ಎಚ್‌ಡಿಕೆ, ದೇವೇಗೌಡರನ್ನು ಹಾಡಿ ಹೊಗಳಿದ ಡಿಕೆ

KannadaprabhaNewsNetwork |  
Published : Aug 15, 2026, 03:00 AM IST
ಡಿಕೆಶಿ | Kannada Prabha

ಸಾರಾಂಶ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಶುಕ್ರವಾರ ಉಭಯ ಸದನಗಳಲ್ಲೂ ಮಾತನಾಡಿ ಎಸ್‌.ಆರ್‌.ಕಂಠಿ ಅವರಿಂದ ಹಿಡಿದು ಸಿದ್ದರಾಮಯ್ಯ ವರೆಗೆ ರಾಜ್ಯದ ಎಲ್ಲಾ ಮುಖ್ಯಮಂತ್ರಿಗಳ ಆಡಳಿತ, ಜನಪರ ಯೋಜನೆಗಳ ಗುಣಗಾನ ಮಾಡಿದರು.

ಕನ್ನಡಪ್ರಭ ವಾರ್ತೆ ವಿಧಾನಸಭೆ/ವಿಧಾನ ಪರಿಷತ್ತು:

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಶುಕ್ರವಾರ ಉಭಯ ಸದನಗಳಲ್ಲೂ ಮಾತನಾಡಿ ಎಸ್‌.ಆರ್‌.ಕಂಠಿ ಅವರಿಂದ ಹಿಡಿದು ಸಿದ್ದರಾಮಯ್ಯ ವರೆಗೆ ರಾಜ್ಯದ ಎಲ್ಲಾ ಮುಖ್ಯಮಂತ್ರಿಗಳ ಆಡಳಿತ, ಜನಪರ ಯೋಜನೆಗಳ ಗುಣಗಾನ ಮಾಡಿದರು. ಈ ವೇಳೆ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ಯೋಜನೆಗಳನ್ನೂ ಹೊಗಳಿದ್ದು ಗಮನ ಸೆಳೆಯಿತು.

ಮಾಜಿ ಪ್ರಧಾನಿ ದೇವೇಗೌಡರಿಗೆ ಮಣ್ಣಿನ ಮಗ ಎನ್ನುವ ಬಿರುದು ಸುಮ್ಮನೆ ಬಂದಿಲ್ಲ. ಅವರು ನಾಡಿನ ರೈತರ ಪರ ಅಪಾರ ಹೋರಾಟ ಮಾಡಿದ್ದಾರೆ. ಅನೇಕ ನೀರಾವರಿ ಯೋಜನೆಗಳನ್ನು ರೂಪಿಸಿದವರು. ಬೆಂಗಳೂರಿನಲ್ಲಿ ಮೊದಲ ಮೇಲ್ಸೇತುವೆ ನಿರ್ಮಿಸಿದವರು. ಅವರು ನೈಸ್‌ ಯೋಜನೆಗೆ ಸಹಿ ಹಾಕಿದರು. ಇವತ್ತು ನೈಸ್‌ ವಿಚಾರವಾಗಿ ಅವರು ಟೀಕೆ ಮಾಡಬಹುದು, ನೈಸ್‌ ಆಡಳಿತ ಸರಿ ಇಲ್ಲದೆ ಇರಬಹುದು ಆದರೆ, ನೈಸ್‌ ರಸ್ತೆ ಇಲ್ಲದೆ ಹೋಗಿದ್ದರೆ ಬೆಂಗಳೂರಿನ ಪರಿಸ್ಥಿತಿ ಏನಾಗುತ್ತಿತ್ತು? ಅವರು ಇನ್ನೂ ಐದಾರು ವರ್ಷ ರಾಜ್ಯದ ಮುಖ್ಯಮಂತ್ರಿ ಆಗಿದ್ದರೆ ಸಾಕಷ್ಟು ಬದಲಾವಣಗಳು ಆಗುತ್ತಿದ್ದವು, ಅಷ್ಟರಲ್ಲಿ ಅವರಿಗೆ ಪ್ರಧಾನಿ ಆಗುವ ಅವಕಾಶ ಬಂತು ಎಂದರು.

ರಾಜಕಾರಣ ಏನೇ ಇರಲಿ ಕುಮಾರಸ್ವಾಮಿ ಅವರ ಯೋಜನೆಗಳನ್ನೂ ನಾನು ಒಪ್ಪುತ್ತೇನೆ. ಅವರ ಪೆರಿಫೆರಲ್‌ ರಿಂಗ್‌ ರಸ್ತೆಯ ಆಲೋಚನೆ, ಬಿಡದಿ ಸೇರಿ ಐದು ಹೊಸ ಡೌನ್‌ಶಿಪ್‌ಗಳ ನಿರ್ಮಾಣದ ಯೋಜನೆಗಳು ಬಹಳ ಉತ್ತಮವಾದವು. ಆದರೆ, ಕೆಲ ಒತ್ತಡಗಳಿಂದ ಕುಮಾರಸ್ವಾಮಿ ಅವರು ಬಿಡದಿ ಡೌನ್‌ಶಿಪ್‌ ಬಗ್ಗೆ ರಾಜಕಾರಣ ಮಾಡುತ್ತಿರಬಹುದು. ಆ ಬಗ್ಗೆ ಆ ಮೇಲೆ ಮಾತನಾಡುತ್ತೇನೆ. ಆದರೆ, ಅವರ ದೂರದೃಷ್ಟಿ ಯೋಜನೆಗಳನ್ನು ನಾನು ಅಲ್ಲಗಳೆಯುವುದಿಲ್ಲ. ನಂತರ ಏನು ತೊಡಕು, ಸಮಸ್ಯೆ ಎದುರಾಯಿತೋ ಅವುಗಳ ಅನುಷ್ಠಾನ ಮಾಡಲಿಲ್ಲ. ಈಗ ಅವುಗಳನ್ನು ನಾವು ಮುಂದುವರೆಸಿದ್ದೇವೆ ಎಂದರು.

ಇದೇ ವೇಳೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪ್ರತ್ಯೇಕ ಕೃಷಿ ಬಜೆಟ್‌, ಸಿದ್ದರಾಮಯ್ಯ ಅವರ ಅನ್ನಭಾಗ್ಯ ಯೋಜನೆ, ಎಸ್‌.ಎಂ.ಕೃಷ್ಣ ಅವರ ಅವಧಿಯ ಐಟಿ, ಬಿಟಿ ಕ್ರಾಂತಿ ಸೇರಿ ಎಲ್ಲ ಮಾಜಿ ಮುಖ್ಯಮಂತ್ರಿಗಳ ಆಡಳಿತ, ಜನಪರ ಯೋಜನೆಗಳನ್ನು ಮುಖ್ಯಮಂತ್ರಿ ಅವರು ಗುಣಗಾನ ಮಾಡಿದರು. ಜೆ.ಎಚ್‌.ಪಟೇಲರ ಹೃದಯ ಶ್ರೀಮಂತಿಕೆ ಆಡಳಿತ ಕೊಂಡಾಡಿ ತಾವೂ ಅದೇ ಮಾದರಿಯಲ್ಲಿ ನಡೆಯುವುದಾಗಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮೀರ್ ಮೊಬೈಲಲ್ಲಿ ಭಾರತ ವಿರೋಧಿ ಮ್ಯಾಪ್‌!
ಗ್ರಾಪಂ ವ್ಯಾಪ್ತಿಗೆ ಒಳಪಡದ ಕೆಲಸ ವಹಿಸದಂತೆ ಸಿಬ್ಬಂದಿ ಮನವಿ