ಮುಂಡರಗಿ: ಕೃತಕ ಬುದ್ಧಿಮತ್ತೆಗೆ ಹೃದಯ ಮತ್ತು ಭಾವನೆ ಇಲ್ಲದೆ ಇರುವುದರಿಂದ ಅದು ಎಲ್ಲರ ಮನಸ್ಸನ್ನು ಗೆಲ್ಲಲು ಸಾಧ್ಯವಿಲ್ಲ. ಇದರಿಂದ ಅನೇಕರು ಉದ್ಯೋಗವನ್ನು ಕಳೆದುಕೊಳ್ಳುವರು ಎಂಬ ಭೀತಿ ಇದೆ. ಅದಕ್ಕೆ ಕಿವಿಗೊಡದೆ ಎಲ್ಲ ಪ್ರಶಿಕ್ಷಣಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚು ಗಮನಕೊಟ್ಟು ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಡಾ. ಅನ್ನದಾನೀಶ್ವರ ಸ್ವಾಮೀಜಿ ತಿಳಿಸಿದರು.
ಜ.ಅ.ವಿ. ಸಮಿತಿಯ ಆಡಳಿತಾಧಿಕಾರಿ ಡಾ. ಬಿ.ಜಿ. ಜವಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆರ್ಟಿಫಿಶಿಯಲ್ ಇಂಟೆಲಿಜೆನ್ಸಿಯಿಂದ ಮುಂದಿನ ದಿನಮಾನಗಳಲ್ಲಿ ಉದ್ಯೋಗವನ್ನು ಕಳೆದುಕೊಳ್ಳುವ ಅತಂಕ ಇದೆ. ಆದರೆ ಶಿಕ್ಷಕ ವೃತ್ತಿಗೆ ಅದರಿಂದ ಯಾವ ಪ್ರಯೋಜನವೂ ಇಲ್ಲ. ಅದು ವಿಷಯಗಳನ್ನು ಪ್ರತಿಪಾದಿಸಬಹುದು. ಆದರೆ ಭಾವನೆ ಇಲ್ಲದ ಪ್ರತಿಪಾದನೆ ಯಾರ ಹೃದಯವನ್ನು ತಟ್ಟದು. ಪ್ರಶಿಕ್ಷಣಾರ್ಥಿಗಳು ಮುಂದೆ ಶಿಕ್ಷಕ ವೃತ್ತಿ ಆಯ್ಕೆ ಮಾಡಿಕೊಂಡರೆ ನಿಮಗೆ ಲಾಭವಾಗುತ್ತದೆ ಎಂದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರೊ. ಎಂ.ಜಿ. ಗಚ್ಚಣ್ಣವರ ಉಪನ್ಯಾಸ ನೀಡಿದರು. ಕಾಲೇಜು ಮೇಲ್ವಿಚಾರಣಾ ಕಮಿಟಿಯ ಕಾರ್ಯಧ್ಯಕ್ಷ ಸಿ.ಎಸ್. ಅರಸನಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿ ಸಂಘದ ಕಾರ್ಯಾಧ್ಯಕ್ಷೆ ಶಶಿಕಲಾ ಹಂಚಿನಾಳ ಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿ ಭೋಧಿಸಿದರು. ವಿಶೇಷ ಸಾಧನೆ ಮಾಡಿದ ಉಜ್ಜನಿ ರವಿಚಂದ್ರ, ಪುಟ್ಟರಾಜ ಚಿಂಚಲಿ ಅವರನ್ನು ಶ್ರೀಗಳು ಸನ್ಮಾನಿಸಿದರು. ಮಹಿಳಾ ಪ್ರತಿನಿಧಿ ಶೋಭಾ ಹೊನ್ನೂರ ಉಪಸ್ಥಿತರಿದ್ದರು. ಪ್ರಾ. ಡಾ. ಎಂ.ವಿ. ಕುಲಕರ್ಣಿ ಸ್ವಾಗತಿಸಿದರು. ಪ್ರಶಿಕ್ಷಣಾರ್ಥಿ ಕುಮಾರ ನೀಲಪ್ಪ ನಿರೂಪಿಸಿದರು. ವಿದ್ಯಾರ್ಥಿ ಸಂಘದ ಪ್ರ. ಕಾರ್ಯದರ್ಶಿ ಮಂಜುನಾಥ ಕಲ್ಮನಿ ವಂದಿಸಿದರು.