ಯಲಬುರ್ಗಾ: ಪರಿಶಿಷ್ಟ ಪಂಗಡ ವರ್ಗಕ್ಕೆ ಅನ್ಯ ಜಾತಿಗಳನ್ನು ಸೇರಿಸದಂತೆ ಆಗ್ರಹಿಸಿ ವಾಲ್ಮೀಕಿ ನಾಯಕ ಮಹಾಸಭಾದ ತಾಲೂಕು ಘಟಕದಿಂದ ಪಟ್ಟಣದ ತಹಸೀಲ್ದಾರ್ ಬಸವರಾಜ ತೆನ್ನಳ್ಳಿ ಮುಖಾಂತರ ರಾಜ್ಯಪಾಲರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಮಹಾಸಭಾದ ತಾಲೂಕು ಅಧ್ಯಕ್ಷ ಮಾನಪ್ಪ ಪೂಜಾರ ಮಾತನಾಡಿ, ರಾಜ್ಯದಲ್ಲಿ ಈಗಾಗಲೇ ಎಸ್ಟಿ ಪಟ್ಟಿಯಲ್ಲಿ ಸುಮಾರು 52 ಜಾತಿ-ಉಪ ಜಾತಿಗಳಿವೆ. ಇವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿಂದಿನಿಂದಲೂ ಎಸ್ಟಿ ವರ್ಗಕ್ಕೆ ವಾಲ್ಮೀಕಿ ನಾಯಕ ಸಮಾಜ ಸೇರಿಸಿದ್ದಾರೆ. ಎಸ್ಟಿ ವರ್ಗವು ಬುಡಕಟ್ಟು ಸಮಾಜಕ್ಕೆ ಸೇರಿದ್ದು, ಶೈಕ್ಷಣಿಕ, ರಾಜಕೀಯ ಹಾಗೂ ಆರ್ಥಿಕವಾಗಿ ಹಿಂದುಳಿದಿದೆ. ಶೇ. ೩ರಷ್ಟು ಈ ಮೊದಲು ಶೇ.3ರಷ್ಟಿದ್ದ ಮೀಸಲಾತಿಯನ್ನು ರಾಜನಹಳ್ಳಿಯ ವಾಲ್ಮೀಕಿ ಶ್ರೀಗಳ ನೇತೃತ್ವದಲ್ಲಿ ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ಸುಮಾರು ೨೮೪ ದಿನ ಪ್ರತಿಭಟನೆ ಮಾಡಲಾಗಿದ್ದು, ಶೇ.೭ರಷ್ಟು ಮೀಸಲಾತಿ ದೊರೆತಿದೆ.ಈ ಹಿಂದೆ ಸರ್ಕಾರ ಕುಲಶಾಸ್ತ್ರ ಅಧ್ಯಯನ ಸಮಿತಿ ರಚನೆ ಮಾಡಿ ಬೇರೆ ಸಮುದಾಯವನ್ನು ಎಸ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಪ್ರಸ್ತಾವನೆ ಪರಿಶೀಲಿಸಿ ಎಸ್ಟಿಗೆ ಪೂರಕವಾದ ಅಂಶಗಳು ಇರುವುದಿಲ್ಲವೆಂಬುದನ್ನು ಮನಗಂಡು ತಿರಸ್ಕರಿಸಿ ಮರಳಿಸಲಾಗಿತ್ತು. ಈಗ ಸರ್ಕಾರ ಕುರುಬ ಸಮುದಾಯ ಮತ್ತು ಇನ್ನಿತರ ಜಾತಿಗಳನ್ನು ಎಸ್ಟಿಗೆ ಸೇರಿಸುವ ಹುನ್ನಾರ ನಡೆದಿದ್ದು ಖಂಡನೀಯ. ಸರ್ಕಾರ ಕೂಡಲೇ ಇಂಥ ನಿರ್ಧಾರ ಕೈಬಿಟ್ಟು ಯಥಾ ಪ್ರಕಾರ ಮೀಸಲಾತಿ ಮುಂದುವರೆಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭ ಸಮುದಾಯದ ಪ್ರಮುಖರಾದ ಹಂಚ್ಯಾಳಪ್ಪ ಪೂಜಾರ, ಫಕೀರಪ್ಪ ತಳವಾರ್, ಶ್ರೀಕಾಂತಗೌಡ ಮಾಲಿಪಾಟೀಲ್, ಭೀಮಪ್ಪ ಹವಳಿ, ಓಬಳೆಪ್ಪ ಕುಲಕರ್ಣಿ, ಭೀಮನಗೌಡ ಪೊಲೀಸ್ ಪಾಟೀಲ್, ದ್ಯಾಮನಗೌಡ ಗೌಡ್ರ, ಗುಂಡನಗೌಡ ಮಾಲಿಪಾಟೀಲ್, ತಾಯಪ್ಪ, ಶಶಿಧರ ಗಡಾದ, ರಮೇಶ, ಅಶೋಕ ಮಾಲಿಪಾಟೀಲ್, ಹನುಮಪ್ಪ ಮದ್ಲಗಟ್ಟಿ, ಕಳಕಪ್ಪ ತಳವಾರ್, ಹಿರಣಾಕ್ಷಗೌಡ ಮಾಲಿಪಾಟೀಲ್, ಶಂಕ್ರಗೌಡ ಸಾಲಭಾವಿ, ಶರಣಗೌಡ ಬಸಾಪುರ, ಮೌನೇಶ ಮದ್ಲೂರು, ಯಮನೂರ, ಮಾನಪ್ಪ, ಶರಣಪ್ಪ ಸೇರಿದಂತೆ ಮತ್ತಿತರರು ಇದ್ದರು.