ಉದ್ಘಾಟನೆಗೆ ಕಾಯುತ್ತಿರುವ ಅಗ್ನಿಶಾಮಕ ಠಾಣೆ ಕಟ್ಟಡ

KannadaprabhaNewsNetwork |  
Published : Apr 14, 2026, 02:45 AM IST
ಎಚ್13.04-ಡಿಎನ್‌ಡಿ1: ಅಗ್ನಿಶಾಮಕ ಠಾಣೆ ನೂತನ ಕಟ್ಟಡದ ಚಿತ್ರ | Kannada Prabha

ಸಾರಾಂಶ

ನಗರದ ಅಂಬೇವಾಡಿ ಕೈಗಾರಿಕಾ ಪ್ರದೇಶದ ಹೊರ ಭಾಗದಲ್ಲಿ ನೂತನವಾಗಿ ನಿರ್ಮಾಗೊಂಡಿರುವ ಅಗ್ನಿಶಾಮಕ ಠಾಣೆಯ ಕಟ್ಟಡ ಕಾಮಗಾರಿ ಸುಮಾರು ಮೂರು ಕೋಟಿ ವೆಚ್ಚದಲ್ಲಿ ಪೂರ್ಣಗೊಂಡು ಉದ್ಘಾಟನೆಗಾಗಿ ಕಾಯುತ್ತಿದೆ.

ಸುಮಾರು ಮೂರು ಕೋಟಿ ವೆಚ್ಚದಲ್ಲಿ ೧೧ ತಿಂಗಳಲ್ಲಿ ಕಾಮಗಾರಿ ಪೂರ್ಣಗುರುಶಾಂತ ಜಡೆಹಿರೇಮಠಕನ್ನಡಪ್ರಭ ವಾರ್ತೆ ದಾಂಡೇಲಿ

ನಗರದ ಅಂಬೇವಾಡಿ ಕೈಗಾರಿಕಾ ಪ್ರದೇಶದ ಹೊರ ಭಾಗದಲ್ಲಿ ನೂತನವಾಗಿ ನಿರ್ಮಾಗೊಂಡಿರುವ ಅಗ್ನಿಶಾಮಕ ಠಾಣೆಯ ಕಟ್ಟಡ ಕಾಮಗಾರಿ ಸುಮಾರು ಮೂರು ಕೋಟಿ ವೆಚ್ಚದಲ್ಲಿ ಪೂರ್ಣಗೊಂಡು ಉದ್ಘಾಟನೆಗಾಗಿ ಕಾಯುತ್ತಿದೆ.

ಕಳೆದ ೨೦೨೫ರ ಫೆ.೧ರಂದು ಸ್ಥಳೀಯ ಶಾಸಕ ಆರ್.ವಿ. ದೇಶಪಾಂಡೆ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೆರಿಸಿದ್ದರು. ಸುಮಾರು ೧೧ ತಿಂಗಳಲ್ಲಿ ಈ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ದಾಂಡೇಲಿ ನಗರ ಉತ್ತರ ಕನ್ನಡ ಜಿಲ್ಲೆಯ ಪ್ರಪ್ರಥಮ ನಗರಸಭೆಯಾಗಿದೆ. ಜನದಟ್ಟಣೆಯು ಸಾಕಷ್ಟಿದೆ. ಆದರೆ ಇಲ್ಲಿ ಇವತ್ತಿನ ವರೆಗೂ ಒಂದು ಅಗ್ನಿಶಾಮಕ ಠಾಣೆ ಇರಲಿಲ್ಲ. ಅಗ್ನಿ ಅವಘಡಗಳು ಸಂಭವಿಸಿದಾಗ ದೂರದ ಹಳಿಯಾಳ, ಜೋಯಿಡಾ ತಾಲೂಕುಗಳಿಂದ ಅಗ್ನಿಶಾಮಕ ದಳದ ತಂಡ ಬಂದು ಅಗ್ನಿ ಅವಘಡ ಹತೋಟಿಗೆ ತರುವ ಸ್ಥಿತಿ ಇದೆ. ನಗರದಲ್ಲಿ ವೆಸ್ಟ್‌ಕೋಸ್ಟ್ ಕಾಗದ ಕಾರ್ಖಾನೆಯ ಅಗ್ನಿಶಾಮಕ ದಳವು ಕೂಡ ಸಾಕಷ್ಟು ಸಮಯಗಳಲ್ಲಿ ಅಗ್ನಿ ಅವಘಡಗಳನ್ನು ನಿಯಂತ್ರಿಸಲು ಸಹಾಯ ಮಾಡಿದೆ.

ಆದರೆ ಸರ್ಕಾರದ ಅಗ್ನಿಶಾಮಕ ಠಾಣೆ ಇಲ್ಲಿಯವರೆಗೆ ಇರಲಿಲ್ಲ. ಈ ಕುರಿತು ಸ್ಥಳೀಯರು ಮನವಿ ಮಾಡಿಕೊಂಡಿದ್ದರು. ನಗರಸಭೆಯ ಸಭೆಗಳಲ್ಲಿ ಈ ಕುರಿತು ಹಲವಾರು ಬಾರಿ ಚರ್ಚೆಗೆ ಬಂದು ಅಗ್ನಿಶಾಮಕ ಠಾಣೆ ಸ್ಥಾಪಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಬೆಂಕಿ ದುರಂತಗಳು ಸಂಭವಿಸಿದಾಗ ಅಗ್ನಿಶಾಮಕ ದಳ ಸಿಬ್ಬಂದಿ ಬರುವವರೆಗೆ ಬೆಂಕಿಯಿಂದ ಸಾಕಷ್ಟು ಹಾನಿ ಆಗಿರುತ್ತಿತ್ತು. ಕೊನೆಗೂ ಸರ್ಕಾರ ೨೦೨೪-೨೫ನೇ ಸಾಲಿನ ಅವಧಿಯಲ್ಲಿ ಅಗ್ನಿಶಾಮಕ ಠಾಣೆಯ ಕಟ್ಟಡ ಕಾಮಗಾರಿಗೆ ಅನುಮತಿಸಿದೆ. ಸದ್ಯ ಬೇಸಿಗೆಯ ಬಿಸಿಲು ಹೆಚ್ಚಾಗಿದ್ದು, ಯಾವ ಹೊತ್ತಿನಲ್ಲಾದರೂ ಬೆಂಕಿ ಬೀಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ದಾಂಡೇಲಿ ನಗರ ಕಾಡಿನಂಚಿನಲ್ಲಿದೆ. ಕಾಡಿನಲ್ಲಿ ಒಣಗಿದ ಎಲೆ, ಹುಲ್ಲು ಹೆಚ್ಚಾಗಿರುವುದರಿಂದ, ಇನ್ನು ಮನುಷ್ಯರು ಮಾಡುವ ತಪ್ಪಿನಿಂದ ಬೀಡಿ, ಸಿಗಾರ ಸೇದಿ ತುಂಡುಗಳನ್ನು ಎಸೆಯುವುದರಿಂದ, ಅರಣ್ಯದಲ್ಲಿ ಬೆಂಕಿ ಹಚ್ಚುವುದು. ಬೇಟೆ, ಕೃಷಿ ಉದ್ದೇಶಕ್ಕಾಗಿ ಬೆಂಕಿ ಹಚ್ಚುವುದರಿಂದ ಆಗುವ ಬೆಂಕಿ ಅನಾಹುತವನ್ನು ತಡೆಯಲು ಅಗ್ನಿಶಾಮಕ ದಳ ಠಾಣೆ ಉದ್ಘಾಟನೆಗೊಳ್ಳುವುದು ಅವಶ್ಯವಾಗಿದೆ. ಬೆಂಕಿಯನ್ನು ನಂದಿಸುವ ಕೆಲಸ ಮಾಡುವ ಅಗ್ನಿಶಾಮಕ ಠಾಣೆ ಕೇಂದ್ರದ ಉದ್ಘಾಟನೆ ಬೇಗ ಆಗಬೇಕೆಂದು ಸಾರ್ವಜನಿಕರ ಬೇಡಿಕೆಯಾಗಿದೆ.

ಬೇಕಾಗುವ ಸಿಬ್ಬಂದಿ ನೇಮಕವಾಗಿಲ್ಲ:

ಒಂದು ಅಗ್ನಿಶಾಮಕ ಠಾಣೆಗೆ ೧೨ ಫೈಯರ್ ಮ್ಯಾನ್, ಫೈರ್ ಸ್ಟೇಷನ್ ಆಪರೇಟರ್ ಸೇರಿದಂತೆ ಒಟ್ಟು ೨೫ಕ್ಕೂ ಹೆಚ್ಚು ಸಿಬ್ಬಂದಿ ಅವಶ್ಯಕತೆ ಇರುತ್ತದೆ. ಆದರೆ ದಾಂಡೇಲಿಯ ಅಗ್ನಿಶಾಮಕ ಠಾಣೆಗೆ ಇಲ್ಲಿಯವರೆಗೆ ಈ ಸಿಬ್ಬಂದಿ ನೇಮಕಾತಿ ನಡೆದಿಲ್ಲ. ಜೊತೆಗೆ ಠಾಣೆಯಲ್ಲಿ ಇರಬೇಕಾದ ಬೆಂಕಿ ನಂದಿಸುವ ವಾಹನವೂ ಕೂಡ ಮಂಜೂರಾಗಿ ಬಂದಿಲ್ಲ, ಇನ್ನು ಅಗ್ನಿಶಾಮಕ ಠಾಣೆಗೆ ಸಂಪರ್ಕಿಸುವ ರಸ್ತೆಯು ಆಗಬೇಕಿದ್ದು, ನೀರು ಹಾಗೂ ಬೆಳಕಿನ ವ್ಯವಸ್ಥೆಯು ಆಗಿಲ್ಲ. ಆದ್ದರಿಂದ ಅಗ್ನಿಶಾಮಕ ಠಾಣೆ ಉದ್ಘಾಟನೆ ಆಗಿಲ್ಲ.ತಾಲೂಕಿನಲ್ಲಿ ವ್ಯಾಪಾರಿ ಮಳಿಗೆಗಳು, ಹೊಲ ಗದ್ದೆಗಳಲ್ಲಿ ಬಣಿವೆ, ಮನೆ ಮುಂತಾದವುಗಳಲ್ಲಿ ಸಂಭವಿಸಬಹುದಾದ ಬೆಂಕಿ ಅವಘಡ ತಡೆಯಲು ಅಗ್ನಿಶಾಮಕ ದಳದಿಂದ ಮಾತ್ರ ಸಾಧ್ಯ. ಇತ್ತೀಚೆಗೆ ನಗರದ ಶ್ರೇಯಸ್ ಪೇಪರ್‌ ಮಿಲ್‌ನ ಆವರಣದಲ್ಲಿ ಅಗ್ನಿ ಅನಾಹುತ ಸಂಭವಿಸಿತ್ತು. ಇಂತಹ ಸಂದರ್ಭಗಳಲ್ಲಿ ಅಗ್ನಿಶಾಮಕ ದಳದ ಅವಶ್ಯಕತೆ ಬಹಳ ಇದೆ. ಅಗ್ನಿಶಾಮಕ ಠಾಣೆ ಶೀಘ್ರ ಉದ್ಘಾಟನೆಗೊಳ್ಳಲಿ ಎನ್ನುತ್ತಾರೆ ನಗರಸಭೆ ಮಾಜಿ ಸದಸ್ಯ ಡಿ.ಸ್ಯಾಮಸನ್.

ಶೀಘ್ರದಲ್ಲಿ ಅಗ್ನಿಶಾಮಕ ಠಾಣೆಗೆ ಸಿಬ್ಬಂದಿ ನೇಮಕ ಆಗಲಿದೆ. ಮೂಲಭೂತ ಸೌಕರ್ಯ ಒದಗಿಸುವ ಕೆಲಸ ನಡೆಯುತ್ತಿದೆ. ಆದಷ್ಟು ಬೇಗನೆ ಅಗ್ನಿಶಾಮಕ ಠಾಣೆಯನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸುನೀಲ ಕುಮಾರ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

2028ಕ್ಕೆ ಎನ್‌ಡಿಎಗೆ ಅಧಿಕಾರ ನಿಶ್ಚಿತ : ಅಶೋಕ್
ಗ್ಯಾರಂಟಿಗಳಿಂದ ಸಾಮಾಜಿಕ, ಆರ್ಥಿಕ ಶಕ್ತಿ: ಸಿದ್ದು