ಕನ್ನಡಪ್ರಭ ವಾರ್ತೆ ಮೈಸೂರು
ಜಿಲ್ಲೆಯ ನಂಜನಗೂಡು ತಾಲೂಕು ಸುತ್ತೂರು ಶ್ರೀಕ್ಷೇತ್ರದಲ್ಲಿ ಜೆಎಸ್ಎಸ್ ಮಹಾವಿದ್ಯಾಪೀಠದ ಶ್ರೀಶಿವರಾತ್ರೀಶ್ವರ ಧಾರ್ಮಿಕ ದತ್ತಿ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಶಿಬಿರವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿ, ನಾವು ಓದುತ್ತಿದ್ದ ಕಾಲಘಟ್ಟ ಮತ್ತು ಆಗಿನ ಸೌಲಭ್ಯವನ್ನು ನೆನೆದರೆ, ಈಗಿನ ಮಕ್ಕಳಿಗೆ ಎಲ್ಲವೂ ಸುಲಭ ಎನಿಸುತ್ತದೆ. ಆದರೆ ಸೌಲಭ್ಯದ ದಾಸರಾಗಿ ಸಾಧನೆ ಮಾಡದ ಸಾವಿರಾರು ಉದಾಹರಣೆ ನಮ್ಮ ಮುಂದಿದೆ. ಈಗ ಸ್ಮಾರ್ಟ್ ಕ್ಲಾಸ್ ಸೌಲಭ್ಯವಿದೆ, ಕಂಪ್ಯೂಟರ್ ಇದೆ, ಎಐ ತಂತ್ರಜ್ಞಾನ ನಮ್ಮ ಜತೆ ಇದೆ. ಗ್ರಂಥಾಲಯ ಸೌಲಭ್ಯವಿದೆ. ಅಂದರೆ ಎಲ್ಲವೂ ಸುಲಭ ವಿಧಾನವಾಗಿದೆ. ಹಾಗಂತ ಜೀವನ ಸುಲಭ ಎಂದುಕಂಡರೆ ಅಷ್ಟೇ ಕಷ್ಟವೂ ಇದೆ ಎಂದರು.
ಸೌಲಭ್ಯ ಹೆಚ್ಚಾದಂತೆ ಅದರ ದಾಸರಾಗಿ ಸಾಧನೆ ಮಾಡದ ಸಾವಿರಾರು ಉದಾಹರಣೆ ಇದೆ. ನಾವು ಎಸ್ಸೆಸ್ಸೆಲ್ಸಿ ಓದುವ ಕಾಲಕ್ಕೆ ಮೊಬೈಲ್ ತಂತ್ರಜ್ಞಾನ ಬರುತ್ತದೆ ಎಂಬುದು ಗೊತ್ತಿರಲಿಲ್ಲ. ಈಗ ಮೊಬೈಲ್ತಂತ್ರಜ್ಞಾನ ಬಂದ ಮೇಲೆ ಏನು ಮಾಡುತ್ತಿದ್ದೇವೆ. ರೀಲ್ಸ್ ಮಾಡುವುದು, ಜೋಕು ಇಷ್ಟಕ್ಕೆ ಸೀಮಿತವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.ಇಂದಿನ ಮಕ್ಕಳು ಸಿಕ್ಕಿರುವ ಸೌಲಭ್ಯವನ್ನು ಬಳಸಿಕೊಳ್ಳದೆ ಸೈಡ್ ಇಂಪ್ಯಾಕ್ಟ್ ಗೆ ಒಳಗಾಗಿದ್ದಾರೆ. ಎಐ ಬರುತ್ತದೆ ಎಂಬ ಕಲ್ಪನೆ ಇರಲಿಲ್ಲ. ಚಾಟ್ ಜಿಪಿಟಿ ಬಂದಿದೆ. ಈ ತಂತ್ರಜ್ಞಾನ ವರವೊ, ಶಾಪವೋ ಎಂದು ಪ್ರಶ್ನಿಸಿದ ಅವರು, ಈ ಹಿಂದೆ ಕ್ಯಾಲುಕ್ಯುಲೇಟರ್ ಬಂತು. ಅದು ಇದ್ದವರು ಶ್ರೀಮಂತರು. ಅದು ಬಂದ ಮೇಲೆ ಮಗ್ಗಿ, ಗುಣಾಕಾರ, ಭಾಗಾಕಾರ ಮೆರೆತೆ ಹೋಯಿತು. ಆದ್ದರಿಂದ ಇಂತಹ ಎಲ್ಲಾ ರೀತಿಯ ತಂತ್ರಜ್ಞಾವು ಜನರ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದರು.
ಶಾಲಾ ಕಾಲೇಜು ಮಕ್ಕಳು ಪ್ರಬಂಧ ಮಂಡನೆಗೆ ಸಿದ್ಧವಾಗಬೇಕಾದರೆ ಜೆಮಿನಿ ಮೊರೆ ಹೋಗುತ್ತಿದ್ದಾರೆ. ಇದರಿಂದ ಅವರ ಕ್ರಿಯಾಶೀಲತೆ ಹೋಗುತ್ತಿದೆ. ವಿಚಾರವಂತಿಕೆ ಮರೆಯಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಶಿಕ್ಷಣದಿಂದ ಮಾತ್ರ ನಾವು ನಾಡು ಕಟ್ಟುವ ನಾಗರೀಕರಾಗಬಾಹುದು. ಎಸ್ಸೆಸ್ಸೆಲ್ಸಿ, ಪಿಯುಸಿ ಬಳಿಕ ಎಂಜಿನಿಯರಿಂಗ್ ಅಥವಾ ವೈದ್ಯರು ಮಾತ್ರವೇ ಆಗಬೇಕಿಲ್ಲ. ಅದಕ್ಕಿಂತ ಹತ್ತುಪಟ್ಟು ಅವಕಾಶವಿದೆ. ಜಗತ್ತು ಬದಲಿಸುವ ಅಯುಧ ಇದ್ದರೆ ಅದು ಶಿಕ್ಷಣ ಮಾತ್ರ. ನಿಮ್ಮ ಮನಸ್ಸು ಮತ್ತು ನಡತೆ ನಿಯಂತ್ರಣದಲ್ಲಿದ್ದರೆ ಏನು ಬೇಕಾದರೂ ಸಾಧಿಸಬಹುದು. ನಾವು ಎಂತದ್ದೆ ಶಿಕ್ಷಣ ನೀಡಬಹುದು. ಆದರೆ ನೈತಿಕತೆ ಬೆಳೆಸುವುದು ಕಷ್ಟವಿದೆ. ಮಕ್ಕಳಲ್ಲಿ ಸನ್ನಡತೆ, ಸತ್ಚಿಂತನೆ ಮತ್ತು ನೈತಿಕತೆ ಬಹಳ ಮುಖ್ಯ ಎಂದರು.
ಶಾಲಾ ಶಿಕ್ಷಣ ಇಲಾಖೆ ಸಹ ನಿರ್ದೇಶಕಿ ಕೆ. ರಾಜಲಕ್ಷ್ಮೀ ಮಾತನಾಡಿ, ಸಾಧನೆ ಮಾಡಬೇಕು ಎಂಬ ಛಲ ಮೂಡಬೇಕು, ಆಗ ಮಾತ್ರ ಸಾಧ್ಯ. ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದರೆ ಉತ್ತಮ. ಎಲ್ಲರೂ ವೈಭವ್ ಸೂರ್ಯವಂಶಿ ಆಗಲು ಸಾಧ್ಯವಿಲ್ಲ. ವಿಜ್ಞಾನಿ ಆಗಬೇಕು, ಕೇವಲ ಸರ್ಟಿಫಿಕೇಟ್ ಆಗಬಾರದು, ಉತ್ತಮ ವೈದ್ಯರಾಗಬೇಕು. ಇತ್ತೀಚೆಗೆ ಸರ್ಕಾರಿ ಶಾಲೆಗಳಲ್ಲಿ 6ನೇ ತರಗತಿ ಮಕ್ಕಳಿಗೆ ಎಐ ಬಳಕೆ ಬಗ್ಗೆ ತಿಳಿಸಲಾಗುತ್ತಿದೆ ಎಂದರು.