ಇ- ಖಾತಾ ಮಾಡಿಸಲು ಮಧ್ಯವರ್ತಿಗಳ ಮೊರೆ ಹೋಗಬೇಡಿ: ಶಾಸಕ ಶ್ರೀನಿವಾಸ ಮಾನೆ

KannadaprabhaNewsNetwork | Published : Mar 12, 2025 12:46 AM

ನಗರ ವ್ಯಾಪ್ತಿಯಲ್ಲಿ ನಿವೇಶನ, ಮನೆಯ ಆಸ್ತಿಗಳನ್ನು ಹೊಂದಿರುವರು ದಾಖಲೆ ಸಮೇತ ಪುರಸಭೆ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಿದರೆ ಕೂಡಲೇ ಇ- ಖಾತಾ ಮಾಡಿಕೊಡುವ ವ್ಯವಸ್ಥೆ ಕಲ್ಪಿಸಲಾಗಿದೆ.

ಹಾನಗಲ್ಲ: ರಾಜ್ಯ ಸರ್ಕಾರ ಪುರಸಭೆ ವ್ಯಾಪ್ತಿಯಲ್ಲಿನ ಅನಧಿಕೃತ ಸ್ವತ್ತುಗಳಿಗೆ ಖಾತಾ ನೀಡುವ ಸಂಬಂಧ ಕಾಯ್ದೆ ಮತ್ತು ನಿಯಮಗಳಿಗೆ ತಿದ್ದುಪಡಿ ತರುತ್ತಿದ್ದು, ಇದರಿಂದ ಅನಧಿಕೃತ ಸ್ವತ್ತುಗಳ(ಬಿ- ಖಾತಾ) ಮಾಲೀಕರು ತಮ್ಮ ಸ್ವತ್ತಿನ ಕಂದಾಯ ಪಾವತಿಸಿ ಅತ್ಯಂತ ಸರಳ ವಿಧಾನಗಳ ಮೂಲಕ ಇ- ಖಾತಾ ಪಡೆಯಬಹುದು ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.ಇಲ್ಲಿ ಇ- ಖಾತಾ ಅಭಿಯಾನಕ್ಕೆ ಚಾಲನೆ ನೀಡಿದ ಅವರು, ನಗರ ವ್ಯಾಪ್ತಿಯಲ್ಲಿ ನಿವೇಶನ, ಮನೆಯ ಆಸ್ತಿಗಳನ್ನು ಹೊಂದಿರುವರು ದಾಖಲೆ ಸಮೇತ ಪುರಸಭೆ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಿದರೆ ಕೂಡಲೇ ಇ- ಖಾತಾ ಮಾಡಿಕೊಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಅನಧಿಕೃತ ಸ್ವತ್ತುಗಳನ್ನು ಅಧಿಕೃತಗೊಳಿಸಿ ಇ- ಖಾತಾ ಮಾಡಿಕೊಡಬೇಕು ಎನ್ನುವುದು ಬಹಳ ವರ್ಷಗಳ ಬೇಡಿಕೆಯಾಗಿತ್ತು. ಅದನ್ನೀಗ ರಾಜ್ಯ ಸರ್ಕಾರ ಸಾಕಾರಗೊಳಿಸಿದೆ. ಸಾರ್ವಜನಿಕರು ಈ ಅಭಿಯಾನದ ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.ಮೂರು ತಿಂಗಳ ಕಾಲ ಇ- ಖಾತೆ ಅಭಿಯಾನ ನಡೆಯಲಿದೆ. ಖಾತೆ ಮಾಡಿಸಿಕೊಳ್ಳಲು ಮಧ್ಯವರ್ತಿಗಳ ಮೊರೆ ಹೋಗಬೇಡಿ. ನೇರವಾಗಿ ಪುರಸಭೆ ಕಚೇರಿಗೆ ತೆರಳಿ ದಾಖಲೆ ಒದಗಿಸಿ ಇ- ಖಾತೆ ಪಡೆದುಕೊಳ್ಳಿ ಎಂದು ಶಾಸಕ ಮಾನೆ ಮನವಿ ಮಾಡಿದರು.ಪುರಸಭೆ ಮುಖ್ಯಾಧಿಕಾರಿ ಜಗದೀಶ ವೈ.ಕೆ. ಮಾತನಾಡಿ, ಸ್ವತ್ತಿನ ಮಾಲೀಕರು ಪುರಸಭೆಗೆ ಭೇಟಿ ನೀಡಿ, ಸ್ವತ್ತಿನ ಮಾಲೀಕತ್ವದ ದಾಖಲೆಗಳಾದ ನೋಂದಾಯಿತ ಪತ್ರಗಳು, ಚಾಲ್ತಿ ಸಾಲಿನವರೆಗೆ ಕಂದಾಯ ಪಾವತಿ ರಶೀದಿ, ಋಣಭಾರ ಪ್ರಮಾಣ ಪತ್ರ, ಮಾಲೀಕರ ಫೋಟೊ, ಆಧಾರ್ ಕಾರ್ಡ್ ಸಲ್ಲಿಸಿ ಇ- ಖಾತಾ ಪಡೆದುಕೊಳ್ಳಬಹುದು ಎಂದರು.ಪುರಸಭೆ ಅಧ್ಯಕ್ಷ ಪರಶುರಾಮ ಖಂಡೂನವರ, ಉಪಾಧ್ಯಕ್ಷೆ ವೀಣಾ ಗುಡಿ, ಮಾಜಿ ಅಧ್ಯಕ್ಷರಾದ ಖುರ್ಷಿದ್‌ಅಹ್ಮದ್ ಹುಲ್ಲತ್ತಿ, ಮಮತಾ ಆರೆಗೊಪ್ಪ, ಮುಖಂಡರಾದ ರಾಜು ಗುಡಿ, ಶ್ರೀನಿವಾಸ ಭದ್ರಾವತಿ, ಸುರೇಶ ನಾಗಣ್ಣನವರ, ಉಮೇಶ ಮಾಳಗಿ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಆಡಳಿತ ಪಕ್ಷದವರು ಠರಾವು ತಿರುಚಿದ್ದಾರೆ: ಆರೋಪ

ರಾಣಿಬೆನ್ನೂರು: ಕಳೆದ ತಿಂಗಳು 20ರಂದು ನಡೆದ ಸಾಮಾನ್ಯ ಸಭೆಯಲ್ಲಿ ನಡೆದ ಚರ್ಚೆಗಳನ್ನು ಆಡಳಿತ ಪಕ್ಷದವರು ತಿರುಚಿ ಠರಾವು ಬರೆದಿದ್ದಾರೆ ಎಂದು ನಗರಸಭೆ ಸದಸ್ಯ ಪ್ರಕಾಶ ಬುರಡಿಕಟ್ಟಿ ಆರೋಪಿಸಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದಿನ ಸಭೆಯಲ್ಲಿ ಸುಮಾರು 88 ವಿಷಯಗಳ ಬಗ್ಗೆ ಚರ್ಚೆಯಾಯಿತು. ಅಜೆಂಡಾದಲ್ಲಿನ ಮೊದಲ ವಿಷಯ ಕುರಿತು ನಾವು ಆಕ್ಷೇಪ ವ್ಯಕ್ತಪಡಿಸಿದ್ದೇವು. ಆದರೆ ಠರಾವಿನಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ ಎಂದು ಬರೆದಿದ್ದಾರೆ.

37 ವಿಷಯಗಳಿಗೆ ವಿರೋಧಿಸಿದ್ದರೂ ಉಪಸೂಚನೆ ಮಂಡಿಸಿರಲಿಲ್ಲ. ಇದನ್ನೇ ದುರ್ಬಳಕೆ ಮಾಡಿಕೊಂಡು ಅವುಗಳಿಗೆಲ್ಲ ಸರ್ವಾನುಮತದಿಂದ ಅಂಗೀಕಾರ ಎಂದು ಬರೆಯಲಾಗಿದೆ. ಇನ್ನೂ ಸ್ಥಾಯಿ ಸಮಿತಿ ರಚನೆ ವಿಷಯದಲ್ಲಿ ಮೊದಲಿಗೆ ಆಡಳಿತ ಪಕ್ಷದವರು ವಿಷಯ ಮಂಡನೆ ಮಾಡಿದ್ದರೂ ಸಂಖ್ಯಾಬಲ ಕಡಿಮೆಯಿರುವುದು ಮನದಟ್ಟಾದ ಮೇಲೆ ಅಧ್ಯಕ್ಷರು ಸಭೆಯನ್ನು ಮೂರು ದಿನಗಳಿಗೆ ಮುಂದೂಡಿದರು.ಇದಾದ ಮೇಲೆ ಮಾ. 4ರಂದು ಸಭೆ ಕರೆಯಲಾಗಿತ್ತು. ಆದರೆ ಅದನ್ನು ಕೂಡ ಮುಂದಕ್ಕೆ ಹಾಕಿ ಇದೀಗ ಮಾ. 14ಕ್ಕೆ ಸಭೆ ಕರೆದಿದ್ದಾರೆ. ಫೆ. 20ರಂದು ನಡೆದ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷದವರಿಂದ ಪೌರಾಡಳಿತ ಕಾಯ್ದೆ ಪ್ರಕಾರ ಉಲ್ಲಂಘನೆ ಆಗಿರುವ ಕುರಿತು ವಿಡಿಯೋ ಹಾಗೂ ಠರಾವು ಸೇರಿದಂತೆ ದಾಖಲಾತಿಗಳ ಸಮೇತ ಈಗಾಗಲೇ ಪೌರಾಡಳಿತ ಇಲಾಖೆ ನಿರ್ದೇಶಕರಿಗೆ, ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೇವೆ. ಇದರ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ನಗರಸಭೆ ಸದಸ್ಯರಾದ ಪ್ರಕಾಶ ಪೂಜಾರ, ಪಾಂಡುರಂಗ ಗಂಗಾವತಿ, ಹನುಮಂತಪ್ಪ ಹೆದ್ದೇರಿ, ರೂಪಾ ಚಿನ್ನಿಕಟ್ಟಿ, ಮಂಜುಳಾ ಹತ್ತಿ, ಪ್ರಭಾವತಿ ತಿಳವಳ್ಳಿ, ಗಂಗಮ್ಮ ಹಾವನೂರ, ಸಿದ್ದಪ್ಪ ಬಾಗಿಲವರ, ಕವಿತಾ ಹೆದ್ದೇರಿ, ರತ್ನವ್ವ ಪೂಜಾರ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.