ಉಡುಪಿ: ಡಿ.ಕೆ. ಶಿವಕುಮಾರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನವನ್ನು ಸ್ವೀಕರಿಸಿದ ಹಿನ್ನೆಲೆಯಲ್ಲಿ ಉಡುಪಿ ಡಿ.ಕೆ.ಶಿವಕುಮಾರ್ ಅಭಿಮಾನಿ ಬಳಗವು ವಿಜಯೋತ್ಸವ ಆಚರಿಸಿತು.ಉಡುಪಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ, ಸಮಾಜ ಸೇವಕ ಕೆ. ಕೃಷ್ಣಮೂರ್ತಿ ಆಚಾರ್ಯ ನೇತೃತ್ವದಲ್ಲಿ ಕಿನ್ನಿಮುಲ್ಕಿ ಜಂಕ್ಷನ್ನಲ್ಲಿ ಪ್ರಮಾಣ ವಚನ ಸಮಾರಂಭದ ವೀಕ್ಷಣೆಗೆ ಭಾರೀ ಎಲ್ಇಡಿ ವಾಲನ್ನು ಅಳವಡಿಸಲಾಗಿತ್ತು, ನೂರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು, ಡಿಕೆಶಿ ಅಭಿಮಾನಿಗಳು ಮತ್ತು ಸಾರ್ವಜನಿಕರು ಈ ನೇರಪ್ರಸಾರವನ್ನು ವೀಕ್ಷಿಸಿದರು.ಕಿನ್ನಿಮುಲ್ಕಿ ಸ್ವಾಗತ ಗೋಪುರವನ್ನು ಹಾದು ಹೋಗುವ ಸಾವಿರಾರು ಮಂದಿಗೆ ಕೃಷ್ಣಮೂರ್ತಿ ಆಚಾರ್ಯ ಮತ್ತು ಸಂಗಡಿರು ಸಿಹಿ ಹಂಚಿ ಸಂತಸವನ್ನು ವ್ಯಕ್ತಪಡಿಸಿದರು ಮಾತ್ರವಲ್ಲ ಭರ್ಜರಿಯಾಗಿ ಹುಲಿ ಕುಣಿತದ ಸ್ಟೆಪ್ಸ್ ಹಾಕಿ ಸಂಭ್ರಮಿಸಿದರು.
136 ಅಟ್ಟೆ ಮಲ್ಲಿಗೆ ಹೂವಿನ ಪೂಜೆ: ಕೃಷ್ಣಮೂರ್ತಿ ಆಚಾರ್ಯರ ನೇತೃತ್ವದಲ್ಲಿ ಸಂಜೆ ಕನ್ನರ್ಪಾಡಿ ಶ್ರೀ ಜಯದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ, ರಾಜ್ಯದ 136 ಮಂದಿ ಕಾಂಗ್ರೆಸ್ ಶಾಸಕರ ಹೆಸರಿನಲ್ಲಿ 136 ಅಟ್ಟೆ ಮಲ್ಲಿಗೆ ಹೂವಿನಿಂದ ವಿಶೇಷ ಹೂವಿನ ಪೂಜೆಯನ್ನೂ ನೆರವೇರಿಸಲಾಯಿತು.ಬೆಳಗ್ಗೆ ಉಡುಪಿಯ 12 ವಿಶೇಷ ಮಕ್ಕಳ, ವೃದ್ಧರ ಮತ್ತು ಅನಾಥರ ಆಶ್ರಮಗಳಿಗೆ ತೆರಳಿ, ಅಲ್ಲಿಗೆ ಅಗತ್ಯವಿರುವ ಕುಕ್ಕರ್ ಮತ್ತು ಫ್ಯಾನ್ ಗಳನ್ನು ಹಸ್ತಾಂತರಿಸಲಾಯಿತು. ಜಿಲ್ಲಾ ಕಾಂಗ್ರೆಸಲ್ಲಿ ಸಂಭ್ರಮ: ಅತ್ತ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತಿದ್ದಂತೆ ಇತ್ತ ಉಡುಪಿಯ ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದ ಮುಂದೆ ಪಕ್ಷದ ಕಾರ್ಯಕರ್ತರು ಜಮಾಯಿಸಿ ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು.