ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಗ್ರಾಮೀಣ ಪ್ರದೇಶದಲ್ಲಿ ಕಲಿತು ಇಂದು ಸನ್ಮಾನ ಸ್ವೀಕರಿಸಲು ಆಗಮಿಸಿರುವ ನಿಮ್ಮಲ್ಲಿ ಹೆಚ್ಚಿನ ಆತ್ಮವಿಶ್ವಾಸ, ಕಲಿಯಬೇಕು ಎಂಬ ತುಡಿತವಿದೆ. ಆದ್ದರಿಂದ ನಿಮ್ಮ ಜ್ಞಾನದ ಹಸಿವನ್ನು ಹೆಚ್ಚಿಸಿಕೊಂಡು ಇನ್ನೂ ಉನ್ನತ ಸ್ಥಾನ ಪಡೆಯುವ ಮನಸ್ಥಿತಿಯಲ್ಲಿ ಕಲಿಕೆಯನ್ನು ಮುಂದುವರಿಸಿ ಮತ್ತು ನಿಮ್ಮ ಮೇಲೆ ಪೋಷಕರು ಇಟ್ಟಿರುವ ನಂಬಿಕೆ ಹಾಗೂ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಜಾಗೃತರಾಗಿರಿ ಎಂದು ಸಬ್ ಇನ್ಸ್ಪೆಕ್ಟರ್ ಅರುಣ್ ಸಲಹೆ ನೀಡಿದರು.ಪಟ್ಟಣದ ಶ್ರೀ ರಾಘವೇಂದ್ರಸ್ವಾಮಿ ಮಠದ ಆವರಣದಲ್ಲಿ ಸೀತಾಲಕ್ಷ್ಮಿ ರಂಗಸ್ವಾಮಿಶೆಟ್ಟಿ ಚಾರಿಟಬಲ್ ಟ್ರಸ್ಟ್ ಆಯೋಜನೆ ಮಾಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ವಿದ್ಯಾರ್ಥಿಗಳ ಭವಿಷ್ಯ ನಾಶಪಡಿಸುವಲ್ಲಿ ಮೊಬೈಲ್ ಗೀಳು ಪ್ರಮುಖ ಸ್ಥಾನ ಪಡೆದಿದೆ, ಆದ್ದರಿಂದ ಕಲಿಕೆಗೆ ಅಗತ್ಯವಿರುವ ವಿಷಯಕ್ಕೆ ಸಂಬಂಧಿಸದಂತೆ ಮಾತ್ರ ಮೊಬೈಲ್ ಬಳಿಸಿ, ಆದರೆ ಟಿಕ್ಟಾಕ್, ಚಾಟಿಂಗ್ ಅಥವಾ ರೀಲ್ಸ್ ಮಾಡಲು ಹೋಗಿ ನಿಮ್ಮ ಜೀವನವನ್ನು ನಾಶ ಮಾಡಿಕೊಳ್ಳಬೇಡಿ ಎಂದು ಹೇಳಿ, ಹಲವಾರು ವಿಷಯಗಳ ಕುರಿತು ಎಚ್ಚ್ರಿಕೆಯಿಮದ ಇರುವಂತೆ ತಿಳಿಸಿ, ಕಲಿಕೆಗೆ ಅಗತ್ಯವಾದ ಸಲಹೆಗಳನ್ನು ನೀಡಿದರು.
ಟ್ರಸ್ಟಿನ ಸದಸ್ಯ ಬಾಲಾಜಿ ಪ್ರಾಸ್ತವಿಕ ನುಡಿಗಳನ್ನಾಡುತ್ತ ಕರ್ನಾಟಕ ರಾಜ್ಯ ನೀರಾವರಿ ಇಲಾಖೆಯ ನಿ. ಕಾರ್ಯದರ್ಶಿ ಎನ್.ಆರ್.ವೆಂಕಟೇಶ್ ಪ್ರಸಾದ್ ಅವರ ಅಜ್ಜಿ, ತಾತ ಹೆಸರಿನಲ್ಲಿ ೨೦೦೭ ಪ್ರಾರಂಭಿಸಿದ ಟ್ರಸ್ಟ್, ೪ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರದಿಂದ ಪ್ರಾರಂಭವಾಗಿ ೪೯ ವಿದ್ಯಾರ್ಥಿಗಳ ತನಕ ಬಂದು ತಲುಪಿದೆ. ೪೯ ಪ್ರೌಢಶಾಲೆಗಳಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಗುತ್ತಿದ್ದು, ಪ್ರತಿವರ್ಷ ನಾಲ್ಕು ವಿದ್ಯಾರ್ಥಿಗಳನ್ನು ಹೆಚ್ಚಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಪ್ರೀತಂ ಸ್ವಾಗತಿಸಿದರು ಹಾಗೂ ಅನುಪಮಾ ನಿಲೇಶ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸೀತಾಲಕ್ಷ್ಮಿ ರಂಗಸ್ವಾಮಿಶೆಟ್ಟಿ ಚಾರಿಟಬಲ್ ಟ್ರಸ್ಟ್ ಉಪಾಧ್ಯಕ್ಷ ಎನ್.ಜಿ.ಮುಕುಂದ, ಖಜಾಂಚಿ ಎನ್.ಆರ್.ವಿಜಯಕುಮಾರ್, ಸದಸ್ಯರಾದ ಎನ್.ಆರ್.ಕರುಣಾಕರ್, ಎನ್.ಆರ್. ಭಗವಾನ್ ದಾಸ್, ಎನ್.ಆರ್.ಆನಂದ್ ಕುಮಾರ್, ಎನ್.ಜಿ.ಮೋಹನ್ ಇತರರು ಇದ್ದರು.