ರಾಜ್ಯ ಸರ್ಕಾರ ದುರುದ್ದೇಶ ಇಟ್ಟುಕೊಂಡು ನೇಮಕಾತಿಗೆ ಮುಂದಾಗುತ್ತಿದೆ. ಒಳಮೀಸಲಾತಿ ನೀಡಿ ಹುದ್ದೆ ಭರ್ತಿ ಮಾಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ರಾಜ್ಯ ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಬಿಜೆಪಿ ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣನವರ ಎಚ್ಚರಿಕೆ ನೀಡಿದರು.
ಹಾವೇರಿ: ರಾಜ್ಯ ಸರ್ಕಾರ ದುರುದ್ದೇಶ ಇಟ್ಟುಕೊಂಡು ನೇಮಕಾತಿಗೆ ಮುಂದಾಗುತ್ತಿದೆ. ಒಳಮೀಸಲಾತಿ ನೀಡಿ ಹುದ್ದೆ ಭರ್ತಿ ಮಾಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ರಾಜ್ಯ ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಬಿಜೆಪಿ ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣನವರ ಎಚ್ಚರಿಕೆ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 56 ಸಾವಿರ ಖಾಲಿ ಹುದ್ದೆಗಳನ್ನು ಹಳೆ ಮೀಸಲಾತಿಗೆ ಅನುಗುಣವಾಗಿ ಭರ್ತಿ ಮಾಡಿಕೊಳ್ಳುವುದಾಗಿ ಸರ್ಕಾರ ಹೇಳಿದೆ. ಇದರಲ್ಲಿ ರಾಜ್ಯ ಸರ್ಕಾರ ಒಳ ಮೀಸಲಾತಿಯನ್ನು ಪರಿಗಣಿಸಿಲ್ಲ. ಒಳ ಮೀಸಲಾತಿಯನ್ನು ಜಾರಿಗೊಳಿಸಿಯೇ ಹೊಸ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಬೇಕು. ಇಲ್ಲವೇ ಹಿಂದಿನ ಮೀಸಲಾತಿ ಅಡಿಯಲ್ಲಿ ಒಳ ಮೀಸಲು ನೀಡಬೇಕು ಎಂದು ಅವರು ಆಗ್ರಹಿಸಿದರು.ಒಳಮೀಸಲಾತಿಗಾಗಿ ಸಮುದಾಯ ಕಳೆದ ಮೂರ್ನಾಲ್ಕು ದಶಕಗಳಿಂದ ಹೋರಾಟ ಮಾಡುತ್ತಲೇ ಬಂದಿದೆ. ಹಿಂದಿನ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಸದಾಶಿವ ಆಯೋಗದ ವರದಿಯನ್ವಯ ಮಾದಿಗರಿಗೆ ಶೇ.೬, ಹೊಲೆಯ, ಹೊಲೆಯ ಸಂಬಂಧಿತ ಸಮುದಾಯಕ್ಕೆ ಶೇ.೫, ಲಂಬಾಣಿ, ಕೊರಚ, ಕೊರಮ ಶೇ.೩ ಹಾಗೂ ಅಲೆಮಾರಿ ಸಮುದಾಯಕ್ಕೆ ಶೇ. ೧ ಮೀಸಲು ವಿಂಗಡಿಸಿತ್ತು. ಬಳಿಕ ರಚಿಸಲಾದ ಉಪ ಸಮಿತಿಯೂ ಕೂಡ ಇದೇ ವರದಿಯನ್ನು ಕೊಟ್ಟಿತ್ತು ಎಂದರು.
ನಾಗಮೋಹನ ದಾಸ ವರದಿ ಪ್ರಕಾರ ಮೀಸಲಾತಿ ಹೆಚ್ಚಳಕ್ಕೆ ಪಟ್ಟು ಹಿಡಿದಾಗ ಹಿಂದಿನ ಬಿಎಸ್ವೈ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಎಸ್ಸಿ ಮೀಸಲಾತಿಯನ್ನು ಶೇ.೧೫ರಿಂದ ೧೭ಕ್ಕೆ, ಎಸ್ಟಿ ೩ರಿಂದ ೭ಕ್ಕೆ ಹೆಚ್ಚಿಸಿ ಕೇಂದ್ರಕ್ಕೆ ಶಿಫಾರಸು ಮಾಡಿದ್ದರು. ಸುಪ್ರೀಂ ಕೋರ್ಟ್ ಕೂಡ ಒಳಮೀಸಲು ಜಾರಿ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿದೆ. ಈಗ ತಮ್ಮ ಅವಯಲ್ಲಿ ಜಾರಿಮಾಡಿದ್ದ ಹಳೆಯ ವರದಿಯನ್ನು ಪರಿಗಣಿಸಿ ೫೬,೪೩೨ ಹುದ್ದೆಗಳ ನೇಮಕಾತಿ ಮಾಡಲು ಹೊರಟಿದೆ. ಇದು ಸಂವಿಧಾನ ವಿರೋಧಿಯಾಗಿದೆ. ಉದ್ಯೋಗಾಕಾಂಕ್ಷಿಗಳ ಕಣ್ಣಿಗೆ ಮಣ್ಣೆರಚುವ ಪ್ರಕ್ರಿಯೆಯಾಗಿದೆ. ಒಳಮೀಸಲಾತಿ ಪ್ರಕಾರ ಹುದ್ದೆ ಭರ್ತಿ ಮಾಡದೇ ಹಳೆಯ ಮೀಸಲಾತಿ ಪ್ರಕಾರ ಹುದ್ದೆ ಭರ್ತಿ ಮಾಡಿದರೆ ನಿಜವಾದ ಅಸ್ಪೃಶ್ಯರಿಗೆ ಅನ್ಯಾಯವಾಗಲಿದೆ ಎಂದು ಆರೋಪಿಸಿದರು.ಲಿಡ್ಕರ್ ಮಾಜಿ ಉಪಾಧ್ಯಕ್ಷ ಡಿ.ಎಸ್. ಮಾಳಗಿ ಮಾತನಾಡಿ, ರಾಜ್ಯ ಸರ್ಕಾರ ಹಳೆ ಮೀಸಲಾತಿ ಪಟ್ಟಿಯನ್ನು ಹಿಡಿದುಕೊಂಡು ಹೊಸ ಹುದ್ದೆಗಳ ನೇಮಕಾತಿ ಮಾಡಿಕೊಳ್ಳುತ್ತಿದೆ. ಇದು ಅಸ್ಪೃಶ್ಯರಲ್ಲೇ ಅಸ್ಪೃಶ್ಯರಾದ ಮಾದಿಗ ಸಮುದಾಯದ ಬಹುಸಂಖ್ಯಾತರಿಗೆ ಅನ್ಯಾಯವಾಗುತ್ತಿದೆ. ತುಳಿತಕ್ಕೆ ಒಳಗಾದ ಜನರಿಗೆ ನ್ಯಾಯ ಒದಗಿಸುವುದಾದರೆ ಮಾದಿಗ ಸಮುದಾಯಕ್ಕೆ ಶೇ.೬ರಷ್ಟು ಮೀಸಲಾತಿ ನೀಡಬೇಕು. ಶೇ.15ರ ಮೀಸಲಾತಿ ಪ್ರಕಾರವಾಗಲಿ, ಇಲ್ಲವೇ ಶೇ.17ರ ಮೀಸಲಾತಿಯಲ್ಲಿ ಕಲ್ಪಿಸಿರುವ ಒಳಮೀಸಲಾತಿಗೆ ಅನುಗುಣವಾಗಿಯೇ ಹುದ್ದೆ ಭರ್ತಿ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಹಿಂದಿನಿಂದಲೂ ಕಾಂಗ್ರೆಸ್ ಸರ್ಕಾರ ಮಾದಿಗರಿಗೆ ಅನ್ಯಾಯ ಮಾಡುತ್ತಲೇ ಬಂದಿದೆ. ಮಾದಿಗರಿಗೆ ಸರ್ಕಾರಿ ಹುದ್ದೆ ಸಿಗಬಾರದು ಎಂಬ ಕಾರಣಕ್ಕೆ ಒಳಮೀಸಲಾತಿ ನೀಡದೇ ಹುದ್ದೆ ತುಂಬಲು ಹೊರಟಿರುವುದು ಖಂಡನೀಯ. ಈ ಗೊಂದಲ ಬಗೆಹರಿಸಿದ ಬಳಿಕವೇ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಎಚ್.ಆಂಜನೇಯ ಮಾತನಾಡಿದರು. ಅಶೋಕ ಮರೆಣ್ಣನವರ, ನಾಗರಾಜ ಮಾಳಗಿ, ನಾಗರಾಜ ಇದ್ದರು.