ಕನ್ನಡಪ್ರಭ ವಾರ್ತೆ ಚಾಮರಾಜನಗರ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರ ಪಾತ್ರ ಬಹಳ ಮುಖ್ಯವಾಗಿದೆ. ಹೆಣ್ಣಿಲ್ಲದೇ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಚಾಮರಾಜನಗರದ ಸಮತಾ ಸೊಸೈಟಿ ಕಾರ್ಯಕರ್ತೆ ದೀಪಾಬುದ್ದೆ ತಿಳಿಸಿದರು .
ಮಹಿಳೆಯರ ಅಭಿವೃದ್ಧಿಗೆ ಸರ್ಕಾರಗಳು ಬಹಳಷ್ಟು ಯೋಜನೆಗಳನ್ನು ನೀಡಿದೆ. ಮಹಿಳೆಯರು ರಾಜಕೀಯ ಕ್ಷೇತ್ರವಲ್ಲದೆ, ರೈಲು, ವಿಮಾನ ಮತ್ತು ಬಸ್ ಚಾಲನೆ ಮಾಡುವುದರಲ್ಲಿ ಮಹಿಳೆಯರ ಸಾಧನೆ ಬಹಳಷ್ಟಿದೆ. ಚಾಮರಾಜನಗರ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಅಧಿಕಾರಿಗಳು ಮಹಿಳೆಯರೇ ಈಗಲು ಎಷ್ಟೋ ಮನೆಗಳಲ್ಲಿ ಮಹಿಳೆಯರಿಗೆ ಸ್ವಾತಂತ್ರವಿಲ್ಲ, ಡಾ.ಬಿ.ಆರ್.ಅಂಬೇಡ್ಕರ್ ಅವರು ಸರ್ವರಿಗೂ ಸಾಮಾನತೆಯನ್ನು ಕಲ್ಪಿಸಿಕೊಟ್ಟಿದ್ದಾರೆ. ಹೆಣ್ಣಿಗೆ ಶಿಕ್ಷಣ ನೀಡಿದರೆ ಮನೆಯೊಂದರಲ್ಲಿ ಶಾಲೆ ತೆರೆದಂತೆ ಮಹಿಳೆಯ ಅಭಿವೃದ್ದಿಗೆ ಪ್ರತಿಯೊಬ್ಬರು ಕೈಜೋಡಿಸೋಣ ಎಂದರು. ಸಂತಜೋಸೆಫ್ ಸಂಸ್ಥೆಯ ಮುಖ್ಯಸ್ಥ ಸಿಸ್ಟರ್ ಅನೀತಾ ಡೈಸಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೆಣ್ಣು ಕುಟುಂಬದ ಕಣ್ಣು ಒಂದು ಕುಟುಂಬವನ್ನು ಮೇಲೆತ್ತುವ ಜವಾಬ್ದಾರಿ ಹೆಣ್ಣು ಮಗಳಿಗಿರುತ್ತದೆ. ಭೂಮಿ ತಾಯಿ ಹೆಣ್ಣು ಭೂಮಿತಾಯಿ ಎಷ್ಟು ಭಾರವನ್ನು ಹೊರುತ್ತಾಳೋ ಅದೇ ರೀತಿ ಕುಂಟುಂಬದ ಭಾರವನ್ನು ಹೆಣ್ಣು ಮಕ್ಕಳು ಹೊರುತ್ತಾಳೆ. ಹೆಣ್ಣು ನಮ್ಮ ದೇಶದ ಆಸ್ತಿ ಎಂದು ಹೇಳಿದರು. ನಮ್ಮ ಸಂಸ್ಥೆಯು ಮಹಿಳೆಯರ ಅಭಿವೃದ್ಧಿಗೆ ಹಲವಾರು ತರಬೇತಿಗಳನ್ನು ನೀಡುತ್ತಿದೆ. ಇದರಿಂದ ಬಹಳಷ್ಟು ಮಹಿಳೆಯರು ಸ್ವಾವಲಂಭಿಗಳಾಗಿ ಬದುಕುತಿದ್ದಾರೆ.ಸಂಸ್ಥೆಯ ಮರಿಯಾ ಜೋಸ್ ಮಾತನಾಡಿ, ನಮ್ಮ ಸಂಸ್ಥೆ ಮಹಿಳೆಯರ ಅಭಿವೃದ್ಧಿಗೆ ಶ್ರಮಿಸುತ್ತಾ ಬಂದಿದೆ, ಗ್ರಾಮೀಣ ಭಾಗದ ಮಹಿಳೆಯರಿಗೆ ಟೈಲರಿಂಗ್, ಕಂಪ್ಯೂಟರ್ ತರಬೇತಿ, ಜೊತೆಗೆ ಜಿಲ್ಲಾ ಕಾರಗೃಹದ ಮಹಿಳಾ ಕೈದಿಗಳು ಬಿಡುಗಡೆಯಾದ ಸಂದರ್ಭದಲ್ಲಿ ಜೀವನ ನಡೆಸಲು ನ್ಯಾಯಾಧೀಶರ ಅಪ್ಪಣೆ ಮೇರೆಗೆ ಟೈಲರಿಂಗ್ ತರಬೇತಿಗಳನ್ನು ನೀಡಲಾಗುತ್ತಿದೆ. ನಮ್ಮ ತರಬೇತಿ ಪಡೆದ ಹಲವಾರು ಮಹಿಳೆಯರು ಸ್ವಯಂ ಉದ್ಯೋಗ ಕಲ್ಪಿಸಿಕೊಂಡಿದ್ದಾರೆ ಎಂದು ಹೇಳಿದರು.ತಾಳವಾಡಿ ಒಡಿಪಿ ಸಂಸ್ಥೆಯ ನಿವೃತ್ತ ಅಧಿಕಾರಿ ರೆಜಿನಾ ರೋಸಿ ಮಹಿಳಾ ದಿನಾಚರಣೆಯ ಮಹತ್ವದ ಬಗ್ಗೆ ತಿಳಿಸಿದರು. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳೆಯರನ್ನು ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸುಧಾಮಣಿ, ಮಹದೇವಮ್ಮ, ಸುನಂದ ಉಪಸ್ಥಿತರಿದ್ದರು.