ಬಿಡದಿಯಲ್ಲಿ ನರಗುಂದ ಮರುಕಳಿಸಲು ಮುನ್ನುಡಿ ಬರೆಯಬೇಡಿ

KannadaprabhaNewsNetwork |  
Published : Jul 15, 2026, 01:15 AM IST
14ಕೆಆರ್ ಎಂಎನ್ 6.ಜೆಪಿಜಿಕರ್ನಾಟಕ ನವ ನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ್ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ರಾಮನಗರ: ರಾಜ್ಯ ಸರ್ಕಾರ ಬಿಡದಿ ಟೌನ್ ಶಿಪ್ ಯೋಜನೆಗಾಗಿ ಬಲವಂತವಾಗಿ ಭೂಮಿ ಕಸಿದುಕೊಳ್ಳಲು ಮುಂದಾದರೆ ನರಗುಂದ ರೈತ ಬಂಡಾಯದಂತಹ ಘಟನೆ ಬಿಡದಿಯಲ್ಲಿಯೂ ಮರುಕಳಿಸುತ್ತದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಆ ಘಟನೆಗೆ ಮುನ್ನುಡಿ ಬರೆಯುವ ದುಸ್ಸಾಹಸಕ್ಕೆ ಕೈ ಹಾಕಬಾರದು ಎಂದು ಕರ್ನಾಟಕ ನವ ನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ್ ಪಾಟೀಲ್ ಒತ್ತಾಯಿಸಿದರು

ರಾಮನಗರ: ರಾಜ್ಯ ಸರ್ಕಾರ ಬಿಡದಿ ಟೌನ್ ಶಿಪ್ ಯೋಜನೆಗಾಗಿ ಬಲವಂತವಾಗಿ ಭೂಮಿ ಕಸಿದುಕೊಳ್ಳಲು ಮುಂದಾದರೆ ನರಗುಂದ ರೈತ ಬಂಡಾಯದಂತಹ ಘಟನೆ ಬಿಡದಿಯಲ್ಲಿಯೂ ಮರುಕಳಿಸುತ್ತದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಆ ಘಟನೆಗೆ ಮುನ್ನುಡಿ ಬರೆಯುವ ದುಸ್ಸಾಹಸಕ್ಕೆ ಕೈ ಹಾಕಬಾರದು ಎಂದು ಕರ್ನಾಟಕ ನವ ನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ್ ಪಾಟೀಲ್ ಒತ್ತಾಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರಗುಂದ ರೈತ ಬಂಡಾಯ ಯಾವ ಕಾರಣಕ್ಕೆ ಆಯಿತೆಂದು ಮುಖ್ಯಮಂತ್ರಿಗಳಿಗೆ ಗೊತ್ತಿದೆ. ಆ ಬಂಡಾಯದ ಪ್ರತಿರೂಪ ಬಿಡದಿಯಲ್ಲಿ ಆಗಬೇಕೆಂಬ ಆಲೋಚನೆ ಏನಾದರು ಇದೆಯೇ ಎಂದು ಪ್ರಶ್ನಿಸಿದರು. ನರಗುಂದ ರೈತ ಬಂಡಾಯ ಉಂಟಾದಾಗ ಕರ್ನಾಟಕದಲ್ಲಿ ರಾಜಕಾರಣಿಗಳಿಗೆ ಸಂದಿಗ್ಧ ಪರಿಸ್ಥಿತಿ ಉಂಟಾಯಿತು. ಆ ಘಟನೆಯನ್ನು ಒಮ್ಮೆ ರಾಜ್ಯಸರ್ಕಾರ ಅವಲೋಕನ ಮಾಡಬೇಕು. ಆದ್ದರಿಂದ ಕೂಡಲೇ ಸರ್ಕಾರ ಭೂಸ್ವಾಧೀನ ಕೈಬಿಡಬೇಕು ಮತ್ತು ರೈತರ ಮೇಲೆ ಹಾಕಿರುವ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ರೈತ ಪರ, ಕನ್ನಡಿಗರ ಪರ ಇರಬೇಕು. ರಿಯಲ್ ಎಸ್ಟೇಟ್ ಸರ್ಕಾರ ಆಗಬಾರದು. ಬಿಡದಿಯಿಂದ ಕನ್ನಡಿಗರನ್ನು ಒಕ್ಕಲಿಬ್ಬಿಸುವುದು ಬೇಡ, ಆ ಜಾಗಕ್ಕೆ ಹೊರ ರಾಜ್ಯದ ಅನ್ಯಭಾಷಿಕರನ್ನು ತಂದು ಕೂರಿಸುವುದು ಏಕೆ? ರೈತರಿಗೆ ಇದೇ ರೀತಿ ತೊಂದರೆ ನೀಡಿದರೆ ಇದು ಸರ್ಕಾರದ ಅವನತಿಗೆ ಕಾರಣವಾಗಲಿದೆ. ಮುಖ್ಯಮಂತ್ರಿಗಳು ತಮ್ಮ ತವರು ಜಿಲ್ಲೆಯಲ್ಲಿ ರಿಯಲ್ ಎಸ್ಟೇಟ್ ಲೂಟಿಗೆ ಅವಕಾಶ ಮಾಡಿಕೊಡಬಾರದು ಎಂದು ಭೀಮಾಶಂಕರ್ ಪಾಟೀಲ್ ಹೇಳಿದರು.

ದರ್ಪ, ದೌರ್ಜನ್ಯ ತೋರಿಸಿ ರೈತರ ಭೂಮಿ ಕಸಿದುಕೊಳ್ಳಲು ಹೋಗಿದ್ದ ಅಧಿಕಾರಿಗಳಿಗೆ ರೈತ ಮಹಿಳೆಯರು ಪೊರಕೆ ಸೇವೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಒನಕೆ ಸೇವೆಯನ್ನೂ ಮಾಡುತ್ತಾರೆ. ಆ ರೈತರ ಹೋರಾಟ ಆಕ್ರೋಶದ ಕಿಚ್ಚಲ್ಲ, ಸ್ವಾಭಿಮಾನದ ಕಿಚ್ಚು. ತಮ್ಮ ಭೂಮಿಯನ್ನು ಕಿತ್ತುಕೊಳ್ಳಲು ಅಧಿಕಾರಿಗಳು ಬಂದಾಗ ಸ್ವಾಭಿಮಾನದಿಂದ ಹೋರಾಟ ನಡೆಸಿರುವ ರೈತರ ಮೇಲೆ ಯಾವುದೇ ಪ್ರಕರಣಗಳನ್ನು ದಾಖಲು ಮಾಡದೆ, ರೈತರಿಗೆ ಸರ್ಕಾರ ನೈತಿಕ ದೈರ್ಯ ತುಂಬಬೇಕು ಎಂದು ಹೇಳಿದರು.

ಅಭಿವೃದ್ಧಿ ಹೆಸರಲ್ಲಿ ಬಲವಂತವಾಗಿ ಭೂಮಿಯನ್ನು ಕಸಿದುಕೊಂಡು ರೈತರನ್ನು ಬೀದಿಗೆ ತಳ್ಳುವುದು ಸರಿಯಲ್ಲ. ಅಭಿವೃದ್ಧಿ ಹೆಸರಿನಲ್ಲಿ ಕೆಐಎಡಿಬಿ, ಕೆಎಚ್‌ಬಿ ವತಿಯಿಂದ ವಶಪಡಿಸಿಕೊಂಡಿರುವ ರೈತರ ಜಮೀನು ಏನಾಗಿದೆ ಎಂಬ ದಾಖಲೆ ನಮ್ಮ ಕಣ್ಣಮುಂದಿವೆ. ಬಿಡದಿ ಭಾಗದ ಸಂತ್ರಸ್ತ ರೈತರ ಪರ ಕರ್ನಾಟಕ ನವನಿರ್ಮಾಣ ಸೇನೆ ಬೆಂಬಲವಾಗಿ ನಿಲ್ಲುವ ಜತೆಗೆ ನ್ಯಾಯ ದೊರಕಿಸಲು ಕಾನೂನು ಹೋರಾಟ ಮಾಡಲಿದೆ ಎಂದು ಹೇಳಿದರು.

ಇದು ಸ್ವಾಬಿಮಾನಿ ರೈತರ ಹೋರಾಟ, ತಲೆಮಾರಿನಿಂದ ಕಾಪಾಡಿಕೊಂಡು ಬಂದ ತಮ್ಮ ಭೂಮಿಯನ್ನು ಕಳೆದುಕೊಳ್ಳುವ ರೈತರು ನೋವು, ಆಕ್ರೋಶ, ಆತಂಕದಿಂದ ಪೊರಕೆ ಸೇವೆ ಮಾಡಿದ್ದಾರೆ. ಇವರ ವಿರುದ್ಧ ಸರ್ಕಾರ ಯಾವುದೇ ಕಾರಣಕ್ಕೂ ಕಾನೂನು ಕ್ರಮ ಕೈಗೊಳ್ಳಬಾರದು ಎಂದರು.

ರೈತರು ಪಕ್ಷಾತೀತವಾಗಿ ಹೋರಾಟ ಮಾಡಬೇಕು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಂದು ಬಣಗಳಾದರೆ ಅನ್ಯಾಯ ಆಗಲಿದೆ. ರಾಜಕಾರಣಿಗಳ ಪ್ರಚೋದನೆಗೆ ಒಳಪಟ್ಟು ಭೂಮಿಯನ್ನು ಭ್ರಷ್ಟ ವ್ಯವಸ್ಥೆಯ ಕೈಗೆ ಕೊಟ್ಟು ಬದುಕನ್ನು ನಾಶ ಮಾಡಿಕೊಳ್ಳಬೇಡಿ ಎಂದು ಭೀಮಾಶಂಕರ್ ಪಾಟೀಲ್ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ನಾರಾಯಣಗೌಡ, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಗೋವಿಂದರಾಜು, ನೆಲಮಂಗಲ ತಾಲೂಕು ಅಧ್ಯಕ್ಷ ನಾರಾಯಣಸ್ವಾಮಿ ಉಪಸ್ಥಿತರಿದ್ದರು.

ಬಾಕ್ಸ್...

ವಿಧಾನಸೌಧದ ಎದುರು ಗೂಟದ ಚಳವಳಿ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಾನು ಮಾಜಿ ಸಿಎಂ ದಿವಂಗತ ಬಂಗಾರಪ್ಪ ಅವರ ಶಿಷ್ಯ ಎಂದು ಹೇಳಿಕೊಳ್ಳುತ್ತಾರೆ. ಅವರ ಹಾದಿಯಲ್ಲಿ ಸಾಗಬೇಕಿದ್ದ ಡಿಕೆಶಿ ಇಂದು ರೈತರ ಭೂಮಿಯನ್ನು ಕಸಿದುಕೊಳ್ಳಲು ಹೊರಟಿದ್ದಾರೆ. ಈ ಹಿಂದೆ ಸಾಲ ಮರುಪಾವತಿಸಲು ಬ್ಯಾಂಕ್‌ನವರು ರೈತರಿಗೆ ಕಿರಿಕಿರಿ ಕೊಡುತ್ತಿದ್ದಾಗ ಬಂಗಾರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಕಠಿಣ ನಿಲುವು ತೆಗೆದುಕೊಂಡಿದ್ದರು. ಬ್ಯಾಂಕ್ ನವರು ಮನೆಗೆ ಬಂದರೆ ಕೊಟ್ಟಿಗೆಯಲ್ಲಿರುವ ಗೂಟವನ್ನು ಕಿತ್ತು ಹೊಡೆಯಿರಿ ಎಂದು ಕರೆ ನೀಡಿದ್ದನ್ನು ಇಂದಿನ ಸಿಎಂ ಡಿಕೆಶಿ ಸ್ಮರಿಸಬೇಕು. ಇದನ್ನು ನೆನಪಿಸಲು ಮುಂದಿನ ದಿನಗಳಲ್ಲಿ ವಿಧಾನಸೌಧದ ಎದುರು ಗೂಟದ ಚಳವಳಿ ಹಮ್ಮಿಕೊಳ್ಳುತ್ತೇವೆ ಎಂದು ಭೀಮಾಶಂಕರ್ ಪಾಟೀಲ್ ಎಚ್ಚರಿಕೆ ನೀಡಿದರು.

14ಕೆಆರ್ ಎಂಎನ್ 6.ಜೆಪಿಜಿ

ಕರ್ನಾಟಕ ನವ ನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ್ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾವಗಡದಲ್ಲಿ ಕೋವಿಡ್ ಮುಂಜಾಗ್ರತೆಗೆ ಡಿಸಿ ಸೂಚನೆ
ಕುರಿ ಮಾಲೀಕನಿಗೆ ಪರಿಹಾರ ಮಂಜೂರಾತಿ ಆದೇಶ ಪತ್ರ