ಡಿಕೆಶಿ ರಿಯಲ್‌ ಎಸ್ಟೇಟ್‌ ಮುಖ್ಯಮಂತ್ರಿ

KannadaprabhaNewsNetwork |  
Published : Aug 24, 2026, 03:00 AM IST
(ಪೋಟೋ-23ಬಿಕೆಟಿ1, ಜಿಲ್ಲೆಯ ಗುಳೇದಗುಡ್ಡ ಪಟ್ಟಣದಲ್ಲಿ ಮಾಜಿ ಸಚಿವ ಶ್ರೀರಾಮುಲು ಅವರು ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು) | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆಡಿ.ಕೆ.ಶಿವಕುಮಾರ್ ಅವರು ಸಿಎಂ ಆದ ಮೇಲೆ ಮೊದಲ ಆದ್ಯತೆಯನ್ನು ರಿಯಲ್ ಎಸ್ಟೇಟ್‌ಗೆ ನೀಡಿದ್ದು, ಅದು ಬಿಟ್ಟರೆ ಬೇರೆ ಯಾವುದು ಇಲ್ಲ. ಅದಕ್ಕಾಗಿ ಅವರನ್ನು ರಿಯಲ್ ಎಸ್ಟೇಟ್ ಮುಖ್ಯಮಂತ್ರಿ ಎಂದು ಕರೀತಾರೆ ಎಂದು ಮಾಜಿ ಸಚಿವ ಶ್ರೀರಾಮುಲು ಎಂದು ಟೀಕಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಡಿ.ಕೆ.ಶಿವಕುಮಾರ್ ಅವರು ಸಿಎಂ ಆದ ಮೇಲೆ ಮೊದಲ ಆದ್ಯತೆಯನ್ನು ರಿಯಲ್ ಎಸ್ಟೇಟ್‌ಗೆ ನೀಡಿದ್ದು, ಅದು ಬಿಟ್ಟರೆ ಬೇರೆ ಯಾವುದು ಇಲ್ಲ. ಅದಕ್ಕಾಗಿ ಅವರನ್ನು ರಿಯಲ್ ಎಸ್ಟೇಟ್ ಮುಖ್ಯಮಂತ್ರಿ ಎಂದು ಕರೀತಾರೆ ಎಂದು ಮಾಜಿ ಸಚಿವ ಶ್ರೀರಾಮುಲು ಎಂದು ಟೀಕಿಸಿದರು.

ಜಿಲ್ಲೆಯ ಗುಳೇದಗುಡ್ಡದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿರು. ಬಿಡದಿ ಟೌನ್‌ಶಿಪ್ ವಿಚಾರ ಪ್ರಸ್ತಾಪಿಸಿದ ಅವರು, ಇದೆಲ್ಲವೂ ರಿಯಲ್ ಎಸ್ಟೇಟ್ ದಂಧೆಯಾಗಿದೆ. ಯಾರನ್ನಾದರೂ ಕೇಳಿ ಮುಖ್ಯಮಂತ್ರಿ ಯಾರು ಅಂದ್ರೆ ರಿಯಲ್ ಎಸ್ಟೇಟ್ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಂತಾರೆ. ಅವರೇನು ವ್ಯಾಪಾರ ಮಾಡುತ್ತಾರೆ ಅಂದರೆ ರಿಯಲ್ ಎಸ್ಟೇಟ್ ಅಂತಾರೆ. ಡಿ.ಕೆ.ಶಿವಕುಮಾರ್ ಕೇವಲ ಬೆಂಗಳೂರಿಗೆ ಮಾತ್ರ ಸೀಮಿತ ಆಗಿದ್ದಾರೆ ಎಂದು ದೂರಿದರು.

ಬರಗಾಲ ಇದ್ದ ಸ್ಥಳಕ್ಕೆ ಸಿಎಂ ಭೇಟಿ ನೀಡುತ್ತಿಲ್ಲ. ಬರಗಾಲ ಎಂದು ಘೋಷಣೆ ಮಾಡುತ್ತಿಲ್ಲ. ಕುಡಿಯಲು ನೀರಿಲ್ಲ ರೈತರು ಸಂಕಷ್ಟದಲ್ಲಿದ್ದಾರೆ. ಇದನ್ನು ಸರಿಪಡಿಸಬೇಕಾಗಿತ್ತು. ಈ ಮುಖ್ಯಮಂತ್ರಿಗಳು ಯಾವತ್ತು ರೈತರ ಪರವಾಗಿ ಇಲ್ಲ. ರೈತರ ಜಮೀನಿಗೆ ಯಾವ ರೀತಿ ಬೇಲಿ ಹಾಕಬೇಕು ಎಂಬ ಮನುಷ್ಯ ಅವರು, ರಿಯಲ್ ಎಸ್ಟೇಟ್ ದಂಧೆ ಮಾಡುವವರಿಗೆ ರೈತರ ಸಂಕಷ್ಟ ಏನು ಗೊತ್ತಾಗುತ್ತದೆ ಎಂದು ಆಕ್ರೋಶ ಹೊರಹಾಕಿದರು.

ಬಿಡದಿ ಟೌನ್‌ಶಿಪ್‌ನಿಂದ ಏನು ಪ್ರಯೋಜನ..?:

ಬಿಡದಿಯಲ್ಲಿ ಟೌನ್‌ಶಿಪ್‌ ಮಾಡುವುದರಿಂದ ಏನು ಪ್ರಯೋಜನ? ಉತ್ತರ ಕರ್ನಾಟಕದಲ್ಲಿ ಮಾಡಿದರೆ ನೀವು ಮುಖ್ಯಮಂತ್ರಿ ಆಗಿದ್ದಕ್ಕೂ ನಮಗೆ ಉಪಯೋಗ ಆಯ್ತು ಎನ್ನಬಹುದು. ಬಿಡದಿ ಟೌನ್‌ಶಿಪ್ ಮಾಡೋದು, ಬೆಂಗಳೂರು ಹತ್ತಿರದ ಊರುಗಳು ಇವತ್ತಲ್ಲ ನಾಳೆ ಡೆವಲಪ್ಮೆಂಟ್ ಆಗೇ ಆಗುತ್ತವೆ. ನಮ್ಮ ಉತ್ತರ ಕರ್ನಾಟಕ ನೋಡಿ. ಈ ಭಾಗದಲ್ಲಿ ಡೆವಲಪ್ಮೆಂಟ್ ಮಾಡಿದರೆ, ಹೌದಪ್ಪ ಮುಖ್ಯಮಂತ್ರಿ ಒಳ್ಳೆಯ ಕೆಲಸ ಮಾಡಿದರು ಇತಿಹಾಸದಲ್ಲಿ ಉಳಿಯುತ್ತದೆ. ಮುಖ್ಯಮಂತ್ರಿಗಳಾಗಿ ಎರಡು ಮೂರು ತಿಂಗಳು ಆಯ್ತು ನಮ್ಮ ಭಾಗಕ್ಕೆ ಇನ್ನುವರೆಗೂ ಬಂದೇ ಇಲ್ಲ. ಸಿದ್ದರಾಮಯ್ಯ ಅವರಿಗೆ ಅನುಭವ ಇತ್ತು. ಒಳ್ಳೆಯ ಆಡಳಿತ ಮಾಡಿದ್ದಾರೆ. ಅನೇಕ ಬಾರಿ ಆರ್ಥಿಕ ಮಂತ್ರಿಗಳಾಗಿ ಕೆಲಸ ಮಾಡಿದ್ದಾರೆ. ಭ್ರಷ್ಟಾಚಾರ ಮಾಡಿದಾಗ ನೇರವಾಗಿ ಹೇಳಿದ್ದಾರೆ. ಅವರ ಆಡಳಿತಕ್ಕೂ ಇವರ ಆಡಳಿತಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂದರು.

ಸುರಂಗ ಮಾರ್ಗ ಹೇಗೆ ಮಾಡುತ್ತೀರಿ..?:

ಲಾಲ್‌ಬಾಗ್ ವ್ಯಾಪ್ತಿ ಸುರಂಗ ಮಾರ್ಗ ಮಾಡಲು ಮುಂದಾದ ಸರ್ಕಾರದ ಕ್ರಮಕ್ಕೆ ಮಾಜಿ ಸಚಿವ ಬಿ.ಶ್ರೀರಾಮುಲು ಪ್ರತಿಕ್ರಿಯೆ ನೀಡಿ, ಸುರಂಗ ಮಾರ್ಗ ಮಾಡಲು ಹಣ ಎಲ್ಲಿದೆ?. ಮೊದಲು ರಸ್ತೆ ಗುಂಡಿ ಮುಚ್ಚಲು ಹೇಳಿ, ರಸ್ತೆಗೆ ಪ್ಯಾಚಪ್ ಮಾಡೋಕೆ ಆಗ್ತಿಲ್ಲ. ಐಟಿಬಿಟಿಯವರು ನಮಗೆ ಅವಕಾಶ ಕೊಡಿ ನಾವೇ ಗುಂಡಿ ಮುಚ್ತೀವಿ ಅಂತಿದ್ದಾರೆ. ಸುರಂಗ ಮಾರ್ಗ ಯಾರಿಗೆ ಬೇಕಾಗಿದೆ. ಇದು ಶೇ.30-40 ಕಮೀಷನ್ ಹೊಡೆಯೋದಕ್ಕೆ ಪ್ಲಾನ್. ಆರ್ಥಿಕ ಸಂಪನ್ಮೂಲ ಇಲ್ಲದಿರುವ ವೇಳೆ ಹೇಗೆ ಸುರಂಗ ಮಾರ್ಗ ಮಾಡುತ್ತೀರಿ? ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿ. ರೈತರಿಗೆ ಪರಿಹಾರ ಕೊಡುವ ಕೆಲಸ ಮಾಡಿ. ಕ್ಷೇತ್ರಕ್ಕೆ ಹೋದರೆ ಜನ ನಿಮಗೆ ಕಲ್ಲು ಹೊಡೆಯುವ ಮನಸ್ಥಿತಿಯಲ್ಲಿದ್ದಾರೆ ಎಂದು ಎಚ್ಚರಿಸಿದರು.

ನಾಗೇಂದ್ರನಿಂದ ಹೈಕಮಾಂಡ್‌ ಬ್ಲಾಕ್‌ಮೇಲ್‌:

ಬಿ.ನಾಗೇಂದ್ರ ಹೈಕಮಾಂಡ್‌ಗೆ ಬ್ಲಾಕ್‌ಮೇಲ್‌ ಮಾಡಿ ಸಚಿವ ಸ್ಥಾನ ಪಡೆದಿದ್ದಾರೆ. ವಾಲ್ಮೀಕಿ ಹಗರಣದಲ್ಲಿ ಹೈಕಮಾಂಡ್, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ವೇಣುಗೋಪಾಲ, ಸಿಎಂ ಡಿ.ಕೆ.ಶಿವಕುಮಾರ್ ಎಲ್ಲರಿಗೂ ಪಾಲು ಹೋಗಿದೆ. ಅವರು ಎಲ್ಲರೂ ಪಾಲುದಾರರಾದ ಕಾರಣ ಇವರಿಗೆ ಮಂತ್ರಿ ಸ್ಥಾನ ಸಿಕ್ಕಿದೆ. ನಾಗೇಂದ್ರ ಏನು ಹೇಳುತ್ತಾನೆ ಅಂದರೆ, ನಾನು ಬಾಯಿಬಿಟ್ಟರೆ ಇವರೆಲ್ಲರೂ ಜೈಲಿಗೆ ಹೋಗುತ್ತಾರೆ. ಬಾಯಿ ಬಿಟ್ಟರೆ ರಾಹುಲ್ ಗಾಂಧಿ, ಡಿ.ಕೆ.ಶಿವಕುಮಾರ ಜೈಲಿಗೆ ಹೋಗುತ್ತಾರೆ, ಸಾವಿರ ಖಾತೆಗಳಿಗೆ ಹಗರಣದ ಹಣ ಹೋಗಿದೆ ಎಂದು ಆರೋಪಿಸಿದರು.----------

ಬಾಕ್ಸ್‌

ನಾಗೇಂದ್ರನ ಭ್ರಷ್ಟಾಚಾರ ಸಿದ್ದರಾಮಯ್ಯನವರೇ ಒಪ್ಪಿದ್ದಾರೆ

ನಾಗೇಂದ್ರ ಅಪರಾಧಿಯಲ್ಲ ಎಂಬ ಕಾಂಗ್ರೆಸ್ ಮುಖಂಡರ ಹೇಳಿಕೆಗೆ ಮಾಜಿ ಸಚಿವ ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದು, ನಾಗೇಂದ್ರ ಏನು ಭ್ರಷ್ಟಾಚಾರ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬರು ಹೇಳಿದ್ದಾರೆ. ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ₹ 87 ಕೋಟಿ ಭ್ರಷ್ಟಾಚಾರ ಆಗಿದೆ ಅಂತ ಸಿದ್ದರಾಮಯ್ಯ ಅವರೇ ಹೇಳಿದ್ದರು. ಸಿದ್ದರಾಮಯ್ಯನವರೇ ಸದನದಲ್ಲಿ ಒಪ್ಪಿಕೊಂಡಿದ್ದಾರೆ. ಸಚಿವ ನಾಗೇಂದ್ರ ಅವರು ಜೈಲಿಗೆ ಹೋಗಿ ಪುನಃ ವಾಪಸ್ ಬಂದು ಸಚಿವರಾಗಿದ್ದಾರೆ. ಸದನದಲ್ಲಿ ಮುಖ್ಯಮಂತ್ರಿಗಳು ಅವರನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಎಸ್ಟಿ ಮಕ್ಕಳ ಭವಿಷ್ಯಕ್ಕಾಗಿ ಇದ್ದ ಹಣ ಅದು. ಈ ಸರ್ಕಾರ ಕಿವಿ ಇದ್ದು ಕಿವುಡಾಗಿದೆ, ಕಣ್ಣಿದ್ದೂ ಕುರುಡಾಗಿದೆ, ಮನಸಿದ್ದರೂ ಮನಸಾಕ್ಷಿ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

--------

ಕೋಟ್‌

ಕಾಂಗ್ರೆಸ್‌ನಲ್ಲಿ ಯಾವುದೇ ಹುದ್ದೆ ಅಥವಾ ಮಂತ್ರಿ ಸ್ಥಾನ ಸಿಗಬೇಕಾದರೆ ಭ್ರಷ್ಟಾಚಾರ ಮಾಡಿರಲೇಬೇಕು. ಹಗರಣ ಮಾಡಿರಬೇಕು ಎಂಬ ಹೊಸ ಸಂಪ್ರದಾಯವನ್ನು ಹುಟ್ಟು ಹಾಕುತ್ತಿದ್ದಾರೆ. ಅವನ ಮೇಲೆ ಎಷ್ಟು ಕೇಸ್‌ಗಳಿವೆ? ಹೆಚ್ಚು ಕೇಸ್ ಇದ್ದವರಿಗೆ ಮಾತ್ರ ಮಂತ್ರಿ ಸ್ಥಾನ ಕೊಡುವಂತಾಗಿದೆ. ಕಾಂಗ್ರೆಸ್‌ನಲ್ಲಿ ಮಂತ್ರಿ ಆಗಬೇಕೆಂದರೆ ಲೂಟಿ ಮಾಡಬೇಕು, ಭ್ರಷ್ಟಾಚಾರ ಮಾಡಬೇಕು. ಅಂತವರಿಗೆ ಮಾತ್ರ ಮಂತ್ರಿ ಸ್ಥಾನ ಸಿಗುತ್ತದೆ. ಇದನ್ನು ನಾನು ಹೇಳುತ್ತಿಲ್ಲ, ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ಭ್ರಷ್ಟಾಚಾರ ಮಾಡಿ ಹೈಕಮಾಂಡ್‌ಗೆ ಕೊಟ್ಟಂಥವರಿಗೆ ಸಚಿವ ಸ್ಥಾನ ಸಿಗುತ್ತದೆ. ನಾಗೇಂದ್ರ ಅವರು ಭ್ರಷ್ಟಾಚಾರ ಮಾಡಿ ಹಣವನ್ನು ಹೈಕಮಾಂಡ್‌ಗೆ ಕೊಟ್ಟು ಸಚಿವರಾಗಿದ್ದಾರೆ. ನಾಗೇಂದ್ರ ರಾಜೀನಾಮೆ ಕೊಡುವವರೆಗೂ ಬಿಜೆಪಿ ಪ್ರತಿಭಟನೆ ನಿರಂತರವಾಗಿರುತ್ತದೆ.

- ಬಿ.ಶ್ರೀರಾಮುಲು, ಮಾಜಿ ಸಚಿವ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನಸೆಳೆದ ತಹಸೀಲ್ದಾರ ಕಚೇರಿ ಸಿಬ್ಬಂದಿ ಹಸಿರು ಪ್ರೇಮ
ಎಸ್‌ಡಿಸಿಬಿಎಂನಲ್ಲಿ ಎನ್‌ಎಸ್‌ಎಸ್ ಘಟಕದ ಉದ್ಘಾಟನೆ