ರಕ್ತದಾನಕ್ಕೆ ಹಿಂಜರಿಕೆ ಬೇಡ

KannadaprabhaNewsNetwork |  
Published : Sep 20, 2026, 03:45 AM IST
ಜೆಎಸ್ಸೆಸ್‌ ಉತ್ಸವ ಭವನದಲ್ಲಿ ವಿವಿಧ ಸಂಸ್ಥೆಗಳೊಡನೆ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ | Kannada Prabha

ಸಾರಾಂಶ

ರಕ್ತವು ಮನುಷ್ಯನ ದೇಹಕ್ಕೆ ಅತ್ಯಂತ ಅವಶ್ಯಕವಾದ ಜೀವದ್ರವ್ಯ. ಅಪಘಾತ, ಶಸ್ತ್ರಚಿಕಿತ್ಸೆ, ಹೆರಿಗೆ ಸಂದರ್ಭದಲ್ಲಿ ಉಂಟಾಗುವ ತೊಂದರೆ, ವಿವಿಧ ಕಾಯಿಲೆ ಹಾಗೂ ತುರ್ತು ಚಿಕಿತ್ಸೆಯ ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಉಂಟಾಗುತ್ತದೆ.

ಧಾರವಾಡ:

ರಕ್ತದಾನ ಮಹಾದಾನ ಎಂಬ ಮಾತು ಕೇವಲ ಕಾರ್ಯವಲ್ಲ, ಮಾನವೀಯತೆ ವ್ಯಕ್ತಪಡಿಸುವ ಮಹತ್ವದ ಕರ್ತವ್ಯ. ಹಣ, ವಸ್ತು ಅಥವಾ ಬೇರೆ ಯಾವುದೇ ಸಹಾಯ ನೀಡಿದಾಗ ಅದರ ಪ್ರಯೋಜನ ಒಂದು ನಿರ್ದಿಷ್ಟ ಮಟ್ಟಿಗೆ ಇರುತ್ತದೆ. ಆದರೆ, ರಕ್ತದಾನ ಮೂಲಕ ಒಬ್ಬರ ಜೀವ ಉಳಿಸುವ ಅಮೂಲ್ಯ ಅವಕಾಶ ಪಡೆಯುತ್ತೇವೆ ಎಂದು ಜೆಎಸ್‌ಎಸ್‌ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.

ಇಲ್ಲಿನ ಜೆಎಸ್‌ಎಸ್‌ ಉತ್ಸವ ಭವನದಲ್ಲಿ ವಿವಿಧ ಸಂಸ್ಥೆಗಳೊಡನೆ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಉದ್ಘಾಟಿಸಿದ ಅವರು, ಪ್ರತಿ ವರ್ಷ ಸಂಸ್ಥೆಯಲ್ಲಿ ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸುವ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಲಾಗುತ್ತಿದೆ ಎಂದರು.

ರಕ್ತವು ಮನುಷ್ಯನ ದೇಹಕ್ಕೆ ಅತ್ಯಂತ ಅವಶ್ಯಕವಾದ ಜೀವದ್ರವ್ಯ. ಅಪಘಾತ, ಶಸ್ತ್ರಚಿಕಿತ್ಸೆ, ಹೆರಿಗೆ ಸಂದರ್ಭದಲ್ಲಿ ಉಂಟಾಗುವ ತೊಂದರೆ, ವಿವಿಧ ಕಾಯಿಲೆ ಹಾಗೂ ತುರ್ತು ಚಿಕಿತ್ಸೆಯ ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ನಮ್ಮ ಒಂದು ಯೂನಿಟ್ ರಕ್ತವು ಮತ್ತೊಬ್ಬರ ಜೀವ ಉಳಿಸಲು ಸಹಾಯ ಮಾಡಬಹುದು ಎಂದರು.

ಕ್ಯಾನ್ಸರ್ ಆಸ್ಪತ್ರೆಯ ಡಾ. ಉಮೇಶ ಹಳ್ಳಿಕೇರಿ ಮಾತನಾಡಿ, ಯಾವುದೇ ವ್ಯಕ್ತಿಯ ತೂಕ ಹಾಗೂ ಆರೋಗ್ಯ ಸರಿಯಾದ ಕ್ರಮದಲ್ಲಿದ್ದರೇ ಮಾತ್ರ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ರಕ್ತದಾನಕ್ಕೆ ಒಬ್ಬ ಸಾಮಾನ್ಯ ವಯಸ್ಕನ ದೇಹದಲ್ಲಿ ಐದರಿಂದ ಆರು ಲೀಟರ್ ರಕ್ತವಿದ್ದು, ಅದರಲ್ಲಿ ಕೇವಲ 300 ಮಿಲಿ ಮಾತ್ರ ರಕ್ತದಾನದ ಸಮಯದಲ್ಲಿ ಬಳಕೆಯಾಗುತ್ತದೆ. ಈ ರಕ್ತವನ್ನು ನಿಮ್ಮ ದೇಹವು 24ರಿಂದ 48 ಗಂಟೆಗಳ ಒಳಗೆ ಬದಲಾಯಿಸುತ್ತದೆ. ರಕ್ತದಾನದ ನಂತರ ಯಾವುದೇ ವಿಶೇಷ ಆಹಾರ, ವಿಶ್ರಾಂತಿ ಅಥವಾ ಔಷಧಿ ಅಗತ್ಯವಿಲ್ಲ. ಇದು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಕಡಿಮೆ ಮಾಡುತ್ತದೆ ಎಂದು ಹೇಳಿದರು.

ಶಿಬಿರದಲ್ಲಿ ಒಟ್ಟು 172 ಯುನಿಟ್ ರಕ್ತ ಸಂಗ್ರಹ ಮಾಡಲಾಯಿತು. ಆಡಳಿತಾಧಿಕಾರಿ ಅರಿಹಂತ ಪ್ರಸಾದ, ಮಹಾವೀರ ಉಪಾಧ್ಯೆ, ಡಾ. ನಾಹಿದಾ, ದತ್ತಮೂರ್ತಿ ಕುಲಕರ್ಣಿ, ಡಾ. ವೆಂಕಟೇಶ ಮುತಾಲಿಕ, ಡಾ. ಸೂರಜ್ ಜೈನ್, ವೇದವತಿ ತಿವಾರಿ, ಈರಪ್ಪ ಪತ್ತಾರ, ಮಹಾಂತೇಶ ವೀರಾಪೂರ, ಮಂಜುನಾಥ ಜಿ.ಪಿ, ಬಲಭೀಮ ಹಾವನೂರ, ಡಾ. ರೋನಿಲ್ ಮನೋಹರ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೂಡುಬಿದಿರೆ ಆಳ್ವಾಸ್ ಮೆಡಿಕಲ್ ಕಾಲೇಜು ನಾಳೆ ಉದ್ಘಾಟನೆ
ಡೋಂಗಿ ಪರಿಸರವಾದಿ ಹೇಳಿಕೆಗೆ ಮುತ್ತಣ ಖಂಡನೆ