ಕನ್ನಡಪ್ರಭ ವಾರ್ತೆ ಉಡುಪಿದೊಡ್ಡಣಗುಡ್ಡೆ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ನೆರವೇರುತ್ತಿರುವ ಶರನ್ನವರಾತ್ರಿ ಮಹೋತ್ಸವದ ಲಲಿತಾ ಪಂಚಮಿ ಪರ್ವಕಾಲ ಶನಿವಾರ ಕ್ಷೇತ್ರಕ್ಕೆ ಶ್ರೀಚಕ್ರವನ್ನ ನೀಡಿದ ಹರಿಹರಪುರದ ಶ್ರೀ ಶಂಕರಾಚಾರ್ಯ ಪೀಠದ ಶ್ರೀ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿ ಅವರ ಪೀಠಾರೋಹಣದ ರಜತ ಮಹೋತ್ಸವ ಪ್ರಯುಕ್ತ 6 ಆರು ತಿಂಗಳ ಕಾಲ ಕೋಟಿ ಲಲಿತಾ ಸಹಸ್ರನಾಮ ಪಾರಾಯಣ ಮಹಾಯಜ್ಞವನ್ನು ಕ್ಷೇತ್ರದ ಶ್ರೀ ರಮಾನಂದ ಗುರೂಜಿ ನೆರವೇರಿಸಲು ಸಂಕಲ್ಪಿಸಿದ್ದಾರೆ.ಈ ಮಹಾಯಜ್ಞವನ್ನು ಶನಿವಾರ ಜಿಲ್ಲಾ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಸಂದೀಪ್ ಮಂಜ ಉದ್ಘಾಟಿಸಿ, ಇಂತಹ ಧಾರ್ಮಿಕ ಕೈಂಕರ್ಯಗಳಿಂದ ಮಾತ್ರ ಮಾನಸಿಕ ನೆಮ್ಮದಿ ದೊರಕಲು ಸಾಧ್ಯ. ಜೀವನದಲ್ಲಿ ಸ್ವಚ್ಛಂದವಾಗಿ ಬದುಕಲು ದೇವರಿಗೆ ಸಂಪೂರ್ಣ ಶರಣಾಗಾಬೇಕು. ನಿತ್ಯ ಜಪ, ದೇವರ ಸ್ತೋತ್ರ ಪಠಣ ಮಾಡಬೇಕು ಎಂದು ವೇ.ಮೂ. ರಾಘವೇಂದ್ರ ಭಟ್ ಹೇಳಿದರು.ಸನಾತನ ಧರ್ಮವನ್ನು ಉಳಿಸಬೇಕಾದ ಜವಾಬ್ದಾರಿ ಮಠ, ಮಂದಿರಗಳ ಮೇಲಿದೆ. ಹೋಮ, ಹವನಗಳು ಸಮರ್ಪಕವಾಗಿ ನಡೆದರೆ ಉತ್ತಮ ಮಳೆ, ಮಳೆಯಿಂದ ಸಮೃದ್ಧ ಬೆಳೆ, ತನ್ಮೂಲಕ ಸುಂದರ ಬದುಕು ಸಾಧ್ಯ ಎಂದರು.ವೇ.ಮೂ. ವಿಖ್ಯಾತ್ ಭಟ್ ಅವರು, ಪ್ರತಿ ತಿಂಗಳು ಕನಿಷ್ಟ ಎರಡು ಸಹಸ್ರ ಕದಳಿಯಾಗ ನಡೆಯುವ ಕ್ಷೇತ್ರವಿದ್ದರೆ ಅದು ಶ್ರೀ ಕ್ಷೇತ್ರ ದೊಡ್ಡಣಗುಡ್ಡೆ. ಇದೀಗ ಕ್ಷೇತ್ರದಲ್ಲಿ ಲಲಿತಾ ಸಹಸ್ರನಾಮವನ್ನು ಪಠನ ಮಾಡುವ ಅವಕಾಶವನ್ನು ಒದಗಿಸಿಕೊಟ್ಟಿದ್ದಾರೆ. ಈ ನೆಲೆಯಲ್ಲಿ ಇಲ್ಲಿನ ತಾಯಿ ಅತ್ಯಂತ ಪ್ರಸನ್ನತೆಯಿಂದ ಬೇಡಿದ ಇಷಾರ್ಥವನ್ನು ಈಡೇರಿಸುತ್ತಿದ್ದಾಳೆ ಎಂದರು.ಸಾಮಾಜಿಕ ಕಾರ್ಯಕರ್ತೆ ಸುಪ್ರಭಾ ಆಚಾರ್ಯ ಕಡಿಯಾಳಿ, ವೇಮೂ ವಾಮನ ಭಟ್, ಪುರೋಹಿತ ಗಣೇಶ್ ಸರಳಾಯ, ಪ್ರಜ್ಞಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕಿ ಉಷಾ ರಮಾನಂದ, ಕರ್ಣಾಟಕ ಬ್ಯಾಂಕಿನ ಶಾಖಾ ಪ್ರಬಂಧಕ ಪ್ರತೀಕ್ ಟಿ.ಆರ್. ಉಪಸ್ಥಿತರಿದ್ದರು. ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ಸ್ವಾಗತಿಸಿದರು. ಉಪ್ಪೂರು ಭಾಗ್ಯಲಕ್ಷ್ಮೀ ನಿರೂಪಿಸಿ, ವಂದಿಸಿದರು. ಯೋಗದಿಂದ ಯೋಗ್ಯತೆ: ಗುರೂಜಿಅಧ್ಯಕ್ಷತೆ ವಹಿಸಿದ್ದ ಶ್ರೀ ರಮಾನಂದ ಗುರೂಜಿ, ಎಲ್ಲರಿಗೂ ಯೋಗ ಮತ್ತು ಯೋಗ್ಯತೆ ಇರುವುದಿಲ್ಲ, ಆದರೆ ಯೋಗ ಬಂದಾಗ ಸತ್ಕಾರ್ಯ ಮಾಡಿದರೆ ಯೋಗ್ಯತೆ ಸಂಪಾದಿಸಲು ಸಾಧ್ಯವಾಗುತ್ತದೆ. ಲಲಿತಾ ಸಹಸ್ರನಾಮ ಪಾರಾಯಣದ ಮೂಲಕ ಎಲ್ಲ ಭಾಗ್ಯಗಳನ್ನು ಪಡೆದು ಗೌರವಯುತ, ನೆಮ್ಮದಿಯ ಬದುಕು ಸಾಧ್ಯ. ಈ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಶೀಲರಾಗೋಣ ಎಂದರು.