ಶಿರಹಟ್ಟಿ: ವಿದ್ಯಾರ್ಥಿಗಳು ಮೊಬೈಲ್, ಕಂಪ್ಯೂಟರ್ಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಕಾಲ ಕಳೆಯುತ್ತಿದ್ದಾರೆ. ಇಂಟರ್ನೆಟ್ ಮಾಯಾಜಾಲಕ್ಕೆ ಮಾರುಹೋಗದೇ ಓದಿನ ಕಡೆಗೆ ಹೆಚ್ಚಿನ ಗಮನ ನೀಡಬೇಕು ಎಂದು ಶಾಸಕ ಡಾ. ಚಂದ್ರು ಕೆ. ಲಮಾಣಿ ತಿಳಿಸಿದರು.ತಾಲೂಕಿನ ಬೆಳ್ಳಟ್ಟಿ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ನಡೆದ ಸೆರೆಂಟಿಕಾ ಸಂಸ್ಥೆ ಪ್ರಾಯೋಜಿತ ೫೦೦ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ಡೆಸ್ಕ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಇತ್ತೀಚಿನ ದಿನಗಳಲ್ಲಿ ಅಂತರ್ಜಾಲದಲ್ಲಿ ಹೆಚ್ಚಾಗಿ ಮಗ್ನರಾಗುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ಕ್ಷೀಣಿಸುತ್ತಿದೆ. ಅಂತರ್ಜಾಲ ಮಾಯಾಲೋಕವನ್ನೇ ಸೃಷ್ಟಿ ಮಾಡಿದೆ. ವಿದ್ಯಾರ್ಥಿಗಳನ್ನು ಓದಿನಿಂದ ವಿಮುಖರಾಗುವಂತೆ ಮಾಡುತ್ತಿದ್ದು, ಎಚ್ಚರಿಕೆ ವಹಿಸಬೇಕು ಎಂದರು.ಇಂದಿನ ದುಬಾರಿ ಕಾಲದಲ್ಲಿ ಆರ್ಥಿಕ ಸಂಕಷ್ಟದಿಂದ ಸಾಕಷ್ಟು ಮಕ್ಕಳು ವಿದ್ಯಾರ್ಜನೆಯಿಂದ ವಂಚಿತರಾಗುತ್ತಿರುವ ಸಂದರ್ಭದಲ್ಲಿ ಸೆರೆಂಟಿಕಾ ಸಂಸ್ಥೆ ವತಿಯಿಂದ ವಿಶೇಷವಾಗಿ ಶಾಲಾ ಮಕ್ಕಳನ್ನು ಪ್ರೋತ್ಸಾಹಿಸಲು ಡೆಸ್ಕ್ ವಿತರಿಸುತ್ತಿರುವುದು ಹೆಮ್ಮೆಯ ವಿಷಯ ಹಾಗೂ ನಿಜಕ್ಕೂ ಶ್ಲಾಘನೀಯ. ವಿದ್ಯಾರ್ಥಿಗಳು ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿಕೊಳ್ಳದೇ ಓದಿನ ಕಡೆಗೆ ಹೆಚ್ಚಿನ ಗಮನ ಕೊಟ್ಟು ಗಣನೀಯ ಸಾಧನೆ ಮಾಡಬೇಕು. ಕಲಿತ ಶಾಲೆಗೆ ಮತ್ತು ತಂದೆ- ತಾಯಿಗಳಿಗೆ ಹೆಮ್ಮೆಯ ಮಕ್ಕಳಾಗಿ ಬೆಳೆಯಬೇಕು ಎಂದರು. ವಿದ್ಯೆ ಎಂಬುದು ಮಾನವನ ಜೀವನದಲ್ಲಿ ಅಮೂಲ್ಯವಾದ ಸಂಪತ್ತು. ಮಕ್ಕಳು ಈ ಸಂಪತ್ತನ್ನು ತುಂಬಾ ಶ್ರದ್ಧೆಯಿಂದ ನಿರಂತರವಾದ ಪರಿಶ್ರಮದೊಂದಿಗೆ ಸಂಪಾದಿಸಿಕೊಂಡು ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು ಬದುಕಿದರೆ ಸುಸಂಸ್ಕೃತವಾದ ಸಮಾಜವನ್ನು ಕಟ್ಟಲು ಸಾಧ್ಯವಾಗುತ್ತದೆ. ಸಾಧನೆ ಸುಲಭ ಮಾರ್ಗವಲ್ಲ, ಅದೊಂದು ಅದ್ಭುತ ತಪಸ್ಸು. ಸಾಧನೆ ಮಾಡುವ ಹಾದಿಯಲ್ಲಿ ಬರುವ ಎಲ್ಲ ಸಮಸ್ಯೆಗಳನ್ನು ಮೆಟ್ಟಿ ನಿಂತು ಯಶಸ್ಸು ಪಡೆದು ಸನ್ಮಾರ್ಗದ ಬದುಕಿನಲ್ಲಿ ವಿದ್ಯಾರ್ಥಿಗಳು ನಡೆಯಬೇಕಾದ ಅಗತ್ಯತೆ ಇದೆ ಎಂದರು.ಸೆರೆಂಟಿಕಾ ಸಂಸ್ಥೆ ಸಿಇಒ ಬಾಲಕೃಷ್ಣನ್, ಎವಿಪಿ ವಿಜೇಶ ಮಾನಕರ, ವಿ.ಪಿ. ಇರ್ಷಾದ್ ಅಲಿ, ತಹಸೀಲ್ದಾರ್ ಕೆ. ರಾಘವೇಂದ್ರರಾವ, ಬಿಇಒ ಎಚ್. ನಾಣಿಕಿ ನಾಯ್ಕ, ಸುನೀಲ ಮಹಾಂತಶೆಟ್ಟರ, ಜಾನು ಲಮಾಣಿ, ಬಿ.ಡಿ. ಪಲ್ಲೇದ, ತಿಮ್ಮರೆಡ್ಡಿ ಮರಡ್ಡಿ, ಶಿವನಗೌಡ ಪಾಟೀಲ, ಮೋಹನ ಗುತ್ತೆಮ್ಮನವರ, ಶಂಕರ ಮರಾಠೆ, ಮಹೇಶ್ ಬಡ್ನಿ ಮಾತನಾಡಿದರು.ಬಸರಡ್ಡಿ ಅಳವಂಡಿ, ಕೊಟ್ರೇಶಪ್ಪ ಸಜ್ಜನರ, ಗಂಗಾಧರ ಮೆಣಸಿನಕಾಯಿ, ವಿನಾಯಕ್ ಅಳವಂಡಿ, ರಮೇಶ ಸಂಶಿ, ಅಶೋಕ ಭಾವನೂರ, ಮಹಾದೇವ ಕಲ್ಲವಡ್ಡರ, ರಾಘವೇಂದ್ರ ಗುತ್ತೆಮ್ಮನವರ, ರಾಘವೇಂದ್ರ ಬಡಿಗೇರ, ರಮೇಶ ರಿತ್ತಿ, ನವೀನ ಅಳವಂಡಿ, ಮಂಜುನಾಥ ಕೊಕ್ಕರಗುಂದಿ, ಮಹಾಲಿಂಗೇಶ ಮೇಗಲಮನಿ, ವೆಂಕಟೇಶ ಜಿ., ಈಶ್ವರ ಮೆಡ್ಲೇರಿ, ಮಹೇಂದ್ರ ಚವ್ಹಾಣ, ಮಹಾಲಿಂಗೇಶ ಹಿರೇಮಠ, ಪರಶುರಾಮ ಗೋಪಾಲಿ, ನೀಲಪ್ಪ ಕಲ್ಲೂರ ಇತರರು ಇದ್ದರು.