ತಾಳ್ಮೆ ಪರೀಕ್ಷಿಸಬೇಡಿ, ಜನಾಕ್ರೋಶ ಭುಗಿಲೆದ್ದೀತು..!

KannadaprabhaNewsNetwork | Published : Jun 29, 2025 1:33 AM

Don't be impatient, test it, public anger may flare up..!

-ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶ

- ಕೆಮಿಕಲ್‌, ತ್ಯಾಜ್ಯ ಕಂಪನಿಗಳಿಂದ ವಿಷಗಾಳಿ, ದುರ್ನಾತದ ಎಫೆಕ್ಟ್

- ಹತ್ತಾರು ಹಳ್ಳಿಗಳ ಜನರಿಗೆ ಆರೋಗ್ಯ ಸಮಸ್ಯೆ : ಜನಾಕ್ರೋಶ

- ಕನ್ನಡಪ್ರಭ ಸರಣಿ ಮುಂದುವರೆದ ಭಾಗ : 82ಆನಂದ ಎಂ. ಸೌದಿ

ಕನ್ನಡಪ್ರಭ ವಾರ್ತೆ ಯಾದಗಿರಿ

ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್‌ - ತ್ಯಾಜ್ಯ ಕಂಪನಿಗಳಿಂದ ಹೊರಹೊಮ್ಮುತ್ತಿರುವ ವಿಷಗಾಳಿ ಹಾಗೂ ದುರ್ನಾತದಿಂದ ಈ ಭಾಗದ ಹತ್ತಾರು ಹಳ್ಳಿಗರ ಮೇಲಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ‘ಇಂಡಸ್ಟ್ರಿಯಲ್‌ ಫ್ರೆಂಡ್ಲೀ’ ಸರ್ಕಾರ ಜನರ ಸಮಾಧಿಗಳ ಮೇಲೆ ಕೈಗಾರಿಕೆಗಳಿಗೆ ಅನುಮತಿ ನೀಡುವ ಪ್ರಸ್ತಾವನೆ ಕೈಬಿಡಬೇಕು ಎಂದು ಆಗ್ರಹಿಸಿರುವ ನೊಂದ ಜನರು, ಸುಮ್ಮನಿದ್ದಾರೆಂದು ಜನರ ತಾಳ್ಮೆ ಪರೀಕ್ಷಿಸಬೇಡಿ, ಮುಂದೊಂದು ದಿನ ಜನಾಕ್ರೋಶ ಭುಗಿಲೆದ್ದರೆ ಸರ್ಕಾರ ತಲೆದಂಡ ತೆರಬೇಕಾದೀತು ಎಂಬ ಎಚ್ಚರದ ಮಾತುಗಳು ಕೇಳೀ ಬರುತ್ತಿವೆ.

ಷರತ್ತುಗಳ ಉಲ್ಲಂಘಿಸಿರುವ ಕೆಲವು ಕಂಪನಿಗಳು, ಕಳ್ಳಾಟದಲ್ಲಿ ತೊಡಗಿವೆ. ಮೇಲಧಿಕಾರಿಗಳ ತಪಾಸಣೆಗೆ ಬರುವ ವೇಳೆ ಅಥವಾ ಗಣ್ಯರ ಭೇಟಿ ಸಂದರ್ಭಗಳಲ್ಲಿ ಅಂತಹುದ್ದೇನೂ ನಡೆದಿಲ್ಲ, ಎಲ್ಲವೂ ಕಾನೂನೂ ಪ್ರಕಾರವೇ ನಡೆಸಿರುವುದಾಗಿ ಸಮಜಾಯಿಷಿ ನೀಡುತ್ತವೆ.

ನಂತರದಲ್ಲಿ ಎಂದಿನಂತೆ ವಿಷಗಾಳಿ ಹಾಗೂ ದುರ್ನಾತಕ್ಕೆ ಕಾರಣವಾಗುತ್ತದೆ ಎಂಬ ದೂರು ಇಲ್ಲಿನವರದ್ದು. ಈಗಾಗಲೇ, ಒಂದು ಕಂಪನಿ ಸೀಝ್‌ ಮಾಡಿರುವ ಜಿಲ್ಲಾಡಳಿತ, ಷರತ್ತುಗಳ ಉಲ್ಲಂಘಿಸಿದ ಇನ್ನುಳಿದ ಕೆಲವು ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ. ಕಂಪನಿಯೊಂದಕ್ಕೆ ಬೀಗಮುದ್ರೆ ಜಡಿದ ನಂತರ, ಇನ್ನುಳಿದವುಗಳಿಗೂ ಇದೇ ಅನ್ವಯಿಸಬೇಕಿತ್ತಾದರೂ, ಪ್ರಭಾವಿಗಳ ಒತ್ತಡಕ್ಕೆ ಅಧಿಕಾರಿಗಳು ಮಣಿದಂತಿದ್ದಾರೆ ಎಂಬ ಆರೋಪಗಳು ಮೊನ್ನೆಯಷ್ಟೇ ಇಲ್ಲಿಗೆ ಭೇಟಿ ನೀಡಿದ್ದ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರೆದುರು ಕೇಳಿಬಂದಿದ್ದವು.

-

ಕೋಟ್‌-1 : ಈ ಪ್ರದೇಶದಲ್ಲಿ ಸ್ಥಾಪಿಸಿದ ರಾಸಾಯನಿಕ ಕಂಪನಿಗಳು ಬಿಡುವ ವಿಷಗಾಳಿಯಿಂದಾಗಿ ಗಾಳಿಯ ಗುಣಮಟ್ಟದ ಸೂಚ್ಯಂಕ ಅತ್ಯಂತ ಕೆಳಮಟ್ಟದಲ್ಲಿದೆ. ಇದರಿಂದ ಈ ಪ್ರದೇಶದಲ್ಲಿ ಜನರು ವಾಸಿಸುವುದಕ್ಕೆ ಪೂರಕವಾಗಿರುವುದಿಲ್ಲ. ದ್ರವರೂಪದ ತ್ಯಾಜವು ಹಳ್ಳ-ಕೊಳ್ಳಗಳಿಗೆ ಬಿಡುತ್ತಿರುವುದರಿಂದ ಜಲಚರಗಳಿಗೆ, ಪ್ರಾಣಿ-ಪಕ್ಷಿಗಳಿಗೆ ಮತ್ತು ಗ್ರಾಮೀಣ ಜನರು ಕುಡಿಯುವ ನೀರಿಗೆ ವಿಷ ಬಿದ್ದಂತಾಗಿದೆ. ಈ ಬಗ್ಗೆ ಗ್ರಾಮ ಸಭೆಯಲ್ಲಿ ನಮ್ಮ ಸದಸ್ಯರು ಮತ್ತು ಗ್ರಾಮಸ್ಥರು ಸೇರಿಕೊಂಡು ಈ ಕಾರ್ಖಾನೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಇದನ್ನು ಸರ್ಕಾರ ಮತ್ತು ಜಿಲ್ಲಾಧಿಕಾರಿಗಳು ಗಂಬಿರವಾಗಿ ತೇಗೆದುಕೊಳ್ಳಬೇಕು ಇಲ್ಲದಿದ್ದರೆ ಈ ಭಾಗದ ಮಹಿಳೆಯರೆಲ್ಲರೂ ಸೇರಿಕೊಂಡ ವಿನೂತನವಾದ ಪ್ರತಿಭಟನೆಗೆ ಮಾಡುತ್ತೇವೆ. - ಲಕ್ಷ್ಮೀ ಬಸವರಾಜ ಕೋತ್ತಪಲ್ಲಿ, ಸದಸ್ಯರು, ಗ್ರಾ.ಪಂ. ಬಾಡಿಯಾಳ (28ವೈಡಿಆರ್‌14)

---

ಕೋಟ್‌-2 : ಕಡೇಚೂರು-ಬಾಡಿಯಾಳ ಕೈಗಾರಿಕೆಗಳಿಂದ ಇಲ್ಲಿನ ಜನರು ಅನೇಕ ಸಮಸ್ಯೆಗಳನ್ನು ಎದರಿಸುತ್ತಿದ್ದೇವೆ. ಜನಪ್ರತಿನಿಧಿಗಳು, ಅಧಿಕಾರಿಗಳು ಆಗಮಿಸಿ ಭೇಟಿ ನೀಡಿದರೆ ಸಾಲದು, ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಕಂಪನಿಗಳನ್ನು ಬಂದ್ ಮಾಡಬೇಕಾದ ಕಾರ್ಯಕ್ಕೆ ಮುಂದಾಗಬೇಕು. ಈಗಾಗಲೇ ಈ ಕಂಪನಿಗಳ ಬಂದ್ ಮಾಡಿ, ಕಠಿಣ ಕಾನೂನು ಕ್ರಮ ಕೈಗೊಳ್ಳಿ ಎಂದು ನಾಲ್ಕು ಗ್ರಾಮ ಪಂಚಾಯಿತಿ ಸದಸ್ಯರು ಗ್ರಾಮ ಸಭೆಯಲ್ಲಿ ಠರಾವು ಪಾಸ್ ಮಾಡಿದ್ದಾರೆ. ಈಗಾಲಾದರು ಎಚ್ಚೆತ್ತುಕೊಂಡು ಈ ಭಾಗದ ಜನರ ಆರೋಗ್ಯವನ್ನು ಕಾಪಾಡುವ ಕೆಲಸವಾಗಲಿ, ಅದನ್ನು ಬಿಟ್ಟು ಇಲ್ಲಿನ ಜನರ ಜನರ ತಾಳ್ಮೆಯನ್ನು ಪರೀಕ್ಷಿಸಬೇಡಿ, ಮುಂದೊಂದು ದಿನ ಇದು ಬಹುದೊಡ್ಡ ಜನಾಕ್ರೋಶಕ್ಕೆ ವೇದಿಕೆಯಾಗುತ್ತದೆ.

- ಮಲ್ಲಿಕಾರ್ಜುನ ಜಲ್ಲಪ್ಪನೋರ್, ಕನ್ನಡಪರ ಹೋರಾಟಗಾರ ಯಾದಗಿರಿ. (28ವೈಡಿಆರ್‌15)

-

28ವೈಡಿಆರ್‌13 : ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ನೋಟ.