ಸರ್ಕಾರವನ್ನು ದೂರುವ ಬದಲು ಕರ್ತವ್ಯ ಮಾಡಿ: ಕಾರ್ಯಕರ್ತರಿಗೆ ಸೊರಕೆ ಸಲಹೆ

KannadaprabhaNewsNetwork | Published : Jul 28, 2024 2:01 AM

ಸಭೆಯಲ್ಲಿ ಇತ್ತೀಚೆಗೆ ನಿಧನರಾದ ಕಾಂಗ್ರೆಸ್ ಪ್ರಮುಖರಾದ ವಿಜಯ ಹೆಗ್ಡೆ, ಸದಾಶಿವ ಕರ್ಕೇರ, ಮಾರಾಡಿ ಮೋಹನ್‌ದಾಸ್ ಶೆಟ್ಟಿ, ಹಂಸ ಮೊಯ್ಲಿ ಮತ್ತಿತರರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳ ಸಭೆಯು ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ನಡೆಯಿತು. ಇತ್ತೀಚೆಗೆ ನಿಧನರಾದ ಕಾಂಗ್ರೆಸ್ ಪ್ರಮುಖರಾದ ವಿಜಯ ಹೆಗ್ಡೆ, ಸದಾಶಿವ ಕರ್ಕೇರ, ಮಾರಾಡಿ ಮೋಹನ್‌ದಾಸ್ ಶೆಟ್ಟಿ, ಹಂಸ ಮೊಯ್ಲಿ ಮತ್ತಿತರರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಮೃತರಿಗೆ ಕಿಶನ್ ಹೆಗ್ಡೆ ಕೊಳ್ಳೆಬೈಲ್, ಭುಜಂಗ ಶೆಟ್ಟಿ, ರಮೇಶ್ ಕಾಂಚನ್, ಜ್ಯೋತಿ ಹೆಬ್ಬಾರ್ ನುಡಿನಮನ ಸಲ್ಲಿಸಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್, ಉಡುಪಿಯಲ್ಲಿ ಪಕ್ಷದ ಸೋಲಿನ ಬಗ್ಗೆ ನಡೆದಿರುವ ವಿಮರ್ಶೆಗಳ ವಿವರಣೆ ನೀಡಿದರು. ಜಾತಿ, ಧರ್ಮದ ಹೆಸರಲಿ ಭಾವನಾತ್ಮಕ ವಿಷಯಗಳನ್ನು ಎತ್ತಿ ಹೇಳಿ ಬಿಜೆಪಿ ಮತಗಳಿಸಿತು. ನಮಗೆ ಸೋಲಾಯಿತು ಎಂದರು.ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಸೊರಕೆ ಮಾತನಾಡಿ, ನಾವು ಜನರ ಸಮಸ್ಯೆಗಳನ್ನು ಪರಿಹರಿಸಬೇಕು. ಕುಮ್ಕಿ ಹಕ್ಕು ನೀಡುವುದು, ಮನೆ ಕಟ್ಟುವಲ್ಲಿ ಇರುವ ಸಮಸ್ಯೆ ನಿವಾರಣೆ, ಅಧಿಕಾರಿಗಳಿಂದಾಗುವ ವಿಳಂಬಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕಾಗಿದೆ. ಎಲ್ಲದರಲ್ಲಿ ಸರ್ಕಾರವನ್ನು ದೂರುವ ಬದಲು ನಮ್ಮ ಕರ್ತವ್ಯ ನಾವು ಮಾಡಬೇಕು ಎಂದು ಕರೆ ನೀಡಿದರು.ಉಡುಪಿ ಜಿಲ್ಲಾ ಸಹಕಾರಿ ಕಾಂಗ್ರೆಸ್ ಅಧ್ಯಕ್ಷ ಕೆ. ಅಣ್ಣಯ್ಯ ಸೇರಿಗಾರ ಮಾತನಾಡಿದರು. ಈ ಸಂದರ್ಭ ಡಾಕ್ಟರೇಟ್ ಪಡೆದ ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಪ್ರಧಾನ ಕಾರ್ಯದರ್ಶಿ ಡಾ. ಶೇಖ್ ಅಬ್ದುಲ್ ವಹೀದರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಕೆಪಿಸಿಸಿ ಉಪಾದ್ಯಕ್ಷ ಎಂ.ಎ. ಗಫೂರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆ, ನಾಯಕರಾದ ವೆರೋನಿಕಾ ಕರ್ನೆಲಿಯೋ ಮತ್ತು ರಾಜು ಪೂಜಾರಿ ಉಪಸ್ಥಿತರಿದ್ದರು. ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ವಕ್ತಾರ ಭಾಸ್ಕರ್ ರಾವ್ ಸಭೆಯನ್ನು ನಿರೂಪಿಸಿದರು. ಜಿಲ್ಲಾ ಸಹಕಾರಿ ಕಾಂಗ್ರೆಸ್ ಅಧ್ಯಕ್ಷ ಕೆ. ಅಣ್ಣಯ್ಯ ಸೇರಿಗಾರ್‌ ವಂದಿಸಿದರು.