ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ಹಿರಿಯ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಹಿರಿಯ ವಿದ್ಯಾರ್ಥಿಗಳ ‘ಪವರ್ ಮೀಟ್’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನೆಕ್ಟಿಂಗ್ ಡಾಟ್ಸ್ ಎಂಬ ಎನ್ಜಿಒ ಮೂಲಕ ನೂರಾರು ಕುಟುಂಬಗಳಿಗೆ ನಿರಂತರ ಶುದ್ಧ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಜನರ ಸಮಸ್ಯೆ ಬಗ್ಗೆ ಸ್ಥಳೀಯ ಆಡಳಿತದ ಗಮನಕ್ಕೆ ತಂದಾಗ, ಎಲ್ಲವೂ ದಾಖಲೆಗಳಲ್ಲಿ ಸರಿಯಾಗಿದೆ ಎಂಬ ಉತ್ತರಗಳು ಬಂದವು. ಆದರೆ ವಾಸ್ತವದಲ್ಲಿ ಏನೂ ಸರಿಯಾಗಿರಲಿಲ್ಲ. ನೀತಿಗಳು ಉತ್ತಮವಾಗಿದ್ದರೂ, ಅವುಗಳ ಅನುಷ್ಠಾನದಲ್ಲಿ ಕೊರತೆ ಇಂದಿನ ಸಮಾಜದಲ್ಲಿ ಎದ್ದು ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಸಮಾಜದತ್ತ ನಮ್ಮ ಬದ್ಧತೆಯನ್ನು ತೋರಿಸಬೇಕಿದೆ ಎಂದು ಹೇಳಿದರು.
ನವದೆಹಲಿಯ ಇನ್ನೊಗ್ರೆಸ್ ಕಂಪನಿ ಸ್ಥಾಪಕ ಸುಮಂತ್ ಪರಿಮಳ್ ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿ ಅಧ್ಯಯನಕ್ಕೆ ಸೀಮಿತವಾಗದೆ, ನಮ್ಮದೇ ಕನಸುಗಳನ್ನು ನಿರ್ಮಿಸಿಕೊಳ್ಳಿ. ಇಂದಿನ ಜಾಗತಿಕ ಪರಿಸ್ಥಿತಿಯಲ್ಲಿ ದೊಡ್ಡ ಬದಲಾವಣೆಗಳು ನಡೆಯುತ್ತಿವೆ. ಭಾರತವು ಜಾಗತಿಕ ವೇದಿಕೆಯಲ್ಲಿ ಮಹತ್ವದ ಪಾತ್ರವಹಿಸುತ್ತಿದೆ. ನಮ್ಮ ಬುದ್ಧಿಶಕ್ತಿಯು ರೋಬೋಟಿಕ್ಸ್ ಮತ್ತು ಎಐ ವ್ಯವಸ್ಥೆಗಳೊಂದಿಗೆ ಒಂದಾಗುತ್ತಿದೆ. ಅವುಗಳು ನಮ್ಮ ಪರವಾಗಿ ಕೆಲಸ ಮಾಡುವ ಮಟ್ಟಕ್ಕೆ ತಂತ್ರಜ್ಞಾನ ಬೆಳೆಯುತ್ತಿದೆ. ಎಐ ಎಂಬುದು ಬುದ್ದಿ ಮತ್ತು ವಿದ್ಯುತ್ ಶಕ್ತಿಯ ಮೇಲೆ ಅವಲಂಬಿತವಾಗಿದೆ. ವಾಸ್ತವದಲ್ಲಿ ಕೇವಲ ಕಂಪ್ಯೂಟ್ ಪವರ್ ಬಗ್ಗೆ ಮಾತ್ರವಲ್ಲ, ನಿಜವಾದ ವಿದ್ಯುತ್ ಶಕ್ತಿಯನ್ನು ಎಲ್ಲಿಂದ ಪಡೆಯುವುದು ಎಂಬ ಬಗ್ಗೆ ಚಿಂತಿಸಬೇಕಿದೆ ಎಂದರು.ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್, ಎನ್ಇಎಸ್ ನಿರ್ದೇಶಕ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಪ್ರಾಂಶುಪಾಲ ಡಾ.ವೈ.ವಿಜಯಕುಮಾರ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಎಚ್.ಬಿ.ಸುರೇಶ್, ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಬಸಪ್ಪಾಜಿ ಹಾಜರಿದ್ದರು.
ಪ್ರತಿಷ್ಠಿತ ಉದ್ಯಮಿಗಳಾಗಿ, ಕಲಾವಿದರಾಗಿ, ಅಭಿಯಂತರರಾಗಿ, ಮೆಸ್ಕಾಂ ಬೆಸ್ಕಾಂ ಸೇರಿದಂತೆ, ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಉನ್ನತ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವ ನೂರಾರು ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದ ಹಿರಿಯ ವಿದ್ಯಾರ್ಥಿಗಳು ತಮ್ಮ ಯಶಸ್ಸಿನ ಹಾದಿಯ ದುರ್ಗಮತೆಯನ್ನು ಕಿರಿಯ ವಿದ್ಯಾರ್ಥಿಗಳ ಮುಂದೆ ಹಂಚಿಕೊಂಡರು.