ಮಾಗಡಿ: ಪಟ್ಟಣದ ಚೈತನ್ಯ ಆಸ್ಪತ್ರೆಯಲ್ಲಿ ನನ್ನ ತಾಯಿಗೆ ವೈದ್ಯರು ಸೂಕ್ತ ಚಿಕಿತ್ಸೆ ನೀಡದಿರುವುದೇ ಸಾವಿಗೆ ಕಾರಣ, ನ್ಯಾಯ ಸಿಗುವವರೆಗೂ ಯಾವುದೇ ಕಾರಣಕ್ಕೂ ಆಸ್ಪತ್ರೆ ತೆರೆಯಲು ಬಿಡುವುದಿಲ್ಲ ಎಂದು ಗುತ್ತಿಗೆದಾರ ಕೆಂಪರಾಜು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅ.20ರಂದು ನಮ್ಮ ತಾಯಿ ವೆಂಕಟಲಕ್ಷ್ಮಮ್ಮ ಕೆಮ್ಮು ಎಂದು ಆಸ್ಪತ್ರೆಗಯಲ್ಲಿ ಚಿಕಿತ್ಸೆ ಪಡೆಯಲು ತೆರಳಿದ್ದರು. ಈ ವೇಳೆ ಡಾ.ಪುಷ್ಪಾಂಜಲಿ ಅವರು ನಮ್ಮ ತಾಯಿಗೆ ೩ ಇಂಜೆಕ್ಷನ್ ಕೊಟ್ಟ ಪರಿಣಾಮ ಅವರು ಆಸ್ಪತ್ರೆಯಲ್ಲೇ ಸಾವಪ್ಪಿದ್ದು, ಇದಕ್ಕೆ ವೈದ್ಯರ ನಿರ್ಲಕ್ಷವೇ ಕಾರಣ. ತಾಯಿ ಸಾವಿಗೆ ನ್ಯಾಯ ಸಿಗುವವರೆಗೂ ಚೈತನ್ಯ ಆಸ್ಪತ್ರೆ ಬಾಗಿಲು ತೆರೆಯಲು ಬಿಡುವುದಿಲ್ಲ. ಈಗಾಗಲೇ ಡಿಎಚ್ಒ ಅವರು ಭೇಟಿ ನೀಡಿ ನಮಗೆ ನ್ಯಾಯ ಕೊಡಿಸುತ್ತೇವೆ. ಡಿಎಚ್ಒ ತನಿಖೆ ಮುಗಿಯೋವರೆಗೂ ಆಸ್ಪತ್ರೆ ಬಾಗಿಲು ತೆಗೆಯಲು ಬಿಡುವುದಿಲ್ಲ ಎಂದು ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆದಿದ್ದೆವು. ಒಂದು ವೇಳೆ ಡಿಎಚ್ಒ ಅವರಿಂದ ನಮಗೆ ನ್ಯಾಯ ಸಿಗದಿದ್ದರೆ ಲೋಕಾಯುಕ್ತ ಅಧಿಕಾರಿಗಳ ಮೊರೆ ಹೋಗುತ್ತೇವೆ. ರೋಗಿಗಳ ಜೀವದ ಜೊತೆ ಚೆಲ್ಲಾಟವಾಡುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ಆಸ್ಪತ್ರೆ ತೆರೆಯಲು ಬಿಡುವುದಿಲ್ಲ ಎಂದು ಸಿಬ್ಬಂದಿಯನ್ನು ಹೊರಗೆ ಕಳಿಸಿ ಪಟ್ಟು ಹಿಡಿದು ಆಸ್ಪತ್ರೆಗೆ ಬೀಗ ಜಡಿದರು.ಜಿಲ್ಲಾ ವೈದ್ಯಾಧಿಕಾರಿ ಡಾ.ನಿರಂಜನ್ ಮಾತನಾಡಿ, ಮೃತ ವೆಂಕಟಲಕ್ಷ್ಮಮ್ಮನವರ ಪುತ್ರ ಕೆಂಪರಾಜು ನೀಡಿರುವ ದೂರಿನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ಆಸ್ಪತ್ರೆಯನ್ನು ಬಂದ್ ಮಾಡುವಂತೆಯೂ ಎಚ್ಚರಿಕೆ ನೀಡಿದ್ದೇವೆ. ಈ ಪ್ರಕರಣವನ್ನು ಜಿಲ್ಲಾ ಮಟ್ಟದ ಉನ್ನತ ವೈದ್ಯರಿಂದ ತನಿಖೆ ಮಾಡಿಸಿ ನ್ಯಾಯ ಕೊಡಿಸಲಾಗುತ್ತದೆ. ತಾಲೂಕಿನಲ್ಲಿ ಯಾವುದೇ ರೀತಿ ಅನಧಿಕೃತ ಕ್ಲಿನಿಕ್ ಗಳು ಮತ್ತು ಆಸ್ಪತ್ರೆಗಳು ನಡೆಯುತ್ತಿರುವುದು ನಮ್ಮ ಗಮನಕ್ಕೆ ತಂದ ಕೂಡಲೇ ಆ ಕ್ಲಿನಿಕ್ ಮತ್ತು ಆಸ್ಪತ್ರೆಯನ್ನು ಮುಲಾಜಿಲ್ಲದೆ ಮುಚ್ಚಿಸಲಾಗುತ್ತದೆ ಎಂದು ತಿಳಿಸಿದರು.
ಈ ವೇಳೆ ಮೃತರ ಪುತ್ರ ಶಂಕರ್, ಮುಖಂಡರಾದ ಮೂರ್ತಿ, ಬಿ.ಟಿ.ನಾರಾಯಣ್, ಗುಣಶೇಖರ್, ಮುನಿಸ್ವಾಮಿ, ಲೋಕೇಶ್, ದೊಡ್ಡಯ್ಯ, ದೊಡ್ಡಿ ಲಕ್ಷ್ಮಣ್ ಇತರರು ಹಾಜರಿದ್ದರು.20ಮಾಗಡಿ1 :
ಮಾಗಡಿಯ ಚೈತನ್ಯ ಆಸ್ಪತ್ರೆ ವೈದ್ಯರ ನಿರ್ಲಕ್ಷ ಖಂಡಿಸಿ ಮೃತರ ಸಂಬಂಧಿಕರು ಆಸ್ಪತ್ರೆ ವಿರುದ್ಧ ಪ್ರತಿಭಟನೆ ನಡೆಸಿದರು.