ಕ್ಯಾನ್ಸರ್ ರೋಗದ ಬಗ್ಗೆ ಭಯ ಸಲ್ಲ, ಜಾಗೃತಿ ಇರಲಿ: ವೈದ್ಯ ಅಬ್ದುಲ್ ಖಾದರ್

KannadaprabhaNewsNetwork | Published : Feb 5, 2025 12:32 AM

ಸಾರಾಂಶ

ತಾಲೂಕಿನ ಮಲೆಬೆನ್ನೂರಿನ ಸಮುದಾಯ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಮಂಗಳವಾರ ವಿಶ್ವ ಕ್ಯಾನ್ಸರ್ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬೀಡಿ ಸಿಗರೇಟ್ ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಇದು ಕ್ಯಾನ್ಸರ್ ಬರಲು ಮುಖ್ಯ ಕಾರಣ ಎಂದರು.

ವಿಶ್ವ ಕ್ಯಾನ್ಸರ್‌ ದಿನಾಚರಣೆ । ಸಮುದಾಯ ಆರೋಗ್ಯ ಕೇಂದ್ರದವರೆಗೆ ಜಾಥಾ

ಕನ್ನಡಪ್ರಭ ವಾರ್ತೆ ಹರಿಹರ

ಕ್ಯಾನ್ಸರ್ ಬಗ್ಗೆ ಭಯ ಬೇಡ ಜಾಗೃತಿ ಇರಲಿ ಎಂದು ವೈದ್ಯ ಅಬ್ದುಲ್ ಖಾದರ್ ತಿಳಿಸಿದರು.

ತಾಲೂಕಿನ ಮಲೆಬೆನ್ನೂರಿನ ಸಮುದಾಯ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಮಂಗಳವಾರ ವಿಶ್ವ ಕ್ಯಾನ್ಸರ್ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬೀಡಿ ಸಿಗರೇಟ್ ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಇದು ಕ್ಯಾನ್ಸರ್ ಬರಲು ಮುಖ್ಯ ಕಾರಣ ಎಂದರು.

ಸಾಂಕ್ರಾಮಿಕ ರೋಗಗಳ ಬಗ್ಗೆ ತಪಾಸಣೆ ಮಾಡಲು ಆಯುಷ್ಮಾನ್‌ ಆರೋಗ್ಯ ಮಂದಿರದಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಇವರು ಪ್ರಾರಂಭಿಕ ಹಂತದಲ್ಲಿ ಇರುವ ಬಿಪಿ, ಶುಗರ್, ರಕ್ತದ ಒತ್ತಡ ಹಾಗೂ ಕ್ಯಾನ್ಸರ್‌ನಂಥಹ ಮಾರಕ ರೋಗಗಳನ್ನು ಪ್ರಾರಂಭಿಕ ಹಂತದಲ್ಲಿ ಪತ್ತೆ ಮಾಡುತ್ತಾರೆ. ತಕ್ಷಣ ಸೂಕ್ತ ಚಿಕಿತ್ಸೆ ಪಡೆದಲ್ಲಿ ರೋಗ ನಿವಾರಣೆ ಮಾಡಿಕೊಳ್ಳಬಹುದು ಎಂದರು.

ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಲಕ್ಷ್ಮೀದೇವಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನಲ್ಲಿ ಮೃತ ಪಡುವವರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಮುಖ್ಯ ಕಾರಣ ತಂಬಾಕು ಸೇವನೆ. ವಿಮಲ್, ಸ್ಟಾರ್, ಸೂಪರ್, ಆರ್‌ಎಂಡಿ. ಮುಂತಾದವುಗಳ ಜತೆಗೆ ತಂಬಾಕು ಹೊಂದಿರುವ ಪಾಕೆಟ್ ಅನ್ನು ಮಿಶ್ರಣ ಮಾಡಿ ತಿನ್ನುತ್ತಿರುವುದು. ಮಧು. ಚೈನಿ ಕೈನಿ ತಂಬಾಕುಗಳನ್ನು ತುಟಿಯ ಮುಂಭಾಗದಲ್ಲಿ ಇಟ್ಟುಕೊಳ್ಳುವುದು ಕ್ಯಾನ್ಸರ್‌ಗೆ ಮುಖ್ಯ ಕಾರಣವಾಗಿವೆ ಎಂದರು.

ಇದಕ್ಕೂ ಮೊದಲು ಸರ್ಕಾರಿ ಬಸ್ ನಿಲ್ದಾಣದಿಂದ ಸಮುದಾಯ ಆರೋಗ್ಯ ಕೇಂದ್ರದವರೆಗೆ ಜಾಥಾ ಹಮ್ಮಿಕೊಳ್ಳಲಾಗಿತ್ತು.

ನಾಡಕಚೇರಿ ಉಪ ತಹಸೀಲ್ದಾರ್ ರವಿಕುಮಾರ್, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಉಮ್ಮಣ್ಣ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ನಾಗರಾಜ್, ಪತ್ರಕರ್ತ ಪ್ರಕಾಶ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ವಿಮಲಶೀಲಾ, ಯಾಸ್ಮಿನ್ ಬಾನು, ಪುರಸಭೆಯ ಆರೋಗ್ಯ ನಿರೀಕ್ಷಣಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಗ್ರಾಮಸ್ಥರು ಇದ್ದರು.

Share this article