ಕನ್ನಡಪ್ರಭ ವಾರ್ತೆ ಹಳೇಬೀಡು
ಜ್ಞಾನವನ್ನು ಬೆಳೆಸಬೇಕು, ಜ್ಞಾನದ ಜೊತೆಯಲ್ಲಿ ತಮ್ಮ ಸಾಧನೆಗೆ ಕಾರಣರಾದ ಗುರುಗಳನ್ನು ಮರೆಯಬಾರದು ಎಂದು ಪುಷ್ಪಗಿರಿ ಮಹಾಸಂಸ್ಥಾನದಮಠದ ಪರಮ ಪೂಜ್ಯ ಶ್ರೀ ಸೋಮಶೇಖರ ಶಿವಾಚಾರ್ಯರು ತಿಳಿಸಿದರು.ಇಲ್ಲಿಗೆ ಸಮೀಪದ ಪುಷ್ಪಗಿರಿ ಮಹಾಸಂಸ್ಥಾನಮಠದ ಆವರಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, 2024- ೨೫ಸಾಲಿನ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ, ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ, ಜಗತ್ತಿನಲ್ಲಿ ಅದ್ಭುತ ಸ್ಥಾನಮಾನ ಮಾನವನ ಜನ್ಮಕ್ಕಿದೆ, ೮೬ ಲಕ್ಷ ಜೀವಿಗಳಲ್ಲಿ ಮನುಷ್ಯನ ಜನ್ಮ ಅದೃಷ್ಟದ ಜನ್ಮ. ಮನುಷ್ಯ ಮತ್ತು ಪ್ರಾಣಿಗೆ ಇರುವ ವ್ಯತ್ಯಾಸವೆಂದರೆ ಯಾರು ಮಾನವೀಯತೆ ಹೊಂದಿರುತ್ತಾರೋ ಅವರು ಮನುಷ್ಯರಾಗಿರುತ್ತಾರೆ, ಇಲ್ಲವಾದರೆ ಅವರು ಕ್ರೂರ ಪ್ರಾಣಿಯಂತಾಗಿರುತ್ತಾರೆ. ಶ್ರೀ ಪುಷ್ಪಗಿರಿ ಪರಿಸರದ ಪುಣ್ಯ ಕ್ಷೇತ್ರದಲ್ಲಿ ನಿಮ್ಮ ಎಂಟು ದಿನ ಪ್ರಯಣದಲ್ಲಿ ನಿಮ್ಮ ಜೀವನಕ್ಕೆ ಸಾಧನೆ, ಬದಲಾವಣೆ, ಮಾನಸಿಕ ಒತ್ತಡ, ಧಾರ್ಮಿಕತೆಯನ್ನು ಅಳವಡಿಸಿಕೊಂಡರೆ ಜೀವನದಲ್ಲಿ ಮುಂದೆ ಬರುತ್ತೀರಿ. ಬಿತ್ತನೆ ಬೀಜಕ್ಕೆ ಮಣ್ಣು ಅಗತ್ಯ, ಮಕ್ಕಳ ಜೀವನಕ್ಕೆ ಗುರುಗಳ ಅಗತ್ಯವೂ ಅಷ್ಟೇ ಇದೆ, ಗುರಿ ಹಿಂದೆ ಗುರು ಇಲ್ಲವಾದರೆ ಗುರಿ ತಲುಪಲು ಸಾಧ್ಯವಿಲ್ಲ. ಆತ್ಮ ಶುದ್ಧಿಯಾದರೆ ದೇಹ ಶುದ್ಧಿಯಾಗುವುದು, ಜೀವನದಲ್ಲಿ ಒಳ್ಳೆಯ ಸಂಸ್ಕಾರ, ಸಂಸ್ಕೃತಿಯನ್ನು ಬೆಳೆಸಿಕೊಂಡರೆ ನಿಮ್ಮ ಜೀವನ ಅತ್ಯುತ್ತಮವಾಗುತ್ತದೆ ಎಂದು ಶುಭ ನುಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ ಹಳೇಬೀಡು ರಘುನಾಥ್ ಮಾತನಾಡುತ್ತಾ, ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರಥಮ ಹಂತವಾಗಿ ನಾಯಕತ್ವದ ವಿಚಾರವನ್ನು ತಿಳಿಸಿ, ಅದರ ಜೊತೆಗೆ ಸಮಯ ಪಾಲನೆ, ಶಿಸ್ತು, ಸಾಧನೆ ಬಗ್ಗೆ ಅರ್ಥ ಮಾಡಿಕೊಳ್ಳಬೇಕು. ನಿಮ್ಮ ಜೀವನದಲ್ಲಿ ಎಸ್.ಎಸ್.ಎಲ್.ಸಿ-ಪಿ.ಯು.ಸಿ. ಎರಡು ಹಂತಗಳನ್ನು ಮುಗಿಸಿ ಡಿಗ್ರಿ ಓದುತ್ತಿದ್ದೀರಿ. ನಿಮಗೆ ಓದುವ ಹವ್ಯಾಸದ ಬಗ್ಗೆ ಪಠ್ಯಪುಸ್ತಕದ ಬೋಧನೆ ಕ್ರಮ ಬಂದಿರುತ್ತದೆ. ಹಾಗಾಗಿ ಈ ಕ್ಯಾಂಪಿನಲ್ಲಿ ನೀವು ಆರೋಗ್ಯ, ಕಾನೂನು, ಜೀವನದ ಬಗ್ಗೆ ಕೂಲಂಕುಶವಾಗಿ ಅರ್ಥ ಮಾಡಿಕೊಂಡು ಜೀವನದಲ್ಲಿ ಮುಂದೆ ಬನ್ನಿ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಪ್ರಾಂಶುಪಾಲ ಡಾ.ಶ್ರೀನಿವಾಸ್ ಮಾತನಾಡುತ್ತ, ನಮ್ಮ ಕಾಲೇಜು ನ್ಯಾಕ್ ಕಮಿಟಿಯಿಂದ (ಬಿ) ಶ್ರೇಣಿ ಮಾನ್ಯತೆ ಪಡೆದ ಕಾಲೇಜು. ಭಾರತಕ್ಕಾಗಿ ಯುವಜನತೆ ಮತ್ತು ಯುವ ಜನತೆಗಾಗಿ ಡಿಜಿಟಲ್ ಸಾಕ್ಷರತಾ ಎಂಬ ಶಿರೋನಾಮೆಯಡಿಯಲ್ಲಿ ಎನ್.ಎಸ್.ಎಸ್ ಕ್ಯಾಂಪ್ ಹಮ್ಮಿಕೊಂಡಿದ್ದೇವೆ. ಇದರ ಹೆಚ್ಚಿನ ಸಹಕಾರ ಪುಷ್ಪಗಿರಿ ಶ್ರೀಗಳು ಹಾಗೂ ನಮ್ಮ ಕಾಲೇಜಿನ ಅಭಿವೃದ್ದಿ ಸಮಿತಿ ಸದಸ್ಯರು, ಗೋಣಿ ಸೋಮನಹಳ್ಳಿ ಮತ್ತು ಹಳೇಬೀಡು ಗ್ರಾಮ ಪಂಚಾಯಿತಿ. ಈ ಕ್ಷೇತ್ರದ ವಾತಾವರಣದಲ್ಲಿ ಮಕ್ಕಳಿಗೆ ೮ ದಿನ ವಿಶೇಷ ಉಪನ್ಯಾಸ, ಕಾನೂನು, ಆರೋಗ್ಯ, ಶಿಸ್ತು -ಸಮಯ ಪಾಲನೆ ಬಗ್ಗೆ ವಿಶೇಷವಾಗಿ ಕಾರ್ಯಕ್ರಮ ನಡೆಸಿಕೊಟ್ಟಿದಾರೆ. ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.ವೇದಿಕೆಯ ಮೇಲೆ ಕಾಲೇಜು ಕಟ್ಟಡದ ಭೂ ದಾನಿ ಸಿ.ಆರ್.ಲಿಂಗಪ್ಪ, ಪರಮೇಶ್, ಈಶ್ವರ್, ರಂಜಿತ್,ಶಿಬಿರಾಧಿಕಾರಿ ಶಂಕರಪ್ಪ, ಚಂದ್ರಶೇಖರ್, ಮನೋಜ್, ಡಿಂಪಲ್ ,ದಿವಾಕರ್ ಶಿವರಾಜು, ತಮ್ಮನಾಯ್ಕ್, ರಾಘವೇಂದ್ರ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.