ಕನ್ನಡಪ್ರಭ ವಾರ್ತೆ ತಾಳಿಕೋಟೆ
ಜಮೀನುಗಳ ವ್ಯಾಜ್ಯಗಳು ನಡೆದಾಗ ಕಕ್ಷಿದಾರರು ಸಹನೆ ಕಳೆದುಕೊಳ್ಳಬಾರದು. ವ್ಯಾಜ್ಯಗಳ ತೀರ್ಪು ತಡವಾದರೂ ನ್ಯಾಯಯುತವಾಗಿರುತ್ತದೆ. ಆ ತಿರ್ಪು ಬರುವವರೆಗೂ ಎಲ್ಲರೂ ಸಂಯಮದಿಂದ ವರ್ತಿಸಬೇಕಿದ್ದು, ಗ್ರಾಮದಲ್ಲಿ ಅಶಾಂತಿಗೆ ಕಾರಣವಾಗಬಾರದು ಎಂದು ಉಪವಿಭಾಗಾಧಿಕಾರಿ ಗುರುನಾಥ ದಡ್ಡಿ ಹೇಳಿದರು.ರಾಷ್ಟ್ರೀಯ ಅನುಸೂಚಿತ ಪಂಗಡ ಆಯೋಗದ ಸೂಚನೆ ಹಿನ್ನೆಲೆಯಲ್ಲಿ ತಾಲೂಕಿನ ಬೋಳವಾಡ ಗ್ರಾಮದಲ್ಲಿ ನಡೆಸಿದ ಕಕ್ಷಿದಾರರ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ನಡೆದ ಶಾಂತಿ ಪಾಲನಾ ಸಭೆಯಲ್ಲಿ ಅವರು ಮಾತನಾಡಿದರು. ಬೋಳವಾಡ ಗ್ರಾಮದ ನಿವಾಸಿಯಾದ ಹಣಮಂತರಾಯ ವಾಲಿಕಾರ( ನಾಯ್ಕೋಡಿ) ಇವರ ಜಮೀನಿನ ಪಹಣಿಯಲ್ಲಿ ಅವರ ಹೆಸರು ಮೃತ ಎಂದು ಅಧಿಕಾರಿಗಳ ತಪ್ಪಿನಿಂದ ನಮುದಾಗಿದ್ದರಿಂದ ಸಮಸ್ಯೆ ಉದ್ಭವಿಸಿದೆ. ಈ ಕುರಿತು ಈಗಾಗಲೇ ಟ್ರಿಬ್ಯೂನಲ್ದಿಂದ ಹಿಡಿದು ನ್ಯಾಯಾಲಯಗಳಲ್ಲಿ ತೀರ್ಪು ಅವರಂತೆ ಆಗಿದೆ. ಆದರೂ ಪಹಣಿ ತಾಂತ್ರಿಕ ಕಾರಣದಿಂದಾಗಿ ಸಮಸ್ಯೆ ಉಂಟಾಗಿದ್ದು, ಸದರಿ ಪ್ರಕರಣಕ್ಕೆ ಸಂಬಂಧಿಸಿದ ಮಾಳಪ್ಪ ಮುಕುಂದಪ್ಪ ಅಮಲ್ಯಾಳ ಹಾಗೂ ಶಿವಲಿಂಗಯ್ಯ ಡೋಣೂರುಮಠ ಪ್ರತ್ಯೇಕ ರೀಸ್ ನಂಬರಗಳಿಗೆ ಮಾಲೀಕರಾಗಿದ್ದಾರೆ. ಇದರಲ್ಲಿ ೨ನೇ ಕಕ್ಷಿದಾರ ಮಾಳಪ್ಪ ಅಮಲ್ಯಾಳ ಅವರಿಂದ ತನಗೆ ಹಿಂಸೆ ಆಗುತ್ತಿದ್ದು, ಜಮೀನಿನಲ್ಲಿ ಹೋಗಲೂ ಅವಕಾಶ ನೀಡುತ್ತಿಲ್ಲ ಎಂದು ಒಂದನೇ ಪಕ್ಷಗಾರರಾದ ಹನುಮಂತರಾಯ ನಾಯ್ಕೋಡಿ ಅವರು ಜಾತಿ ನಿಂದನೆಯ ಪ್ರಕರಣವನ್ನು ರಾಷ್ಟ್ರೀಯ ಅನುಸೂಚಿತ ಪಂಗಡ ಆಯೋಗಕ್ಕೆ ಸಲ್ಲಿಸಿದ್ದಾರೆ. ಈ ಹಿನ್ನಲೆಯಲ್ಲಿ ಆಯೋಗದ ಹಾಗೂ ಜಿಲ್ಲಾಧಿಕಾರಿಗಳ ಸೂಚನೆಯಂತೆ ಗ್ರಾಮಕ್ಕೆ ಆಗಮಿಸಿ ಮೂವರು ಪಕ್ಷಗಾರರ ಹಾಗೂ ಗ್ರಾಮದ ಗಣ್ಯರ ಸಭೆ ಕರೆದು ಎಲ್ಲ ವಿಷಯಗಳನ್ನು ಕುಲಂಕುಷವಾಗಿ ಚರ್ಚಿಸಿ ಯಾವ ಕಾರಣಕ್ಕೂ ಗ್ರಾಮದಲ್ಲಿ ಅಶಾಂತಿಗೆ ಅವಕಾಶ ನೀಡಂದತೆ ನೋಡಿಕೊಳ್ಳಬೇಕೆಂದು ತಿಳಿ ಹೇಳಿದರು. ಈ ಪ್ರಕರಣ ಸಿವಿಲ್ ಪ್ರಕರಣವಾಗಿರುವುದರಿಂದ ನ್ಯಾಯಾಲಯದ ತೀರ್ಪನ್ನು ನಿರೀಕ್ಷಿಸುವುದು ಅನಿವಾರ್ಯವಾಗಿದೆ, ಯಾರು ತಂಟೆ ತಕರಾರು ಮಾಡದೇ ತಮ್ಮ ತಮ್ಮ ಹಿಸ್ಸೆಗೆ ಬಂದ ಜಮೀನಿನಲ್ಲಿ ಉಳುಮೆ ಮಾಡಬೇಕು. ಆಯೋಗಕ್ಕೆ ರಕ್ಷಣೆಗಾಗಿ ಮನವಿ ಮಾಡಿದ ಪಕ್ಷಗಾರ ಹನುಮಂತ್ರಾಯ ನಾಯ್ಕೋಡಿ ಅವರಿಗೆ ಸರ್ಕಾರ ರಕ್ಷಣೆ ನೀಡಲಿದೆ, ಯಾರಾದರೂ ಅವರ ಮೇಲೆ ದೌರ್ಜನ್ಯ ಎಸಗಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು. ಗ್ರಾಮದಲ್ಲಿನ ಶಾಂತಿ ಮುಖ್ಯವಾಗಿದೆ ಎಂದು ತಿಳಿಸಿದರು.ಸಭೆಯಲ್ಲಿ ಇಂಡಿ ಉಪ ವಿಭಾಗಾಧಿಕಾರಿ ಆಬೀದ ಗದ್ಯಾಳ, ಪಿಡಿಯಸ್ ಡಬ್ಲ್ಯೂ ಪುಂಡಲೀಕ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಜಿ.ಮಠ, ತಾಪಂ ಸಹಾಯಕ ನಿರ್ದೇಶಕಿ ಸುಜಾತ ಯಡ್ರಾಮಿ, ಪಿಎಸ್ಐ ಆರ್.ಎಸ್.ಭಂಗಿ, ಪಿಡಿಒ ಪ್ರಭು ಚಬನೂರ, ಗ್ರಾಮ ಆಡಳಿತಾಧಿಕಾರಿ ಎಸ್.ಎಸ್.ಅಂಗಡಿ, ಗ್ರಾಮ ಲೆಕ್ಕಿಗ ಸದಾನಂದ ಮಾದರ, ಸರ್ವೆಯರ್ ಪ್ರಕಾಶ, ಹವಾಲ್ದಾರ್ ಬಿ.ಜಿ.ಹಡಗಲಿ, ಕಂದಾಯ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಮತ್ತು ಗ್ರಾಮಸ್ಥರು ಇದ್ದರು.