ಕನ್ನಡಪ್ರಭ ವಾರ್ತೆ ಮಲ್ಪೆ
ಧರ್ಮಗುರುಗಳ ನೇತೃತ್ವದಲ್ಲಿ ಕ್ರೈಸ್ತ ಬಾಂಧವರು ಚರ್ಚ್ ವ್ಯಾಪ್ತಿಯ ಹಿಂದೂ ಬಾಂಧವರ ಮನೆಗೆ ತೆರಳಿ ಸಿಹಿ ತಿಂಡಿ ಹಾಗೂ ಹಣತೆಗಳನ್ನು ನೀಡಿ ಹಬ್ಬದ ಶುಭಾಶಯಗಳನ್ನು ಕೋರಿದರು.
ಈ ಬಗ್ಗೆ ಮಾತನಾಡಿದ ಧರ್ಮಗುರು ಡೆನಿಸ್ ಡೆಸಾ, ದೀಪಾವಳಿ ಒಂದು ಸಾರ್ವತ್ರಿಕ ಹಬ್ಬ. ಇದರ ಆಚರಣೆಯನ್ನು ಪ್ರತಿಯೊಬ್ಬರು ಮಾಡುತ್ತೇವೆ. ದೀಪದ ಬೆಳಕು ಹೇಗೆ ಪ್ರತಿಯೊಬ್ಬರಿಗೂ ಸಮಾನವಾಗಿ ಲಭಿಸುತ್ತದೆಯೋ, ಈ ಹಬ್ಬದ ಆಚರಣೆಗಳನ್ನು ಕೂಡ ಪರಸ್ಪರ ಕೂಡಿ ಸಂಭ್ರಮಿಸಿದಾಗ ಅದರ ಮಹತ್ವ ಇನ್ನಷ್ಟು ಹೆಚ್ಚುತ್ತದೆ ಎಂದರು.ಬೆಳಕಿನ ಹಬ್ಬದ ಸಂದರ್ಭ ದ್ವೇಷ, ಅವಿಶ್ವಾಸ, ಕ್ರೌರ್ಯ, ಹಿಂಸೆಯ ಸ್ಥಳದಲ್ಲಿ ವಿಶ್ವಾಸ ಮತ್ತು ಪ್ರೀತಿಯ ಸೇತುವೆಗಳನ್ನು ಕಟ್ಟುವ ಬೆಳಕು ನಾವಾಗಬೇಕು. ಕತ್ತಲೆಯ ಜಾಗದಲ್ಲಿ ನಾವೊಂದು ಹಣತೆಯಾಗಿ ಇತರರಿಗೆ ಭರವಸೆಯ ಬೆಳಕಾಗುವುದರೊಂದಿಗೆ ಪರಸ್ಪರ ಸೌಹಾರ್ದತೆಯ ಸೇತುವೆಗಳನ್ನು ಕಟ್ಟುವ ಕೆಲಸದಲ್ಲಿ ಒಂದಾಗಿ ಕೈಜೋಡಿಸಬೇಕು ಎಂದು ಹೇಳಿದರು.ಈ ವೇಳೆ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಲೆಸ್ಲಿ ಆರೋಝಾ, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, ಸ್ಥಳೀಯಾ ಕಾನ್ವೆಂಟಿನ ಸಿಸ್ಟರ್ ಸುಶ್ಮಾ, ಸಿಸ್ಟರ್ ಶಾಲಿನಿ ಹಾಗೂ ಇತರರು ಉಪಸ್ಥಿತರಿದ್ದರು.