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಬನಾನಾ ಕೌಂಟಿಯ ನಿರ್ದೇಶಕ ಪೃಥ್ವಿರಾಜ ಹೆಬ್ಬಾರ್ ಉಪಸ್ಥಿತರಿದ್ದರು.