ಡಿಜೆಹಳ್ಳಿ-ಕೆಜೆಹಳ್ಳಿ ಗಲಭೆ ಪ್ರಕರಣ: ಆರೋಪಿಯ ಬಂಧನ

KannadaprabhaNewsNetwork |  
Published : Apr 28, 2025, 11:46 PM IST
೨೮ಎಸ್.ಆರ್.ಎಸ್೭ಪೊಟೋ೧ (ಶಿರಸಿಯ ಟಿಪ್ಪೂ ನಗರದ ಮೌಸಿನ್ (ಇಮ್ತಿಯಾಜ್) ಅಬ್ದುಲ್ ಶೂಕುರ ಹೊನ್ನಾವರ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸುತ್ತಿರುವ ಪೊಲೀಸರು.)೨೮ಎಸ್.ಆರ್.ಎಸ್೭ಪೊಟೋ೨ (ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಮಾಹಿತಿ ನೀಡಿದರು.) | Kannada Prabha

ಸಾರಾಂಶ

ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ ಗಲಭೆ ಪ್ರಕರಣದಲ್ಲಿ ಭಾಗಿಯಾಗಿ, ಕಳೆದ ಮೂರೂವರೆ ವರ್ಷಗಳಿಂದ ತಲೆಮರೆಸಿಕೊಂಡಿದ್ದ

ಶಿರಸಿ: ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ ಗಲಭೆ ಪ್ರಕರಣದಲ್ಲಿ ಭಾಗಿಯಾಗಿ, ಕಳೆದ ಮೂರೂವರೆ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ, ನಿಷೇಧಿತ ಪಿಎಫ್‌ಐ ಸಂಘಟನೆಯ ಜಿಲ್ಲಾಧ್ಯಕ್ಷನಾಗಿದ್ದ ಶಿರಸಿಯ ಟಿಪ್ಪುನಗರದ ಮೌಸಿನ್ ಯಾನೆ ಇಮ್ತಿಯಾಜ್ ಅಬ್ದುಲ್ ಶೂಕುರ ಹೊನ್ನಾವರ (೩೫) ಬಂಧಿಸುವಲ್ಲಿ ಶಿರಸಿ ನಗರ ಹೊಸ ಮಾರುಕಟ್ಟೆ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಸೋಮವಾರ ೧ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ವೈದ್ಯಕೀಯ ಪರೀಕ್ಷೆ ನಡೆಸಿ, ಬಿಗಿ ಪೊಲೀಸ್ ಭದ್ರತೆಯೊಂದಿಗೆ ನ್ಯಾಯಾಲಯಕ್ಕೆ ಕರೆತಂದ ಪೊಲೀಸರು, ಶಿರಸಿಯಲ್ಲಿ ನಡೆದ ಕೊಲೆ ಯತ್ನ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ವಾರೆಂಟ್ ಇದ್ದ ಹಿನ್ನೆಲೆಯಲ್ಲಿ ಜಿಲ್ಲಾ ಸತ್ರ ನ್ಯಾಯಾಧೀಶರ ಎದುರು ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಲಯ ೧೪ ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.

ಆರೋಪಿಗೆ ನೆರವಾದ ಐವರ ವಿರುದ್ಧ ಕೇಸು:

ಶಿರಸಿಯಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯ ರಕ್ಷಣೆಗೆ ನೆರವಾದ ಕುಟುಂಬದ ಐವರು ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ಎಂ.ನಾರಾಯಣ ಹೇಳಿದರು.

ಅವರು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಿಎಫ್‌ಐ ಜಿಲ್ಲಾಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಮೌಸಿನ್ ಹಲವಾರು ಜನರಿಗೆ ತರಬೇತಿ ನೀಡಿದ್ದು, ಎನ್‌ಐಎ ಸೇರಿದಂತೆ ಕೇಂದ್ರ ಸರ್ಕಾರದ ತನಿಖಾ ತಂಡಗಳು ಈತನ ಹುಡುಕಾಟ ನಡೆಸಿದ್ದರು. ಹಲವು ಪ್ರಕರಣಗಳ ಆರೋಪಿಯಾಗಿರುವ ಈತ ಮೂರೂವರೆ ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಶಿರಸಿ ಪೊಲೀಸರು ಜೀವದ ಹಂಗು ತೊರೆದು ಈತನನ್ನು ಬಂಧಿಸಿದ್ದಾರೆ. ಆರೋಪಿಯು ತನ್ನ ಕುಟುಂಬದವರೊಂದಿಗೆ ಹೈದರಾಬಾದ್‌ಗೆ ಹೋಗಿ ಅಲ್ಲಿಂದ ವಾಪಸಾಗುತ್ತಿದ್ದಾಗ ಸಿಂಧಗಿಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.

ಈತ ನಿಷೇಧಿತ ಪಿಎಫ್‌ಐ ಸಂಘಟನೆಯ ಸದಸ್ಯನಾಗಿದ್ದ ಹಿನ್ನೆಲೆಯಲ್ಲಿ ಆತನ ಮನೆಯ ಮೇಲೆ ಎನ್‌ಐಎ ದಾಳಿ ಮಾಡಿತ್ತು. ವಿಷಯ ತಿಳಿದು ಮುಖ್ಯ ಆರೋಪಿ ತಲೆಮರೆಸಿಕೊಳ್ಳಲು ಸಹಕಾರ ನೀಡಿದ ಆರೋಪಿಯ ಕುಟುಂಬದ ಸದಸ್ಯರಾದ ರಿಹಾನಾ ಅಬ್ದುಲ್ ಶೂಕೂರ (೫೫), ಅಬ್ದುಲ್ ಹಜೀಜ್ ಅಬ್ದುಲ್ ಶೂಕೂರ (೩೮), ಇಜಾಜ್ ಅಬ್ದುಲ್ ಶುಕೂರ (೩೩), ಅಬ್ದುಲ್ ರಜಾಕ್ ಅಬ್ದುಲ್ ಶೂಕೂರ (೩೨), ಮಹಮದ್ ಸುಹೇಲ್ ಕರಿಂಸಾಬ ಶೇಖ (೩೨) ವಿರುದ್ಧ ದೂರು ದಾಖಲಾಗಿದೆ.

ಶಿರಸಿಯಲ್ಲಿ ನಡೆದ ಕೊಲೆ ಪ್ರಕರಣದ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಮೌಸಿನ್ ಹಾಗೂ ಈತನಿಗೆ ರಕ್ಷಣೆ ನೀಡಿದ ಕುಟುಂಬ ಐದು ಸದಸ್ಯರನ್ನು ಪೊಲೀಸರು ಸೋಮವಾರ ನಗರದ ೧ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಶಿರಸಿ ಡಿಎಸ್‌ಪಿ ಗಣೇಶ ಕೆ.ಎಲ್, ಸಿಪಿಐಗಳಾದ ಶಶಿಕಾಂತ ವರ್ಮಾ, ಮಂಜುನಾಥ ಗೌಡ, ಪಿಎಸ್‌ಐಗಳಾದ ನಾಗಪ್ಪ ಬಿ, ರಾಜಕುಮಾರ ಉಕ್ಕಲಿ, ರತ್ನ ಕುರಿ, ಮಹಂತೇಶ ಕಂಬಾರ ಮತ್ತಿತರರು ಇದ್ದರು.

PREV

Recommended Stories

ವಿಶ್ವಾದ್ಯಂತ ಒಂದೇ ದಿನ ಕಾಂತಾರ ಚಾಪ್ಟರ್ 1 ಬಿಡುಗಡೆ
ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!