ಕನ್ನಡಪ್ರಭ ವಾರ್ತೆ ತುಮಕೂರು
ನೋಟ್ ಬುಕ್ನ್ನು ಸದುಪಯೋಗ ಮಾಡಿಕೊಂಡು ಸಾಧಕರಾಗಿ ಹೊರಹೊಮ್ಮಿದಾಗ ಆ ದಾನ ಸಾರ್ಥಕತೆ ಪಡೆದುಕೊಳ್ಳುತ್ತದೆ. ಮಕ್ಕಳು ಭವಿಷ್ಯವನ್ನು ಉತ್ತಮವಾಗಿಸಿಕೊಳ್ಳಬೇಕು ಎಂದು ಸಿದ್ದಗಂಗಾ ಮಠದ ಕಿರಿಯ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಹೇಳಿದರು.ಇಲ್ಲಿಯ ಶ್ರೀ ಕ್ಷೇತ್ರ ಸಿದ್ಧಗಂಗಾ ಮಠದಲ್ಲಿ ಮಂಗಳವಾರ ಪೈ ಫೌಂಡೇಷನ್ ವತಿಯಿಂದ 18ನೇ ವರ್ಷದ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ13 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸಿ ಮಾಡಿ ಮಾತನಾಡಿದರು.
ಮಹಾಭಾರತದಲ್ಲಿ ಕೃಷ್ಣ ಮಾರುವೇಷದಲ್ಲಿ ಬಂದು ಕರ್ಣನಿಗೆ ತೈಲದ ತಂಬಿಗೆಯನ್ನು ಕೊಡುವಂತೆ ದಾನ ಕೇಳುತ್ತಾನೆ. ಕರ್ಣ ಎಡಗೈನಲ್ಲೇ ದಾನ ಕೊಡುತ್ತಾನೆ. ಅದಕ್ಕೆ ಕೃಷ್ಣ ಎಡಗೈಯಲ್ಲಿ ದಾನ ಕೊಟ್ಟೆ. ನಿನ್ನ ದಾನ ಶ್ರೇಷ್ಠ ಆಗಲಿಲ್ಲ ಎನ್ನುತ್ತಾನೆ. ಅದಕ್ಕೆ ಕರ್ಣ ಹೇಳುತ್ತಾನೆ ಇಲ್ಲ ಸ್ವಾಮಿ ನಾನು ಕೊಡುವ ದಾನವನ್ನು ಎಡಗೈಯಿಂದ ಬಲಗೈಗೆ ತೆಗೆದುಕೊಳ್ಳುವಷ್ಟರಲ್ಲಿ ಮನಸ್ಸು ಬದಲಾದರೆ ದಾನ ಕೊಡುವುದನ್ನು ಮರೆತುಬಿಟ್ಟೇನು ಎನ್ನುವ ಕಾರಣಕ್ಕೆ ಎಡಗೈನಲ್ಲೇ ದಾನ ಕೊಟ್ಟೆ. ಎಡಗೈನಲ್ಲಿ ಕೊಟ್ಟ ದಾನ ಬಲಗೈಗೆ ಗೊತ್ತಾಗಬಾರದು ಎಂಬ ಕಾರಣಕ್ಕೆ ಅಂತ ಹೇಳುತ್ತಾನೆ ಕರ್ಣ. ಇದು ದಾನದ ಮಹತ್ವವಾಗಿದ್ದು, ನಾವು ದಾನ ಕೊಟ್ಟರೆ ಅದು ಎಷ್ಟು ಸದುಪಯೋಗ ಆಗಬೇಕು ಅಂತಾ ದ.ರಾ.ಬೇಂದ್ರೆ ಸಹ ದಾನದ ಮಹತ್ವ ಹೇಳುತ್ತಾರೆ ಎಂದು ಮಾಹಿತಿ ನೀಡಿದರು.ಫೈ ಫೌಂಡೇಷನ್ ಫೌಂಡರ್ ಎಸ್. ರಾಜಕುಮಾರ ಪೈ ಮಾತನಾಡಿ, ನಾವು ಎಲೆಕ್ಟ್ರಾನಿಕ್ ವ್ಯವಹಾರದಲ್ಲಿ 124 ವರ್ಷದಿಂದ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶದಲ್ಲಿ ಸೇವೆ ನೀಡುತ್ತಿದ್ದೇವೆ. ಮಲ್ಟಿಬ್ರ್ಯಾಂಡ್ ಸ್ಟೋರ್ 90, ಮೊಬೈಲ್ ಸ್ಟೋರ್ 110, ಫರ್ನಿಚರ್ ಸ್ಟೋರ್ 116 ಸ್ಟೋರ್ಗಳಿದ್ದು, ಎಲ್ಲಾ ಕಡೆ ಉತ್ತಮ ಗುಣಮಟ್ಟದ ಸೇವೆ ಕೊಡುತ್ತಿದ್ದೇವೆ. ಇದರ ಜತೆಗೆ ಸಮಾಜಮುಖಿ ಕಾರ್ಯಕ್ರಮಗಳನ್ನೂ ಸಹ ಮಾಡಿಕೊಂಡು ಬಂದಿದ್ದೇವೆ ಎಂದು ಹೇಳಿದರು.
ಮಕ್ಕಳು ಚೆನ್ನಾಗಿ ಓದಬೇಕು. ಉತ್ತಮ ಸಾಧಕರಾಗಿ ಬೆಳೆಯಬೇಕು. ಭವಿಷ್ಯದಲ್ಲಿ ಮಕ್ಕಳಿಗೆ ಉತ್ತಮ ಭವಿಷ್ಯವಿದೆ. ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಕೌಶಲ್ಯ ಹೆಚ್ಚಿಸಿಕೊಳ್ಳಬೇಕು. ದೊಡ್ಡವರಾದ ಮೇಲೆ ತಂದೆ, ತಾಯಿಯನ್ನು ಚೆನ್ನಾಗಿ ನೋಡಿಕೊಂಡು ಸಹ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಬೇಕು ಎಂದು ಕಿವಿಮಾತು ಹೇಳಿದರು.ಸಿದ್ದಗಂಗಾ ಮಠದ ಕಿರಿಯ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಮತ್ತು ಫೈ ಫೌಂಡೇಷನ್ ಫೌಂಡರ್, ವ್ಯವಸ್ಥಾಪಕ ನಿರ್ದೇಶಕ ಎಸ್. ರಾಜಕುಮಾರ ಪೈ ವಿದ್ಯಾರ್ಥಿಗಳಿಗೆ ನೋಟ್ಬುಕ್ ವಿತರಣೆ ಮಾಡಿದರು.