ಪನ್ನೀರ್‌ ತಿಂತೀರಾ? ಹುಷಾರ್‌ ಆಗಿರಿ ! ಆಹಾರ ಗುಣಮಟ್ಟ ಸುರಕ್ಷತಾ ಇಲಾಖೆ ಎಚ್ಚರಿಕೆ

KannadaprabhaNewsNetwork | Updated : Mar 27 2025, 07:56 AM IST

ಸಾರಾಂಶ

ಅಡುಗೆ ಪದಾರ್ಥಗಳಲ್ಲಿ ರಸಾಯನಿಕ ಬಣ್ಣ ಬಳಕೆ, ಕಲಬೆರಕೆ ವಿರುದ್ಧ ಸಮರ ಸಾರಿರುವ ಆಹಾರ ಗುಣಮಟ್ಟ ಸುರಕ್ಷತಾ ಇಲಾಖೆ ಪನ್ನೀರ್‌ ಪ್ರಿಯರಿಗೆ ಕ್ಯಾನ್ಸರ್‌ ಎಚ್ಚರಿಕೆ ನೀಡಿದೆ.

  ಬೆಂಗಳೂರು :   ಅಡುಗೆ ಪದಾರ್ಥಗಳಲ್ಲಿ ರಸಾಯನಿಕ ಬಣ್ಣ ಬಳಕೆ, ಕಲಬೆರಕೆ ವಿರುದ್ಧ ಸಮರ ಸಾರಿರುವ ಆಹಾರ ಗುಣಮಟ್ಟ ಸುರಕ್ಷತಾ ಇಲಾಖೆ ಪನ್ನೀರ್‌ ಪ್ರಿಯರಿಗೆ ಕ್ಯಾನ್ಸರ್‌ ಎಚ್ಚರಿಕೆ ನೀಡಿದೆ.

ಮಾ.17ರಂದು ನಗರದ ವಿವಿಧೆಡೆಯಿಂದ ಪನ್ನೀರ್‌ನ 163 ಸ್ಯಾಂಪಲ್ ಸಂಗ್ರಹಿಸಿ ತಪಾಸಣೆಗೆ ಕಳಿಸಲಾಗಿತ್ತು. ಈ ಪೈಕಿ 17ರ ವರದಿ ಬಂದಿದ್ದು, ನಾಲ್ಕು ಮಾದರಿ ಸುರಕ್ಷಿತ ಎನ್ನಿಸಿಕೊಂಡಿದ್ದರೆ, ಇನ್ನು ಎರಡರಲ್ಲಿ ಹಾನಿಕಾರಕ ಅಂಶ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಪನ್ನೀರ್ ತಯಾರಿಸುವಾಗ ಕಡಿಮೆ ಪ್ರಮಾಣದ ಕ್ಯಾಲ್ಸಿಯಂ ಹಾಗೂ ಪ್ರೋಟಿನ್‌ ಅನ್ನು ಬಳಸುತ್ತಾರೆ ಮತ್ತು ಪನ್ನೀರ್‌ ಅನ್ನು ಮೆದುವಾಗಿಸಲು ಕೆಮಿಕಲ್ ಬಳಸುತ್ತಾರೆ. ಈ ಕೆಮಿಕಲ್ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂಬ ಮಾಹಿತಿ ಆಹಾರ ಸುರಕ್ಷತಾ ಇಲಾಖೆ ವರದಿಯಲ್ಲಿದೆ ಎನ್ನಲಾಗಿದೆ.

ಆರೋಗ್ಯ ಸಮಸ್ಯೆಗಳೇನು?: ಇದರಿಂದಾಗಿ ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್‌ಗೆ ಕಾರಣ, ಕೊಬ್ಬಿನ ಪ್ರಮಾಣ ಹೆಚ್ವಾಗುವಿಕೆ ಹಾಗೂ ಕಿಡ್ನಿ ಸಮಸ್ಯೆ ಉಂಟಾಗುತ್ತದ ಎಂದು ವೈದ್ಯರು ತಿಳಿಸಿದ್ದಾರೆ.

ಇನ್ನು, ಆಹಾರ ಸುರಕ್ಷತಾ ಇಲಾಖೆ ವಿವಿಧೆಡೆ ಜಾಗೃತಿ ಕಾರ್ಯಕ್ರಮ ನಡೆಸಿದೆ. ಇಲಾಖೆಯ ಅಧಿಕಾರಿಗಳು ಆಹಾರ ಪದಾರ್ಥಗಳ ಕಲರಿಂಗ್ ಮತ್ತು ಕಲಬೆರಕೆ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಕಲಬೆರಕೆ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದಾರೆ.

ಈ ಮೊದಲು ಆಹಾರ ಸುರಕ್ಷತಾ ಇಲಾಖೆ ಕಲ್ಲಂಗಡಿಯಲ್ಲಿ ಕೆಮಿಕಲ್, ಸಿಹಿ ತಿಂಡಿ ಹಾಗೂ ಇಡ್ಲಿಗೆ ಬಳಸುವ ಪ್ಲಾಸ್ಟಿಕ್‌ನಲ್ಲಿ ಕ್ಯಾನ್ಸರ್‌ಕಾರಕ ಅಂಶ ಪತ್ತೆ ಮಾಡಿತ್ತು.

ವರದಿ ಪರಿಶೀಲಿಸುವೆ: ದಿನೇಶ್‌

ಪನ್ನೀರ್‌ನಲ್ಲಿ ಹಾನಿಕಾರಕ ಅಂಶ ಪತ್ತೆ ಆಗಿರುವ ವರದಿ ನನ್ನ ಗಮನಕ್ಕೆ ಇನ್ನೂ ಬಂದಿಲ್ಲ. ವರದಿ ತರಿಸಿಕೊಂಡು ಪರಿಶೀಲನೆ ನಡೆಸುತ್ತೇವೆ. ಬಳಿಕ ಹೋಟೆಲ್‌, ರೆಸ್ಟೋರೆಂಟ್‌ನವರಿಗೆ ಇಂತಹ ಪನ್ನೀರ್‌ ಬಳಸದಂತೆ ಹಾಗೂ ಉತ್ಪಾದಕರ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಪ್ರತಿ ತಿಂಗಳು ಕಲಬೆರಕೆ ಪದಾರ್ಥಗಳ ಕುರಿತಂತೆ ನಿರಂತರವಾಗಿ ತಪಾಸಣೆ ಇರಲಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

Share this article