ಮೂಢನಂಬಿಕೆ, ಧರ್ಮದ ಬೆನ್ನು ಹತ್ತಬೇಡಿ

KannadaprabhaNewsNetwork | Published : Jan 23, 2025 12:45 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ವಿದ್ಯಾರ್ಥಿಗಳು ಜೀವನದಲ್ಲಿ ಮೂಢನಂಬಿಕೆ ಹಾಗೂ ಧರ್ಮದ ಬೆನ್ನು ಹತ್ತಬಾರದು. ಪುಸ್ತಕವೇ ವಿದ್ಯಾರ್ಥಿಗಳ ಧರ್ಮ. ಆತ್ಮವಿಶ್ವಾಸವೇ ವಿದ್ಯಾರ್ಥಿಗಳ ನಂಬಿಕೆ ಆಗಿರಬೇಕು ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ವಿದ್ಯಾರ್ಥಿಗಳು ಜೀವನದಲ್ಲಿ ಮೂಢನಂಬಿಕೆ ಹಾಗೂ ಧರ್ಮದ ಬೆನ್ನು ಹತ್ತಬಾರದು. ಪುಸ್ತಕವೇ ವಿದ್ಯಾರ್ಥಿಗಳ ಧರ್ಮ. ಆತ್ಮವಿಶ್ವಾಸವೇ ವಿದ್ಯಾರ್ಥಿಗಳ ನಂಬಿಕೆ ಆಗಿರಬೇಕು ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.

ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಚೇತನಾ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಾರ್ಷಿಕೋತ್ಸವ, ಮತ್ತು ಚೇತನಾ ಉತ್ಸವ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಶುಭ ಹಾರೈಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಂದೆ-ತಾಯಿ, ಶಿಕ್ಷಕರೆ, ವಿದ್ಯಾರ್ಥಿಗಳ ಪಾಲಿನ ನಿಜವಾದ ಹೀರೋಗಳು. ಅವರ ಮಾತನ್ನು ವಿದ್ಯಾರ್ಥಿಗಳು ಪಾಲಿಸಿದರೆ ಜೀವನ ಬಂಗಾರವಾಗುತ್ತದೆ. ಪ್ರತಿಯೊಬ್ಬರಲ್ಲೂ ಸಾಧಿಸುವ ಛಲ ಇರಬೇಕು. ನಮ್ಮ ಸಾಧನೆ ಇತರರಿಗೆ ಪ್ರೇರಣೆಯಾಗಬೇಕು ಎಂದರು.

ಮುಖ್ಯೋಪಾಧ್ಯಾಯ ಪ್ರೊ.ಎ.ಎಚ್.ಕೊಳಮಲಿ ಮಾತನಾಡಿ, ಜ್ಞಾನ ಒಂದೇ ಜಗತ್ತನ್ನು ಆಳುವ ಪ್ರಬಲ ಶಕ್ತಿ, ವಿದ್ಯಾರ್ಥಿಗಳು ಉತ್ತಮ ಜ್ಞಾನಿಗಳಾಗಬೇಕಾದರೆ ಸತತ ಅಧ್ಯಯನ ಅಗತ್ಯ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಚೇತನಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ರಾಜಶ್ರೀ ಜುಗತಿ ಮಾತನಾಡಿ, ನಾವು ಜನಿಸಿದ್ದೇ ಮಹತ್ತರ ಸಾಧನೆ ಮಾಡುವುದಕ್ಕೆ. ಸಾಧಿಸಿಯೇ ಸಿದ್ಧ ಎಂಬ ಛಲ ನಿಮ್ಮಲ್ಲಿದ್ದರೆ, ಜಗತ್ತಿನ ಅದ್ಭುತ ಸಾಧಕರಾಗುತ್ತೀರಿ. ಓದು ಒಂದೇ ಸಾಲದು, ಓದಿನ ಜೊತೆಗೆ ಒಳ್ಳೆಯ ಆಚಾರ ವಿಚಾರವನ್ನು ರೂಢಿಸಿಕೊಳ್ಳುವಂತೆ ತಿಳಿಸಿದರು.

ಆರ್‌.ಎಸ್.ಪಟ್ಟಣಶೆಟ್ಟಿ ಮಾತನಾಡಿ, ಮಕ್ಕಳು ಕೈಯಲ್ಲಿ ಮೊಬೈಲ್ ಹಿಡಿಯುವ ಬದಲು ಪುಸ್ತಕ ಹಿಡಿದರೆ ವಿದ್ಯಾರ್ಥಿಗಳ ಬಾಳೇ ಬಂಗಾರ. ವಿದ್ಯಾರ್ಥಿಗಳು ಹೆಚ್ಚೆಚ್ಚು ಓದಬೇಕೆಂದು ಸಲಹೆ ನೀಡಿದರು.2023-24 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರ್‍ಯಾಂಕ್‌ ಪಡೆದ ವಿದ್ಯಾರ್ಥಿಗಳಿಗೆ ಚೇತನಾ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ದಿ.ಡಾ.ದಯಾನಂದ ಜುಗತಿ ಅವರ ಸ್ಮರಣಾರ್ಥ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. ಉಪಾಧ್ಯಕ್ಷ ರೋಹಿತ ಜುಗತಿ, ನಿರ್ದೇಶಕ ಡಾ.ನಾಗರಾಜ ಹೇರಲಗಿ, ಸ್ನೇಹಾ ಜುಗತಿ, ಸಹಾಯಕ ಆಡಳಿತ ಅಧಿಕಾರಿ ಪ್ರಮೋದ ಕುಲಕರ್ಣಿ, ಸಿ.ಎಸ್.ವಾಲಿ, ಸಾಗರ ಕುಲಕರ್ಣಿ, ಹೇಮಾ ಪಾಟ್ನೆ ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು. ಲಕ್ಷ್ಮಿ ಹೊಸಮನಿ, ಪ್ರಫುಲ್ ಕನ್ನಾಳ ನಿರೂಪಿಸಿದರು.

Share this article